ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈರ 200 ಕಿ.ಮೀ ಸೈಕಲ್ ಯಾತ್ರೆ
ಚಿಕ್ಕಮಗಳೂರು, ಜುಲೈ 10: ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ 'ಎಐಆರ್' ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸೈಕ್ಲಿಂಗ್ ನಲ್ಲಿ ಜಿಲ್ಲಾ ಎಸ್ಪಿ ಅಣ್ಣಾಮಲೈ 200 ಕಿಲೋಮೀಟರ್ ಸೈಕಲ್ ತುಳಿದು ಸುದ್ದಿಯಾಗಿದ್ದಾರೆ.
'ಮಾನ್ಸೂನ್ ಕಾಫಿ ಮ್ಯಾಜಿಕ್' 200 ಕಿ.ಮೀ ಬ್ರೆವೆಟ್ ಸೈಕಲ್ ಸವಾರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸೇರಿದಂತೆ ರಾಜ್ಯದ ವಿವಿಧೆಡೆಯ 42 ಮಂದಿ ಭಾಗವಹಿಸಿದ್ದರು.
ಚಿಕ್ಕಮಗಳೂರಿನಿಂದ ಹೊರಟು ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಹಾದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ತಲುಪಿ ಚಿಕ್ಕಮಗಳೂರಿಗೆ ವಾಪಸ್ ತಲುಪುವ ಗುರಿ ನಿಗದಿಪಡಿಸಲಾಗಿತ್ತು. ಹದಿಮೂರೂವರೆ ಗಂಟೆ ಅವಧಿಯಲ್ಲಿ ನಿಗದಿತ ದೂರ ಕ್ರಮಿಸುವ ಸವಾಲನ್ನು ಸವಾರರಿಗೆ ನೀಡಲಾಗಿತ್ತು.

ಮುಂಚೂಣಿಯಲ್ಲಿದ್ದ ಅಣ್ಣಾಮಲೈ
ಕೆ.ಅಣ್ಣಾಮಲೈ ಸೈಕಲ್ ಯಾನದಲ್ಲಿ ಮುಂಚೂಣಿ ಯಲ್ಲಿದ್ದರು. ಚಿಕ್ಕಮಗಳೂರು, ಬೆಂಗಳೂರು, ರಾಮನಗರ, ಮೈಸೂರು, ಹಾಸನ, ಶಿವಮೊಗ್ಗ, ಕೊಡಗು ಮೊದಲಾದ ಜಿಲ್ಲೆಯ ಸವಾರರು ಪಾಲ್ಗೊಂಡಿದ್ದರು. ಇಬ್ಬರು ಮಹಿಳೆಯರು, ಇಬ್ಬರು ವಿದ್ಯಾರ್ಥಿಗಳು ಇದರಲ್ಲಿದ್ದರು. ಅವರನ್ನೆಲ್ಲಾ ಹಿಂದಿಕ್ಕಿ ಅಣ್ಣಾಮಲೈ ಮೊದಲಿಗರಾಗಿದ್ದರು.

ಸಂಜೆ 7.30ಕ್ಕೆ ವಾಪಸ್
ಕುಪ್ಪಳಿ ತಲುಪಲು ಅಲ್ದೂರು, ಬಾಳೆಹೊನ್ನೂರು, ಜಯಪುರ, ಕೊಪ್ಪ, ಗಡಿಕಲ್ಲು ಮಾರ್ಗ ನಿಗದಿಪಡಿಸಲಾಗಿತ್ತು. ಓರೆಕೋರೆ, ದಿಬ್ಬ, ಇಳಿಜಾರಿನ ರಸ್ತೆಯಲ್ಲಿ ಸವಾರರು ಉತ್ಸಾಹದಿಂದ ಸಾಗಿ, ಸಂಜೆ 7.30ರ ಹೊತ್ತಿಗೆ ಸವಾರರು ಚಿಕ್ಕಮಗಳೂರಿಗೆ ವಾಪಸಾದರು. ಎಸ್ಪಿ ಸೇರಿದಂತೆ 25 ಮಂದಿ ನಿಗದಿತ ಅವಧಿಯೊಳಗೆ ಗುರಿ ತಲುಪಿದ್ದಾರೆ.

ಅಣ್ಣಾಮಲೈ ಆಕರ್ಷಣೆಯ ಕೇಂದ್ರ ಬಿಂದು
ಸೈಕ್ಲಿಂಗ್ನಲ್ಲಿ ಭಾಗವಹಿಸಿದ್ದ ಚಿಕ್ಕಮಗಳೂರಿನ ಜಿಲ್ಲಾ ಎಸ್ಪಿಕೆ.ಅಣ್ಣಾಮಲೈ ಎಲ್ಲ ಕಡೆಗಳಲ್ಲೂ ಆಕರ್ಷಣೆಯ ಕೇಂದ್ರ ಬಿಂದುವಾದರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಸ್ಪಿ ದರ್ಜೆಯ ಅಧಿಕಾರಿಯೊಬ್ಬರು ಎಲ್ಲರಂತೆ ಸೈಕಲ್ ಮೂಲಕ 200 ಕಿ.ಮೀ. ಕ್ರಮಿಸಿದ್ದು ವಿಶೇಷವಾಗಿತ್ತು.

