ಇಂಧನ ಖಾತೆ ವಿನಿಮಯದ ಬಗ್ಗೆ ಚರ್ಚೆಯೇ ಆಗಿಲ್ಲ: ಪರಮೇಶ್ವರ್
ಬೆಂಗಳೂರು, ಜೂನ್ 06: ಅಸಮಾಧಾನಗೊಂಡವರನ್ನು ರಾಜ್ಯ ನಾಯಕರ ಹಂತ ಹಾಗೂ ಹೈಕಮಾಂಡ್ ಹಂತದಲ್ಲಿ ಸಮಾಧಾನ ಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ 78 ಶಾಸಕರೂ ಕೂಡ ಸಚಿವ ಸ್ಥಾನಕ್ಕೆ ಅರ್ಹರೇ ಆದರೆ ಸಚಿವರನ್ನಾಗಿ ಮಾಡಲು ಅವಕಾಶ ಇರುವುದು 22 ಶಾಸಕರನ್ನು ಮಾತ್ರ ಎಂದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪಟ್ಟಿ
ಕಾಂಗ್ರೆಸ್ ಪಕ್ಷವು 6 ಸಚಿವ ಸ್ಥಾನಗಳನ್ನು ಅತೃಪ್ತರಿಗೆಂದೇ ಖಾಲಿ ಇಟ್ಟಿದೆ. ಜೆಡಿಎಸ್ 1 ಸ್ಥಾನವನ್ನು ಖಾಲಿ ಇಟ್ಟಿದೆ. ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಗಳನ್ನು ನೋಡಿಕೊಂಡು ಆ ಸ್ಥಾನಗಳನ್ನು ತುಂಬಲಾಗವುದು ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಚರ್ಚೆಯ ಮೂಲಕವೇ ನಿರ್ಣಯಗಳು ಆಗುವ ಕಾರಣ ಸಂಪುಟ ವಿಸ್ತರಣೆಗೆ ಸ್ವಲ್ಪ ಸಮಯ ಹಿಡಿದಿದೆ. ಆದರೆ ಖಾತೆ ಹಂಚಿಕೆ ತಡವಾಗುವುದಿಲ್ಲ, ಇಂದು ಅಥವಾ ನಾಳೆ ಎಲ್ಲ ಸಚಿವರಿಗೂ ಖಾತೆ ಹಂಚಿಕೆ ಆಗುತ್ತದೆ ಎಂದು ಭರವಸೆ ನೀಡಿದರು.
ಸಂಪುಟ ವಿಸ್ತರಣೆ ಸಮಯ ಅಸಮಾಧಾನ ಸಾಮಾನ್ಯ: ಕುಮಾರಸ್ವಾಮಿ
ವಿವಾದಿತ ಇಂಧನ ಖಾತೆ ಬದಲಾವಣೆ ಬಗ್ಗೆ ಚರ್ಚೆಯೇ ಆಗಿಲ್ಲ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು ಎಂದು ಬೇಸರಪಟ್ಟರು.