ಕ್ರೈಂ: ಶಿರಾಢಿಘಾಟ್ ಅಪಘಾತ ಇನ್ನಿತರ ಸುದ್ದಿ
ಬೆಂಗಳೂರು, ಅ.18: ಶ್ರೀಕ್ಷೇತ್ರ ಕುಕ್ಕೆ ಧರ್ಮಸ್ಥಳ ಯಾತ್ರೆಗೆ ತೆರಳಿದ್ದ ಮೈಸೂರು ನಿವಾಸಿಗಳ ವಾಹನ ಪಲ್ಟಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ದುರ್ಘಟನೆ ಗುರುವಾರ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 48ರ ಶಿರಾಢಿ ಘಾಟ್ ನಲ್ಲಿ ಕೆಂಪುಹೊಳೆ ಸೇತುವೆ ಬಳಿ ಟೆಂಪೋ ಟ್ರಾವೆಲರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 11 ಮಂದಿಗೆ ಗಾಯಗಳಾಗಿವೆ.
ಮೃತಪಟ್ಟವರನ್ನು ಮೈಸೂರಿನ ಶ್ರೀರಾಂಪುರ ನಿವಾಸಿಗಳಾದ ರಮಾಮಣಿ(60), ತನುಜಾ(32), ಈಶಾನ್(2), ವಾಹನ ಚಾಲಕ ಮೂರ್ತಿ(48) ಎಂದು ಗುರುತಿಸಲಾಗಿದೆ. ಉಳಿದಂತೆ ರಾಜೇಶ್ವರಿ, ಕೇಶವಮೂರ್ತಿ, ಇಂಚರ, ಶ್ರಾವಣಿ, ಗೋಪಿನಾಥ್, ಪಲ್ಲವಿ, ಪೂರ್ಣಿಮ, ಬಾಲಸುಬ್ರಮಣ್ಯ, ನಂದಕುಮಾರ್, ಶ್ರೀಮತಿ ಮುಂತಾದವರು ಗಾಯಗೊಂಡಿದ್ದಾರೆ.
ಮೈಸೂರಿನಿಂದ ಧರ್ಮಸ್ಥಳಕ್ಕೆ ಬಾಲಸುಬ್ರಮಣ್ಯ ಅವರ ಕುಟುಂಬ ತೆರಳುತ್ತಿತ್ತು. ಶಿರಾಡಿ ಘಾಟ್ ನ ಹದಗೆಟ್ಟ ರಸ್ತೆ, ಸುರಿಯುವ ಮಳೆ ನಡುವೆ ಟೆಂಪೋ ಟ್ರಾವೆಲರ್ ಬ್ರೇಕ್ ವೈಫಲ್ಯಗೊಂಡಿದೆ. ಮಾರನಹಳ್ಳಿ ಬಳಿಯ ಕೆಂಪುಹೊಳೆ ಸೇತುವೆ ಬಲ ಬದಿಗೆ ಸಾಗಿದ ವಾಹನ ಸುಮಾರು 60 ಅಡಿ ಆಳದ ನದಿಪಾತ್ರಕ್ಕೆ ಬಿದ್ದಿದೆ.
