ಮಂಗಳವಾರದೊಳಗೆ ಬಿಡಲೇ ಬೇಕು 2 ಟಿಎಂಸಿ ಅಡಿ ನೀರು: ಸುಪ್ರಿಂ
ನವದೆಹಲಿ, ಮೇ 04: ತಮಿಳುನಾಡಿಗೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕರ್ನಾಟಕ ಹರಿಸಬೇಕಿದ್ದ ನೀರಿನ ಪಾಲಿನಲ್ಲಿ 4 ಟಿಎಂಸಿ ಅಡಿ ನೀರನ್ನು ಕೂಡಲೇ ಬಿಡಬೇಕೆಂದು ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಪೀಠ ನಿನ್ನೆ ಆದೇಶ ನೀಡಿದೆ.
ಎರಡು ಟಿಎಂಸಿ ಅಡಿ ನೀರನ್ನು ಮಂಗಳವಾರದ (ಮೇ 8)ರ ಒಳಗಡೆ ಖಡ್ಡಾಯವಾಗಿ ಹರಿಸಲೇಬೇಕು ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಆರೋಪ ಹೊರಲು ಸಿದ್ಧರಾಗಿ ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದೆ.
ನಿನ್ನೆ ಕಾವೇರಿ ಸ್ಕೀಂ ಕುರಿತು ನಡೆದ ವಿಚಾರಣೆ ಸಂದರ್ಭದಲ್ಲಿ ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ಆದೇಶ ನೀಡಿದ್ದು, ಕೇಂದ್ರಕ್ಕೂ ಸಹ ಕಾವೇರಿ ಸ್ಕೀಂ ಕುರಿತಂತೆ ಸರಿಯಾಗಿಯೇ ಛಾಟಿ ಬೀಸಿದೆ.

ಸುಪ್ರಿಂ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಈಗ ನಮ್ಮ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಇಂತಹಾ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಕಷ್ಟವಾಗುತ್ತದೆ. ಸುಪ್ರಿಂ ಸೂಚನೆ ಕುರಿತು ಕಾನೂನು ತಜ್ಞರ ಬಳಿ ಚರ್ಚಿಸುತ್ತೇವೆ ಎಂದಿದ್ದಾರೆ.
ಪ್ರಸ್ತುತ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಇರುವುದು ಕೇವಲ 9.94 ಟಿಎಂಸಿ ಅಡಿ ನೀರಷ್ಟೆ. ಇದರಲ್ಲಿ ಸುಪ್ರಿಂ ಆದೇಶದಂತೆ ಏನಾದರೂ 4 ಟಿಎಂಸಿ ಅಡಿ ನೀರಿ ಬಿಟ್ಟಿದ್ದೇ ಆದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಪ್ರತಿ ಎರಡು ತಿಂಗಳಿಗೆ 3 ಟಿಎಂಸಿ ಅಡಿ ನೀರು ಕುಡಿಯುವ ಉದ್ದೇಶಕ್ಕೇ ಬೇಕಾಗುತ್ತದೆ. ಬಿಸಿಲು ಹೆಚ್ಚಿರುವ ಕಾರಣ ಜೂನ್ ಒಳಗೆ ಒಂದು ಟಿಎಂಸಿ ಅಡಿ ನೀರು ಆವಿಯಾಗಿಬಿಡುತ್ತದೆ. ಪ್ರಸ್ತುತ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಲಭ್ಯವಿರುವ 9.94 ಟಿಎಂಸಿ ಅಡಿ ನೀರನ್ನು ಜೂನ್ ಅಂತ್ಯದವರೆಗೆ ರಾಜ್ಯ ಬಳಸಬಹುದಾಗಿದೆ. ಜೂನ್ನಲ್ಲಿ ಮಳೆ ಆಗದಿದ್ದರೆ ಕುಡಿಯುವ ನೀರಿಗೂ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವ ಸ್ಥಿತಿಯಲ್ಲಿ ರಾಜ್ಯ ಇಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ಹೇಳಿದೆ.












Click it and Unblock the Notifications