ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ಬರೆ ಕೊಟ್ಟ ರಾಜ್ಯ ಸರ್ಕಾರ!
ಬೆಂಗಳೂರು, ಜನವರಿ 21: ಕಳೆದ ವರ್ಷ ಕರ್ನಾಟಕದಲ್ಲಿ ಸಂಭವಿಸಿದ್ದ ಜಲ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಆಘಾತ ನೀಡಿದೆ.
ಭೀಕರ ನೆರೆಗೆ ತುತ್ತಾಗಿ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರುಪಾಯಿ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ, ನೆರವು ಪಡೆಯಲು ಹೊರಡಿಸಿದ್ದ ಆದೇಶದಲ್ಲಿ ಮಾರ್ಪಾಡು ಮಾಡಿ ಹೊಸ ಆದೇಶ ಹೊರಡಿಸಿದೆ.
ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹಂತ ಹಂತವಾಗಿ 5 ಲಕ್ಷ ರುಪಾಯಿ ಕೊಡಲಾಗುತ್ತದೆ. ಆದರೆ, ಭಾಗಶಃ ಮನೆ ಕಳೆದುಕೊಂಡು, ಅದಷ್ಟೇ ಮನೆ ಕಟ್ಟಿಕೊಳ್ಳುವವರಿಗೆ 5 ಲಕ್ಷದ ಬದಲಾಗಿ 3 ಲಕ್ಷ ರುಪಾಯಿಯನ್ನು ಹಂತ ಹಂತವಾಗಿ ಕೊಡಲಾಗುತ್ತದೆ ಎಂದು ಸರ್ಕಾರದ ಹೊಸ ಆದೇಶ ಹೇಳಿದೆ.

ನೆರೆಗೆ ತುತ್ತಾಗಿ ಬಿದ್ದು/ಹಾಳಾಗಿ ಹೋಗಿದ್ದ ಮನೆಗಳನ್ನು 'ಎ' 'ಬಿ' 'ಸಿ' ಕೆಟಗರಿಗಳಾಗಿ ವಿಂಗಡಿಸಲಾಗಿತ್ತು. 'ಎ' ಕೆಟಗರಿಯಲ್ಲಿನ ಮನೆಗಳಿಗೆ ಸಂಪೂರ್ಣ 5 ಲಕ್ಷ ರುಪಾಯಿಯನ್ನು ಹಂತ ಹಂತವಾಗಿ ಕೊಡಲಾಗುತ್ತದೆ. ನಂತರ ಸಂತ್ರಸ್ತರ ಒತ್ತಾಯಕ್ಕೆ ಮಣಿದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು 'ಬಿ' ಕೆಟಗರಿಯಲ್ಲಿನ ಎಲ್ಲ ಮನೆಗಳಿಗೂ 5 ಲಕ್ಷ ರುಪಾಯಿ ಕೊಡುವುದಾಗಿ ಘೋಷಿಸಿದ್ದರು. ಈಗ 'ಬಿ' ಕೆಟಗರಿಯಲ್ಲಿ ಭಾಗಶಃ ಮನೆಗಳನ್ನು ನಿರ್ಮಿಸಿಕೊಳ್ಳುವವರಿಗೆ 3 ಲಕ್ಷ ರುಪಾಯಿ ಮಾತ್ರ ನೀಡಲಾಗುವುದು ಎಂದು ಅದೇಶ ತಿಳಿಸಿದೆ.

2019 ರಲ್ಲಿ ಆಗಷ್ಟ್ ಹಾಗೂ ಸೆಪ್ಟೆಂಬರ ತಿಂಗಳಿನಲ್ಲಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದಲ್ಲಿ ಸಂಭವಿಸಿದ್ದ ಭೀಕರ ನೆರೆಗೆ 11 ಲಕ್ಷ ಹೆಕ್ಟೆರ್ ಬೆಳೆ ನಷ್ಟವಾಗಿತ್ತು. 5.6 ಲಕ್ಷ ಮನೆಗಳು ನೆಲಸಮವಾಗಿದ್ದವು. 190 ಜನ ಸಾವನ್ನಪ್ಪಿದ್ದರು.












Click it and Unblock the Notifications