ಘಟನಾ ಸ್ಥಳದಲ್ಲಿ ತೀವ್ರವಾಗಿ ಗಾಯಗೊಂಡಿದ್ದವರನ್ನು ರಕ್ಷಿಸಿ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮಾರ್ಗಮಧ್ಯದಲ್ಲಿ ರಮಾಮಣಿ ಹಾಗೂ ಬಾಲಕ ಈಶಾನ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ತುಮಕೂರು
ಪಿರ್ಯಾದಿ ಚಾಂದ್ ಪಾಷ ಠಾಣೆಗೆ ನಿನ್ನೆ ಹಾಜರಾಗಿ ನೀಡಿದ ದೂರು: ಈ ದಿನ ಸಂಜೆ ಶೆಟ್ಟಿಗೆರೆ ಗ್ರಾಮದ ಹತ್ತಿರ ನಾಲ್ಕು ಬೈಕಿನಲ್ಲಿ ಬಂದ 12 ಜನರಲ್ಲಿ ಆರೋಪಿಗಳಾದ ರಮೇಶ, ಭೀಮ, ಗುಂಡ @ ದಿನೇಶ, ಪ್ರಕಾಶ, ಪುಟ್ಟ ಐದು ಜನರು ಗಾರ್ಮೇಂಟ್ಸ್ ಬಸ್ ನಂ: ಕೆಎ-07-9555 ನೇ ನಂಬರಿನ ವಾಹನವನ್ನು ಅಡ್ಡಗಟ್ಟಿ ಚಾಲಕನಿಗೆ ಈ ರೂಟಿನಲ್ಲಿ ಏಕೆ ಬಂದೆ ಎಂಬ ವಿಚಾರದಲ್ಲಿ ಗಲಾಟೆ ತೆಗೆದು ಚಾಲಕನಿಗೆ ಹೊಡೆದಿದ್ದಾರೆ.
ಜಗಳ ಬಿಡಿಸಲು ಬಂದ ಸುಮಿತ್ರ, ಜಯಲಕ್ಷ್ಮಮ್ಮ, ನಾಗರತ್ಮ, ಸಣ್ಣಮ್ಮ, ಸತೀಶ, ಹರೀಶರವರಿಗೆ ಕೈಗಳಿಂದ ಹೊಡೆದರು. ಕಲ್ಲಿನಿಂದ ಹೊಡೆದು ರಕ್ತಗಾಯಮಾಡಿದರು.
ಸತೀಶನ ಬಳಿಯಿದ್ದ ಸುಮಾರು 49,600/- ರೂ ಹಣವನ್ನು ತೆಗೆದುಕೊಂಡು ನಂತರ ಈ ವಿಷಯ ತಿಳಿದು ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿ ಸಮಾಧಾನ ಪಡಿಸುತ್ತಿದ್ದ ಹರೀಶನ ಅಣ್ಣ ರಾಜು ಹಾಗೂ ಇತರರಿಗೆ ಕೈಗಳಿಂದ ಹೊಡೆದು ಗಲಾಟೆಮಾಡಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ
ಕೋಟಾ: ದಿವಾಕರ ಗಾಣಿಗ ತಂದೆ: ಲಿಂಗು ಗಾಣಿಗ ವಾಸ: ಆವರ್ಸೆ ಉಗ್ರಾಣಿ ಮನೆ ಆವರ್ಸೆ ಗ್ರಾಮ ಉಡುಪಿ ತಾಲೂಕು ಚಿಕ್ಕಪ್ಪನ ಮಗನಾದ ಚಂದ್ರಶೇಖರ ಎಂಬವರು ದಿನಾಂಕ 17/10/2013 ರಂದು ಬೆಳಿಗ್ಗೆ 09:45 ಗಂಟೆಗೆ ಉಡುಪಿ ತಾಲೂಕು ಆವರ್ಸೆ ಗ್ರಾಮದ ಉಗ್ರಾಣಿ ಮನೆ ಎಂಬಲ್ಲಿರುವ ತನ್ನ ಮನೆಯ ಸಮೀಪದ ಕೆರೆಯಲ್ಲಿ ತನ್ನ ದನದ ಮೈ ತೋಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ದಿವಾಕರ ಗಾಣಿಗರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 46/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

ಶಿವಮೊಗ್ಗ
ಜಯನಗರ ಠಾಣೆ : ವಂಚನೆ ಪ್ರಕರಣ
