ಮಕ್ಕಳಿಗಷ್ಟೇ ಅಲ್ಲ, ಶಿಕ್ಷಣ ಸಚಿವರಿಗೂ ಪರೀಕ್ಷೆ; ಯಾರೂ 'ಫೇಲ್' ಆಗದಿರಲಿ

ಮೂರು ತಿಂಗಳ ಹಿಂದೆ ಆಲೋಚನೆ ಕೂಡ ಮಾಡದ ಸವಾಲುಗಳನ್ನು ಕೊರೊನಾ ನಮ್ಮ ಮುಂದೆ ತಂದಿದೆ. ಒಂದೊಂದು ವಯಸ್ಸಿನ ಆಲೋಚನೆ- ಚಿಂತೆ ಒಂದೊಂದು ಬಗೆಯದು. ಉದ್ಯೋಗ, ಶಿಕ್ಷಣ, ಆರೋಗ್ಯ... ಹೀಗೆ. "ಶೈಕ್ಷಣಿಕ ಪರಿವರ್ತನೆಯತ್ತ ಶಿಕ್ಷಕರು" ಎಂಬ ಸಂಘಟನೆಯಲ್ಲಿ ಸಂಯೋಜಕರಾಗಿರುವ ಎಸ್. ಮುರಳಿ ಮೋಹನ್ ಅವರು ಶಿಕ್ಷಣದ ಮಹತ್ವದ ಸಂಗತಿಗಳನ್ನು ಪ್ರಸ್ತಾವ ಮಾಡಿದ್ದಾರೆ. ಇಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರವು. -ಸಂಪಾದಕ
***

"ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರಕಬೇಕಾದ ಎಲ್ಲ ಸವಲತ್ತುಗಳೂ ದೊರಕುವಂತಾಗಬೇಕು" ಎಂಬುದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ಪರಿಕಲ್ಪನೆಯಲ್ಲಿ ಇರುವ ಸಂಗತಿ. ಈ ವಿಚಾರವನ್ನು ಎಲ್ಲ ಹಂತದಲ್ಲೂ ನೆನಪಿಸಿಕೊಳ್ಳಬೇಕು ಎಂಬುದು ಹಿಂದೆಂದಿಗಿಂತ ಈಗ ಅಗತ್ಯವಾಗಿದೆ.

ಈಗ ಶಿಕ್ಷಣದ ಬಗ್ಗೆ ಚಿಂತಿಸುವಾಗ ಮತ್ತು ನಾವು ಅತ್ಯಂತ ಕಡಿಮೆ ಸವಲತ್ತು ಹೊಂದಿರುವ ಪ್ರದೇಶವನ್ನು ಪರಿಗಣಿಸಿ, ಆ ಪ್ರದೇಶವನ್ನು ತಲುಪಲು ಬೇಕಾದ ವ್ಯವಸ್ಥೆಯ ಬಗ್ಗೆ ಎಲ್ಲ ಯೋಜನೆಗಳನ್ನು ರೂಪಿಸಬೇಕಾಗಿರುವುದು ಸರ್ಕಾರ/ಸಮಾಜದ ಚಿಂತನೆಯಾಗಬೇಕು. ಈ ಸಂಗತಿಯು ಕಾರ್ಪೊರೇಟರ್ ಹಂತದಿಂದ ಸಚಿವರಾಗುವ ತನಕ ಬೆಳೆದು ಬಂದಿರುವ ಸುರೇಶ್ ಕುಮಾರ್ ಅವರಿಗೆ ಸುಸ್ಪಷ್ಟವಾಗಿರುತ್ತದೆ.

