ಸರ್ಕಾರಿ ಕಟ್ಟಡಗಳಲ್ಲಿ ಮಳೆಕೊಯ್ಲು ಅಳವಡಿಕೆ ಕಡ್ಡಾಯಕ್ಕೆ ಚಿಂತನೆ
ಬೆಂಗಳೂರು, ಮೇ 18: ಯಾವುದೇ ಸರ್ಕಾರಿ ಕಟ್ಟಡಗಳ ನಿರ್ಮಾಣ ಸಮಯದಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಕೆ ಮತ್ತು ಗಿಡ ನೆಡುವುದನ್ನು ಕಡ್ಡಾಯ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಇಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಟ್ಟಡ ನಿರ್ಮಾಣದ ಅಂದಾಜು ವೆಚ್ಚ ತಯಾರಿಸುವ ಸಮಯದಲ್ಲಿಯೇ ಮಳೆ ಕೊಯ್ಲು ಪದ್ಧತಿ ಮತ್ತು ಗಿಡ ನೆಡುವವುದನ್ನು ಸೇರಿಸಿ ಕಾರ್ಯಯೋಜನೆ ಪಟ್ಟಿ ತಯಾರಿಸಲು ಸೂಚಿಸಲಾಗುವುದು ಎಂದು ಹೇಳಿದರು.
ಜಲಾಮೃತ, ಜಲವರ್ಷ ಅಭಿಯಾನದ ಅಡಿಯಲ್ಲಿ ಜೂನ್ 11ರಂದು ಒಂದೇ ದಿನ ಕನಿಷ್ಟ 30 ಲಕ್ಷ ಸಸಿಗಳನ್ನು ಸರ್ಕಾರದ ವತಿಯಿಂದ ನೆಡಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.

ಜಲಾಮೃತ, ಜಲವರ್ಷ ಅಭಿಯಾನದಡಿ, ಜಲಸಾಕ್ಷರತೆ, ಜಲಸಂರಕ್ಷಣೆ, ಜಲಪ್ರಜ್ಞಾವಂತ ಬಳಕೆ, ಹಸಿರೀಕರಣ, ಆದ್ಯತೆಯಾಗಿದ್ದು ಜೂನ್ 11ರಂದು ಸಾರ್ವಜನಿಕರು ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿ ಸದಸ್ಯರನ್ನು ಸೇರಿಸಿ ರಾಜ್ಯಾದ್ಯಂತ ಕನಿಷ್ಟ 30 ಲಕ್ಷ ಸಸಿ ನೆಡಲು ತೀರ್ಮಾನಿಸಲಾಗಿದೆ ಎಂದರು.
ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಮೂಲಕ ಸುಮಾರು 2ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುಮಾರು 500ಕೋಟಿ ರೂ. ವೆಚ್ಚದಲ್ಲಿ 20ಸಾವಿರ ಚೆಕ್ ಡ್ಯಾಂ, 14 ಸಾವಿರ ಸಣ್ಣಪುಟ್ಟ ಜಲತಾಣಗಳನ್ನು ಪುರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ. ರಸ್ತೆ ಬದಿಗಳಲ್ಲಿ ಗಿಡ ನೆಡುವುದು ಕಡ್ಡಾಯವಾಗಿ ಅಂದಾಜು ಪಟ್ಟಿಯಲ್ಲಿ ಅಳವಡಿಸಿ ಅನುಷ್ಟಾನಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.












Click it and Unblock the Notifications