ಆರೋಪಿತ ವೆಂಕಟೇಶ್ ಬಿನ್ ಪೆಂಚಾಲಯ್ಯ ಎಂಬುವರು ಪಿರ್ಯಾದಿ ಕು. ಎನ್.ಎಸ್ ಲಲಿತ ಬಿನ್ ಶಂಕರ್ ರಾವ್ 64 ವರ್ಷ ವಾಸ ಜಯನಗರ 4ನೇ ಕ್ರಾಸ್ ಶಿವಮೊಗ್ಗ ರವರ ಮಗನಂತೆ ಪಿರ್ಯಾದಿಯ ಮನೆಯಲ್ಲಿದ್ದಕೊಂಡು ಪಿರ್ಯಾದಿಯ ಚೆಕ್ಗಳಿಗೆ ನಕಲಿ ಸಹಿ ಮಾಡಿ ಕರ್ನಾಟಕ ಬ್ಯಾಂಕ್ ಮತ್ತು ಎಸ್.ಬಿ.ಐ ಬ್ಯಾಂಕ್ ಗಳಿಂದ ಹಣ ಪಡೆದು., ಇದಲ್ಲದೆ ಮನೆಯಲ್ಲಿದ್ದ ರೂ 35,000/- ಗಳ ಬೆಲೆ ಬಾಳುವ ಬಂಗಾರದ ಬಳೆಗಳನ್ನು ತಗೆದುಕೊಂಡು ಒಟ್ಟು 1,25,150/- ರೂಗಳನ್ನು ತಗೆದುಕೊಂಡು ಹೋಗಿರುತ್ತಾನೆ

ಮಾರಣಾಂತಿಕ ಅಪಘಾತ ಪ್ರಕರಣ
ಆಡುಮಲ್ಲೇಶ್ವರ ನೋಡಲೆಂದು ಬೈಕ್ ಮೇಲೆ ಹೋಗಿದ್ದ ಇಬ್ಬರು, ಸವಾರನ ನಿರ್ಲಕ್ಷ್ಯದಿಂದ ಬೈಕ್ ನಿಂದ ಜಾರಿ ಬಿದ್ದು ಹಿಂದೆ ಕುಳಿತಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಆಡುಮಲ್ಲೇಶ್ವರದ ಇಳಿಜಾರಿನ ರಸ್ತೆಯಲ್ಲಿ ನಡೆದಿದೆ.
ಸಿಂಗಾಪುರ ಗ್ರಾಮದ ಅಡೆವಪ್ಪ ಎಂಬುವವರು ತಮ್ಮ ನಂ: ಕೆಎ-16/ಕ್ಯೂ-6562 ನೇ ಬೈಕ್ ನಲ್ಲಿ ತಮ್ಮ ಊರಿನ ಶ್ರೀಧರ (17) ಎಂಬಾತನನ್ನು ಕೂರಿಸಿಕೊಂಡು ಆಡುಮಲ್ಲೇಶ್ವರವನ್ನು ನೋಡಲು ಹೋಗಿ ವಾಪಸ್ ಬರುವಾಗ ಈ ಅಪಘಾತ ನಡೆದಿದ್ದು, ಶ್ರೀಧರನಿಗೆ ತೀವ್ರ ಸ್ವರೂಪದ ಪೆಟ್ಟುಗಳಾಗಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿರುತ್ತಾನೆ, ಬೈಕ್ ಸವಾರ ಅಡೆವಪ್ಪನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಎಂದು ದೂರು ಇದ್ದ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಹುಡುಗಿ ಕಾಣೆಯಾಗಿದ್ದಾಳೆ
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣಿಯಾಗಿದ್ದಾಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ, ಬೋವಿ ಕಾಲೋನಿಯ ವಾಸಿ ಗಿರಿಜಮ್ಮ ರವರು ಮಗಳಾದ ಶ್ರೀವಿದ್ಯಾ ರವರು ದಿನಾಂಕ 13/10/2013 ರಂದು ಮನೆಯಲ್ಲಿ ಹೊರಗೆ ಹೋಗಿಬರುವುದಾಗಿ ಹೇಳಿ ಹೋದವರು ವಾಪಸ್ಸು ಬಾರದೆ ಕಾಣಿಯಾಗಿರುತ್ತಾರೆ. ಈ ಬಗ್ಗೆ ದಿನಾಂಕ 16/10/2013 ರಂದು ಶ್ರೀಮತಿ.ಗಿರಿಜಮ್ಮ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.











Click it and Unblock the Notifications