SSLC Exam Not Only For Students, But It Also Exam For Education Minister Suresh Kumar

ಆದರೆ, ಹೊಸ ವ್ಯವಸ್ಥೆ ಅಂದಾಗ ಮಕ್ಕಳು, ಅವರ ಪೋಷಕರು, ಶಿಕ್ಷಕರು, ಶಾಲಾ ವಾತಾವರಣ ಎಲ್ಲವೂ ಸಂಸಿದ್ಧಗೊಳ್ಳಬೇಕು ಅಲ್ಲವೇ? ಈ ಕೊರೊನಾದ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳನ್ನು ಶಿಕ್ಷಣ ಸಚಿವರ ಗಮನಕ್ಕೆ ತರುವ ಪ್ರಯತ್ನ ನನ್ನದು.

ಒಂದು ವರ್ಗ ಅಥವಾ ಒಂದು ಪ್ರದೇಶಕ್ಕೆ ಅನ್ವಯವಾಗುವ ಯಾವುದೇ ಯೋಜನೆ/ಚಿಂತನೆ ಎಂದಿಗೂ ಸರ್ವಸಮ್ಮತವಾಗಲಾರದು. ಈ ದಿಸೆಯಲ್ಲಿ ಕೊರೊನಾ ಸಂದರ್ಭದಲ್ಲಿನ ಆನ್ ಲೈನ್ ತರಗತಿಗಳು ಎಲ್ಲ ತರಗತಿಗಳಿಗೂ ಮತ್ತು ಎಲ್ಲ ಪ್ರದೇಶಗಳಿಗೂ ಅನ್ವಯವಾಗಲಾರದು.

ಒಂದು ವೇಳೆ ಇದು ಅನ್ವಯ ಆಗಲೇಬೇಕಾದಾಗ ಈ ಕೆಲ ಸಂಗತಿಗಳು ಅತ್ಯವಶ್ಯಕ:

* ಆನ್ ಲೈನ್ ಶಿಕ್ಷಣಕ್ಕೆ ಮೊದಲು ಇಂಟರ್ ನೆಟ್ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗಬೇಕು.

* ಕಂಪ್ಯೂಟರ್ ಅಥವಾ ಅದಕ್ಕೆ ಸಮವಾದ ಉಪಕರಣ ಎಲ್ಲರಿಗೂ ಸಿಗುವಂತಾಗಬೇಕು.

* ಈ ಮೇಲಿನ ಎರಡೂ ಸಂಗತಿಗಳು ಪಡೆಯಲು ಬೇಕಾದ ಆರ್ಥಿಕ ಸ್ಥಿತಿ ಪೋಷಕರಿಗೆ ಇರಬೇಕು.

* ಈ ತಂತ್ರಜ್ಞಾನವನ್ನು ಬಳಕೆ ಮಾಡಲು ಬೇಕಾದ ತರಬೇತಿಯನ್ನು ಮಕ್ಕಳಿಗೆ/ಪೋಷಕರಿಗೆ/ಶಿಕ್ಷಕರಿಗೆ ನೀಡಬೇಕು.

* ಇಷ್ಟೇ ಅಲ್ಲದೆ ಕೊರೊನಾ ಪರಿಸ್ಥಿತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಡೆಸಲು ಉದ್ದೇಶಿಸಿರುವ ಪರೀಕ್ಷೆಗಳನ್ನು ಮಕ್ಕಳು ಮತ್ತು ಪೋಷಕರಿಗೆ ಅತಂಕ ಮತ್ತು ಒತ್ತಡ ಎದುರಾಗದಂತೆ ನಡೆಸುವ ಚಿಂತನೆ ಕೂಡ ಅತ್ಯವಶ್ಯಕ.

ಜನರ ಮಧ್ಯೆ ಇರುವ ನನ್ನಂಥ ಸಾಮಾನ್ಯ ವ್ಯಕ್ತಿಗೆ ಅನಿಸಿದ್ದು ಇಷ್ಟು:
* ಪರೀಕ್ಷೆಗಳನ್ನು ಮಕ್ಕಳು ಓದುವ ಅದೇ ಶಾಲೆಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಮೀರದಂತೆ ನಡೆಸುವುದು (100ಕ್ಕಿಂತ ಹೆಚ್ಚು ಮಕ್ಕಳು ಒಂದೇ ಶಾಲೆಯಲ್ಲಿದ್ದರೆ ಅದೇ ಶಾಲೆಯಲ್ಲಿಯೇ ನಡೆಸುವುದು.)

