ಅನರ್ಹ ಶಾಸಕರಿಗೆ ನಿರಾಸೆ ಮೂಡಿಸಿದ ಸುಪ್ರೀಂಕೋರ್ಟ್
Recommended Video
ಬೆಂಗಳೂರು, ಸೆಪ್ಟೆಂಬರ್ 11 : ಕರ್ನಾಟಕದ 17 ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ನಿರಾಸೆ ಮೂಡಿಸಿದೆ. ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಮುಂದೂಡಲಾಗುತ್ತಿದೆ.
ಸೆ. 11ರ ಬುಧವಾರ 14 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು. ನ್ಯಾಯಮೂರ್ತಿಗಳಾದ ಎನ್. ವಿ. ರಮಣ, ಅಜಯ್ ರಸ್ತೋಗಿ ಪೀಠದಲ್ಲಿ ವಿಚಾರಣೆ ನಡೆಯಬೇಕಿತ್ತು.
ಆದರೆ, ಮಂಗಳವಾರ ಸಂಜೆ ಪ್ರಕರಣಗಳ ಲಿಸ್ಟ್ ಹಾಕುವಾಗ ಅನರ್ಹ ಶಾಸಕರ ಅರ್ಜಿಯ ವಿಚಾರಣೆಯನ್ನು ಸೆ. 17ಕ್ಕೆ ಮುಂದೂಡಲಾಗಿದೆ. ಬುಧವಾರ ತಮ್ಮ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಕಾದಿದ್ದ ಶಾಸಕರಿಗೆ ನಿರಾಸೆಯಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದ ಶಾಸಕರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಪೀಕರ್ ರಮೇಶ್ ಕುಮಾರ್ಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ರಮೇಶ್ ಕುಮಾರ್ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು.

14 ಕಾಂಗ್ರೆಸ್, 3 ಜೆಡಿಎಸ್ ಶಾಸಕರು
ಸ್ಪೀಕರ್ ರಮೇಶ್ ಕುಮಾರ್ ಶ್ರೀಮಂತ ಪಾಟೀಲ್ (ಕಾಗವಾಡ), ರಮೇಶ್ ಜಾರಕಿಹೊಳಿ (ಗೋಕಾಕ್), ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), ಎಚ್. ವಿಶ್ವನಾಥ್ (ಹುಣಸೂರು), ಆರ್. ಶಂಕರ್ (ರಾಣೆಬೆನ್ನೂರು), ಆನಂದ್ ಸಿಂಗ್ (ವಿಜಯನಗರ), ಎಂಟಿಬಿ ನಾಗರಾಜ್ (ಹೊಸಕೋಟೆ), ರೋಷನ್ ಬೇಗ್ (ಶಿವಾಜಿನಗರ).
ಮುನಿರತ್ನ (ಆರ್. ಆರ್. ನಗರ), ಎಸ್. ಟಿ. ಸೋಮಶೇಖರ್ (ಯಶವಂತಪುರ), ಬೈರತಿ ಬಸವರಾಜ (ಕೆ. ಆರ್. ಪುರಂ), ಕೆ. ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ಕೆ. ನಾರಾಯಣ ಗೌಡ (ಕೆ. ಆರ್. ಪೇಟೆ), ಬಿ. ಸಿ. ಪಾಟೀಲ್ (ಹಿರೇಕೆರೂರು), ಮಹೇಶ್ ಕಮಟಳ್ಳಿ (ಅಥಣಿ), ಶಿವರಾಂ ಹೆಬ್ಬಾರ್ (ಯಲ್ಲಾಪುರ) ಶಾಸಕರನ್ನು ಅನರ್ಹಗೊಳಿಸಿದ್ದಾರೆ.

ತುರ್ತು ವಿಚಾರಣೆಗೆ ಒಪ್ಪಿಗೆ ಸಿಕ್ಕಿಲ್ಲ
17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಸುಪ್ರೀಂಕೋರ್ಟ್ಗೆ ಮನವಿ ಮಾಡಲಾಗಿತ್ತು. ಆದರೆ, ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಅಂತಿಮವಾಗಿ ರಿಜಿಸ್ಟ್ರಾರ್ಗೆ ಪ್ರಕರಣವನ್ನು ಲಿಸ್ಟ್ ಮಾಡುವಂತೆ ನ್ಯಾಯಾಲಯ ಸೂಚನೆ ಕೊಟ್ಟಿತ್ತು. ಲಿಸ್ಟ್ ಪ್ರಕಾರ ಸೆ.11ರಂದು ವಿಚಾರಣೆ ನಡೆಯಬೇಕಿತ್ತು.

ಒಂದೂವರೆ ತಿಂಗಳಿಂದ ಕಾದು ಕುಳಿತಿದ್ದಾರೆ
ಜುಲೈ 26 ಮತ್ತು ಆಗಸ್ಟ್ 1ರಂದು ಅನರ್ಹ ಶಾಸರಕರು ಸುಪ್ರೀಂಕೋರ್ಟ್ಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಅಂದಿನಿಂದ ಅರ್ಜಿಯ ವಿಚಾರಣೆ ಬೇಗ ನಡೆಯಲಿ ಎಂದು ಕಾದು ಕುಳಿತಿದ್ದಾರೆ. ಸೆ. 11ರಂದು ನಡೆಯಬೇಕಿದ್ದ ವಿಚಾರಣೆ ಈಗ ಸೆ.17ಕ್ಕೆ ಮುಂದೂಡಲಾಗಿದೆ.

ಸ್ಫೀಕರ್ ಆದೇಶವೇನು?
ಅನರ್ಹಗೊಂಡಿರುವ 17 ಶಾಸಕರು ಯಾವುದೇ ಸಾಂವಿಧಾನಿಕ ಹುದ್ದೆ ಅಲಂಕರಿಸುವಂತಿಲ್ಲ ಮತ್ತು 15ನೇ ವಿಧಾನಸಭೆ ಅವಧಿ (2023) ಮುಗಿಯುವ ತನಕ ಚುನಾವಣಾ ಕಣಕ್ಕಿಳಿಯುವಂತಿಲ್ಲ ಎಂದು ಸ್ಪೀಕರ್ ಆಗಿದ್ದದ ರಮೇಶ್ ಕುಮಾರ್ ಆದೇಶ ನೀಡಿದ್ದಾರೆ. ಈ ಆದೇಶವನ್ನು ಶಾಸಕರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications