KRS DAM: ತಮಿಳುನಾಡಿಗೆ ಕೆಆರ್ಎಸ್ ನೀರು, ಇಂದು ಸುಪ್ರೀಂ ವಿಚಾರಣೆ!
ನವದೆಹಲಿ: ಕಾವೇರಿ ವಿಚಾರಕ್ಕೆ ತಮಿಳುನಾಡು ಮತ್ತು ಕರ್ನಾಟಕ ನಡುವೆ ಕಿರಿಕ್ ಇನ್ನೂ ಜೋರಾಗಿದ್ದು, ಇಂದಿನಿಂದ ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಕಾವೇರಿ ನದಿ ನೀರು ಹರಿಸಲು ನಿರ್ದೇಶನ ನೀಡಲು ಕೋರಿ, ಕರ್ನಾಟಕದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದಿನಿಂದ ಕೈಗೆತ್ತಿಕೊಳ್ಳಲಿದೆ.
5-6 ವರ್ಷದಿಂದ ಕಾವೇರಿ ನದಿ ನೀರಿನ ಕಿತ್ತಾಟ ಸೈಲೆಂಟ್ ಆಗಿತ್ತು. ಯಾಕಂದ್ರೆ ಸಾಕಷ್ಟು ಪ್ರಮಾಣದಲ್ಲಿ ಕಾವೇರಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಿತ್ತು. ಭಾರಿ ಮಳೆಯ ಹಿನ್ನೆಲೆ ಉತ್ತಮವಾಗಿ ನೀರು ಬಂದಿತ್ತು. ಹೀಗಾಗಿ ಕರ್ನಾಟಕ ಕೂಡ ನೀರನ್ನು ಹರಿಸಿತ್ತು. ಆದರೆ ಈಗ ಬರ ಎದುರಾಗಿರುವ ಸಂದರ್ಭದಲ್ಲೇ ಕಿರಿಕ್ ಶುರುವಾಗಿದೆ. ಅಲ್ಲದೆ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದೆ. ಹೀಗಾಗಿ ಸಾಕಷ್ಟು ಗೊಂದಲ ಏರ್ಪಟ್ಟಿದ್ದು ಇಂದಿನಿಂದ ವಿಚಾರಣೆ ಶುರುವಾಗಲಿದೆ.

ಬರ ಬಂದಾಗ ನೀರು ಹೇಗೆ ಹರಿಸುವುದು?
ಅಂದಹಾಗೆ ನ್ಯಾ. ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ. ಕರ್ನಾಟಕ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ. ಜೂನ್, ಜುಲೈ ನೀರು ಬಾಕಿ ಉಳಿಸಿಕೊಂಡಿದ್ದು, ಆಗಸ್ಟ್ ತಿಂಗಳ ನೀರು ಸೇರ್ಪಡೆಯಾಗಲಿದೆ. ಕರ್ನಾಟಕ ಒಟ್ಟು 36.76 ಟಿಎಂಸಿ ನೀರು ಬಾಕಿ ಉಳಿಸಿಕೊಂಡಿದೆ. ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಸೂಚನೆ ಬಳಿಕವೂ ಸಮರ್ಪಕ ನೀರು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದೆ ತಮಿಳುನಾಡು. ಆದರೆ ನಮ್ಮಲ್ಲೇ ನೀರು ಇಲ್ಲದೆ, ಕರ್ನಾಟಕದ ಡ್ಯಾಂಗಳು ಬತ್ತಿ ಹೋದ ವೇಳೆ, ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನ ಕರ್ನಾಟಕವು ಮುಂದಿಟ್ಟಿದೆ.
ಮತ್ತೊಂದ್ಕಡೆ ತಮಿಳುನಾಡು ಸಲ್ಲಿಸಿದ ಅರ್ಜಿಗೆ ಕರ್ನಾಟಕ ಕೂಡ ಟಾಂಗ್ ಕೊಡುತ್ತಿದ್ದು, ತಮಿಳುನಾಡು ಅರ್ಜಿಗೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಿದೆ. ಕಾವೇರಿ ನ್ಯಾಯಧಿಕರಣ ಆದೇಶ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಕುರುವೈ ಬೆಳೆ ಬೆಳೆದ ತಮಿಳುನಾಡು, ಅದಕ್ಕೆ ನೀರು ಒದಗಿಸಲು ಕರ್ನಾಟಕದ ಮೇಲೆ ಒತ್ತಡ ಹೇರುತ್ತಿದೆ. ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ಸಂದರ್ಭ, ಈ ರೀತಿ ಕಿತ್ತಾಟ ಶುರು ಮಾಡಿದೆ. ಈ ಅವಧಿಯಲ್ಲಿ ತಮಿಳುನಾಡು ಸಾಮಾನ್ಯ ಜಲ ವರ್ಷದ ನೀರಿನ ಪಾಲು ಕೇಳುತ್ತಿದೆ ಎಂದು ಕರ್ನಾಟಕ ಕೂಡ ಆರೋಪಿಸಿದೆ.

ಹೆಚ್ಚುವರಿ ನೀರನ್ನು ಏನು ಮಾಡಿದ್ರು?
ಕಳೆದ ವರ್ಷವೇ ತಮಿಳುನಾಡು ಮೂಲಕ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿದೆ. ಮುಂಗಾರು ಅಬ್ಬರದ ಕಾರಣ ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು. 62 ವರ್ಷದ ನಂತರ ಇಷ್ಟು ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿದ್ದು, ಗಮನ ಸೆಳೆದಿತ್ತು. 1961ರಲ್ಲಿ 321 ಟಿಎಂಸಿ ನೀರನ್ನ ಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೆಲ್ಲ ನೀರನ್ನ ಅಲ್ಲಿ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿ ಬೇಕು ಅಂತಾ ತಮಿಳುನಾಡು ಕಿರಿಕ್ ಶುರುಮಾಡುತ್ತಿದೆ.
ಒಟ್ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಮತ್ತೊಮ್ಮೆ ಕಾವೇರಿ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಈ ಬಾರಿ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಕಿತ್ತಾಟ ಕೂಡ ನಡೆಯುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಕರ್ನಾಟಕ ಕೂಡ ಕಾನೂನು ಹೋರಾಟಕ್ಕಾಗಿ ಸಕಲ ಸಿದ್ಧತೆ ನಡೆಸಿದೆ. ಹೊಂದಾಣಿಕೆ ಮಾಡಿಕೊಂಡು ಬದುಕಬೇಕಿದ್ದ ದಕ್ಷಿಣ ಭಾರತದ ಎರಡು ರಾಜ್ಯಗಳು, ಪದೇ ಪದೆ ಹೀಗೆ ಕಾವೇರಿ ನೀರಿನ ವಿಚಾರದಲ್ಲಿ ವಾಸ್ತವ ಅರಿಯದೇ ಕಿರಿಕ್ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಕರ್ನಾಟಕವೂ ತಮಿಳುನಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಎರಡೂ ರಾಜ್ಯಗಳ ಸಮಸ್ಯೆಗೆ ಅಂತ್ಯ ಹಾಡಲು ಈಗ ಸುಪ್ರೀಂ ಮುಂದಾಗಿದೆ. ಆದರೆ ಇಲ್ಲಾದರೂ ಸಮಸ್ಯೆ ಬಗೆಹರಿಯುತ್ತಾ? ಕಾದು ನೋಡಬೇಕು.












Click it and Unblock the Notifications