* ಅತಿ ಚಿಕ್ಕ ಶಾಲೆಗಳು ಕಟ್ಟಡ ಮತ್ತು ಸ್ಥಳಾವಕಾಶ ಇಲ್ಲದ ಶಾಲೆಗಳೂ ಇವೆ. ಅಂಥ 1- 2 ಶಾಲೆಗಳನ್ನು ಹತ್ತಿರದ ಯಾವುದಾದರೂ ಬೇರೆ ಕಾಲೇಜು/ಪ್ರಾಥಮಿಕ ಶಾಲೆ ಕಟ್ಟಡಗಳಲ್ಲಿ ಮಾಡುವುದು ಸೂಕ್ತ.

* ಕೊರೊನಾದ ಸಂದರ್ಭದಲ್ಲಿ ಪರೀಕ್ಷೆಗಳು ಘೋಷಣೆ ಆದಾಗ ಆ ಶಾಲೆಯ ಶಿಕ್ಷಕರು (ಗ್ರಾಮೀಣ ಭಾಗದಲ್ಲಿ) ತಂಡಗಳಲ್ಲಿ ಆ ಮಕ್ಕಳ ಮನೆ ಮನೆಗೆ ಭೇಟಿ ನೀಡ ಬೇಕು (ಶಾಲೆಯ ಪ್ರತಿ ಮಗುವನ್ನೂ ಒಂದು ಶಿಕ್ಷಕರ ತಂಡ ಪ್ರತಿ ದಿನ ಸಂಪರ್ಕಿಸಬೇಕು.). ಆ ಮೂಲಕ ಅಲ್ಲಿನ ಮಕ್ಕಳ ಮನೆಗಳ ಸುತ್ತ ಮುತ್ತ ಕೊರೊನಾ ಪರಿಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಬೇಕು.

ಇದರಿಂದ ಮಕ್ಕಳಿಗೆ/ಪೋಷಕರಿಗೆ/ಶಿಕ್ಷಕರಿಗೆ ಪರೀಕ್ಷೆಯ ದಿನದ ಆತಂಕ ದೂರವಾಗುತ್ತದೆ ಮತ್ತು ಪರೀಕ್ಷೆಗೆ ಕಡಿಮೆ ಸಂಖ್ಯೆಯ ಮಕ್ಕಳು ಇರುವುದರಿಂದ ಸಾಮಾಜಿಕ ಅಂತರ ಯಶಸ್ವಿಯಾಗಿ ನಿರ್ವಹಿಸಬಹುದು.

* ಎಂದಿನ ಪದ್ಧತಿಯಂತೆ ಪ್ರಶ್ನೆಪತ್ರಿಕೆ ಮುದ್ರಿಸಿ, ಅವುಗಳನ್ನು ಸಾಗಿಸಿ, ಅವುಗಳ ರಕ್ಷಣೆಗೆ ಖಜಾನೆ ಮತ್ತಿತರ ರಕ್ಷಣಾ ವ್ಯವಸ್ಥೆಗಳ ಮೂಲಕ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಅನುಸರಿಸುವುದು ಅಪಾಯವೂ ಹೌದು, ಶ್ರಮವೂ ಹೌದು. ಆದ್ದರಿಂದ ಆ ಪದ್ಧತಿ ಕೈ ಬಿಟ್ಟು ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಸಮಯಕ್ಕೆ ಪರ್ಯಾಯ ವ್ಯವಸ್ಥೆಯ ಮೂಲಕ ತಲುಪಿಸುವ ಚಿಂತನೆ ಅಸಾಧ್ಯವಾದುದೇನಲ್ಲ.

