ಮಾಗಡಿ ರಂಗನಾಥ ದೇವಾಲಯದ ಅಚ್ಚರಿ ನೋಡಿ
ರಾಮನಗರ, ಮಾ. 30 : ಭಕ್ತಿ ಎಂದರೆ ದೈವ.... ದೈವ ಎಂದರೆ ಭಕ್ತಿ...ಎಂಬ ಮಾತಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಮನೆದೈವ ತಿರುಮಲೆ ರಂಗನ ಸನ್ನಿಧಿಯಲ್ಲೊಂದು ಅಚ್ಚರಿ ಮತ್ತು ವೈಶಿಷ್ಟ್ಯಮಯವಾದ ಸೂರ್ಯನ ಕಿರಣಗಳ ಬೆಳಕಿನ ಚಿತ್ತಾರ ಮೂಡುತ್ತಿದೆ.
ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ತಿರುಮಲ ಶ್ರೀರಂಗನಾಥಸ್ವಾಮಿ ದೇವಾಲಯದ ಹೊರಗಿರುವ ಮರಗಳು, ಧ್ವಜಪಟ ಕಂಭ, ಹೆಬ್ಬಾಗಿಲುಗಳನ್ನು ಬೇಧಿಸಿ ಸೂರ್ಯನ ಕಿರಣಗಳು ರಂಗನಾಥಸ್ವಾಮಿಯ ಪಾದದಿಂದ ಶಿರದವರೆಗೆ ಚುಂಬಿಸುತ್ತಿದೆ. [ಮಾಗಡಿ ರಂಗನಾಥಸ್ವಾಮಿ ಮುಂದೆ ಅರ್ಚಕರ ಕಿತ್ತಾಟ]

ಬೇರೆ ಯಾವ ದೇವಾಲಯಗಳಲ್ಲಿಯೂ ಸೂರ್ಯಾಸ್ತ ಸಮಯದಲ್ಲಿ ದೈವದ ಮೂರ್ತಿಯನ್ನು ಸೂರ್ಯ ರಶ್ಮಿ ಚುಂಬಿಸುವುದಿಲ್ಲ, ಆದರೆ, ಪಶ್ಚಿಮ ವೆಂಕಟಾಚಲಪತಿ ಬಿರುದಾಂಕಿತ ದೇಗುಲದಲ್ಲಿ ಈ ಮಾಸದಲ್ಲಿ ಸೂರ್ಯರಶ್ಮಿಯ ಚಿತ್ತಾರದಿಂದ ತಿರುಮಲೆ ರಂಗನ ಸನ್ನಿಧಿ ಎಲ್ಲರನ್ನು ಆಕರ್ಷಿಸುತ್ತದೆ. [ಮಾಗಡಿ : ಕಿತ್ತಾಡಿಕೊಂಡ ಅರ್ಚಕರಿಗೆ ಅಮಾನತು ಭೀತಿ]
ಮಾಗಡಿ ಪಟ್ಟಣದ ತಿರುಮಲೆಯಲ್ಲಿರುವ ಪಶ್ಚಿಮ ವೆಂಕಟಾಚಲಪತಿ ಬಿರುದಾಂಕಿತ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷವಾಗಿ ಈ ಚೈತ್ರಮಾಸದ ಉತ್ತರಾಯಣಕಾಲದಲ್ಲಿ ವೈಶಿಷ್ಟ್ಯಮಯವಾಗಿ ಸೂರ್ಯನ ಕಿರಣಗಳ ಬೆಳಕಿನ ಚಿತ್ತಾರ ಮೂಡುತ್ತದೆ.
ಪುಣ್ಯ ಪ್ರಾಪ್ತಿಯಾಗುತ್ತದೆ : ಮಾಂಡವ್ಯ ಮಹರ್ಷಿಗಳು ತಪಸ್ಸು ಮಾಡಿ ಈ ದೇವಾಲಯವನ್ನು ಪ್ರತಿಷ್ಠಾಪನೆ ಮಾಡಿದರು ಎಂಬುದು ಇತಿಹಾಸ. ತಿರುಮಲೆ ರಂಗನಾಥಸ್ವಾಮಿ ಭಕ್ತರ ಸಂಕಷ್ಟಗಳನ್ನ ಪರಿಹರಿಸುವ ದೈವ ಎಂಬ ನಂಬಿಕೆ ಇದೆ. ತಿರುಪತಿಗೆ ಹೋಗಲಾಗದವರು ಇಲ್ಲಿ ದೇವರ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಉತ್ತರಾಯಣ ಕಾಲದಲ್ಲಿ ಸೂರ್ಯ ಮುಳುಗುವ ಹೊತ್ತಿನಲ್ಲಿ ಸೂರ್ಯನ ರಶ್ಮಿ ಮೊದಲು ದೇವರ ಮೂರ್ತಿಯ ಶಿರದಮೇಲಿನ ಕಿರೀಟಕ್ಕೆ ಸ್ಪರ್ಶಿಸುತ್ತದೆ. ಮೂರ್ತಿಯ ಮುಂದೆ ಇರುವ ಸಾಲಿಗ್ರಾಮಕ್ಕೆ ಸೂರ್ಯಕಿರಣ ಚುಂಬಿಸುತ್ತಿದೆ. ನಂತರ ನೇರವಾಗಿ ತಿರುಮಲೆ ರಂಗನಾಥಸ್ವಾಮಿ ಮೂರ್ತಿಯ ಮೇಲೆ ಬಿದ್ದು ರಂಗನ ಮೂರ್ತಿ ಚಿನ್ನದಂತೆ ಪ್ರಜ್ವಲಿಸುವಂತೆ ಮಾಡುತ್ತದೆ.












Click it and Unblock the Notifications