* ಅ ಅದರಲ್ಲೂ ಫೇಸ್ ಬುಕ್, ಟ್ವಿಟ್ಟರ್ ನಂಥ ಸೋಷಿಯಲ್ ಮೀಡಿಯಾಗಳಲ್ಲಿ ಮುಳುಗಿರುವ ಸುರೇಶ್ ಕುಮಾರ್ ಅವರಿಗೆ ಈ ಸಲಹೆ ಅಚ್ಚರಿ ಕೂಡ ತರಲಾರದು, ಹೊಸದೆನಿಸಲಾರದು. ಏಕೆಂದರೆ, ನೂತನ ಪರೀಕ್ಷಾ ಯೋಜನೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆಗೆ 1 ಗಂಟೆ ಮುಂಚಿತವಾಗಿ ಇ ಮೇಲ್ ಮೂಲಕ ಶಾಲೆ/ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವುದು. ಅದರ ಪ್ರತಿಗಳನ್ನು ಅಲ್ಲಿಯೇ ತೆಗೆಯುವುದರಿಂದ ಸೋರಿಕೆಯ ಆತಂಕವೂ ದೂರ. ಭವಿಷ್ಯದಲ್ಲಿ ಸರ್ಕಾರದ ಉದ್ಯೋಗಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಹೀಗೆ ಮಾಡಬಹುದು. ದೂರದೃಷ್ಠಿಯ ಚಿಂತನೆಯೂ ಬೇಕಲ್ಲವೇ?

ಆದರೆ, ನೂತನ ವಿಧಾನಕ್ಕೆ ಈ ಕೆಳಗಿನ ಸಂಗತಿಗಳು ಅತ್ಯವಶ್ಯಕ.

* ಶಾಲೆ ಅಥವಾ ಪರೀಕ್ಷಾ ಕೇಂದ್ರಕ್ಕೆ ಒಂದರಂತೆ ಕಂಪ್ಯೂಟರ್ ಅಳವಡಿಕೆ.

* ಅದಕ್ಕೆ ಬೇಕಾದ ಇಂಟರ್ ನೆಟ್ ವ್ಯವಸ್ಥೆ.

* ಜೆರಾಕ್ಸ್ ಯಂತ್ರದ ಅಳವಡಿಕೆ

* ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸದಂತೆ ಆಯಾ ವಿದ್ಯುತ್ ಕಂಪೆನಿಗಳಿಗೆ ಸೂಚನೆ.
( ಈ ಮೇಲಿನ ಅಂಶಗಳು ಸರ್ಕಾರಕ್ಕೆ ಹೊರೆ ಎನಿಸಲಾರವು)

* ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಸರ್ ಗಳ ಲಭ್ಯತೆ ಬಗ್ಗೆ ಕಾಳಜಿ ಅತ್ಯವಶ್ಯಕ.

* ಕೊಠಡಿಯ ಪರಿವೀಕ್ಷಕ (Invigilator) ಕೊರತೆ ಕಂಡುಬಂದಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರನ್ನೂ ನೇಮಕ ಮಾಡಬಹುದು.

ಪರೀಕ್ಷಾ ಕೇಂದ್ರಗಳ ವಿಕೇಂದ್ರೀಕರಣದಿಂದ ಒತ್ತಡ ಮತ್ತು ಆತಂಕಗಳಿಂದ ದೂರಾಗುವ ಮೂಲಕ ಪರೀಕ್ಷೆಗಳನ್ನು ನಿಭಾಯಿಸಬಹುದು. ಆದರೂ ಅತಿ ಎಚ್ಚರಿಕೆ ಅತ್ಯವಶ್ಯಕ. ಈ ಸಮಯದ ಪರಿಕ್ಷೆಗಳ ಯೋಜನೆ ಬೆಂಕಿಯೊಡನೆ ಸರಸವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+