ಅಣ್ಣಾಮಲೈ ಜತೆ ಸೆಲ್ಫಿ
ಬಾಳೆಹೊನ್ನೂರಿನ ಭದ್ರಾ ಕಾಫಿ ಶಾಫ್ ಬಳಿ ಅಣ್ಣಾಮಲೈ ಬರುತ್ತಿದ್ದಂತೆ ಅವರನ್ನು ಕಂಡ ಹಲವರು ಅವರೊಂದಿಗೆ ಸೆಲ್ಪಿ ತೆಗೆಸಿಕೊಳ್ಳಲು ಮುಗಿಬಿದ್ದರು. ಕೆಲ ಹೊತ್ತು ಅಲ್ಲಿ ಕಾಲ ಕಳೆದ ಅವರು ಅಲ್ಲಿಂದ ಪಟ್ಟಣದ ಮೂಲಕ ಜಯಪುರಕ್ಕೆ ತೆರಳಿದರು.
ಎಲ್ಲ ಸೈಕಲ್ ಸವಾರರೂ ಬಿಡಿ ಬಿಡಿಯಾಗಿ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಮಲೆನಾಡಿನ ಅಂಕುಡೊಂಕಿನ ರಸ್ತೆಯಲ್ಲಿ ಎಲ್ಲಾ ವಯೋಮಾನದವರೂ ವಿಭಿನ್ನ ಉಡುಪು, ಹೆಲ್ಮೆಟ್ಗಳನ್ನು ಧರಿಸಿ ಸೈಕಲ್ ತುಳಿಯುವ ಮೂಲಕ ಹೊಸತನ ಮೆರೆದರು.

8 ವರ್ಷಗಳಿಂದ ಸೈಕಲ್ ಯಾತ್ರೆ
ಈ ವೇಳೆ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡ ಚನ್ನಪಟ್ಟಣದ ವೈದ್ಯ ಆರ್.ಎನ್.ಮಲವೇಗೌಡ ಅವರು 'ಎಂಟು ವರ್ಷಗಳಿಂದ ಸೈಕಲ್ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದೇನೆ. 10 ಕಿ.ಮೀ ಒಳಗಿನ ಸಂಚಾರಕ್ಕೆ ಸೈಕಲ್ ಬಳಸುತ್ತೇನೆ. ಅಂಗಡಿ, ತೋಟ, ಮೈದಾನಗಳಿಗೆ ಸೈಕಲ್ನಲ್ಲೇ ಓಡಾಡುತ್ತೇನೆ'ಎಂದರು.

ಲಾರಿ ಹಿಂದಿದೆ ಅಣ್ಣಾಮಲೈ ಐಪಿಎಸ್
ಸಾಮಾನ್ಯವಾಗಿ ವಾಹನಗಳಲ್ಲಿ ದೇವರ ಹೆಸರು, ಮಕ್ಕಳ ಹೆಸರು ಹೀಗೆ ತಮ್ಮ ಪ್ರೀತಿ ಪಾತ್ರರ ಹೆಸರು ಹಾಕುವುದು ಸಾಮಾನ್ಯ. ಆದರೆ ಚಿಕ್ಕಮಗಳೂರು ಮೂಲದ ಲಾರಿ ಮಾಲಿಕರೊಬ್ಬರು ತಮ್ಮ ಲಾರಿಯ ಹಿಂದೆ ಅಣ್ಣಾಮಲೈ ಐಪಿಎಸ್ ಅಂತ ಬರೆಸಿದ್ದಾರೆ.
ಈ ಬಗ್ಗೆ ಓನ್ ಇಂಡಿಯಾ ಜತೆ ಮಾತನಾಡಿದ ಬೆಳ್ತಂಗಡಿಯಲ್ಲಿ ಲಾರಿ ಡ್ರೈವರ್ ಅಶೋಕ್ ಮಾತನಾಡುತ್ತಾ "ನಾನು ಕಂಡ ಅತ್ಯಂತ ದಕ್ಷ ಪೊಲೀಸ್ ಅಧಿಕಾರಿ ಅಂದ್ರೆ ಅಣ್ಣಾಮಲೈ. ಚಿಕ್ಕಮಗಳೂರಿಗೆ ಅವರು ಬರುವ ಮುಂಚೆ ಅವರ ಬಗ್ಗೆ ಕೇಳಿದ್ದೆ. ಕೆಲ ತಿಂಗಳ ಹಿಂದೆ ಪಿಎಸ್ಐ ಗವಿರಾಜ್ ಪ್ರಕರಣದಲ್ಲಿ ಪ್ರತಿಭಟನಾ ತಂಡವೊಂದನ್ನು ತರಾಟೆಗೆ ತೆಗೆದುಕೊಂಡ ರೀತಿ ನೋಡಿ ಶಾಕ್ ಆಗಿತ್ತು. ಒಬ್ಬ ಪೊಲೀಸ್ ಅಧಿಕಾರಿಯಿಂದ ಏನು ಬಯಸುತ್ತೀವೋ ಅಂತಹ ಗುಣ ಅಣ್ಣಾಮಲೈ ಅವರಲ್ಲಿದೆ. ಅವರು ಬಂದ ಮೇಲೆ ನಮ್ಮ ಜಿಲ್ಲೆ ತುಂಬಾ ಬದಲಾಗಿದೆ. ಅವರಿಂದ ಪ್ರೇರೇಪಿತನಾಗಿ ಈ ಹೆಸರನ್ನು ಖುಷಿಯಿಂದ ಹಾಕಿಸಿಕೊಂಡೆ" ಎನ್ನುತ್ತಾರೆ ಅವರು.












Click it and Unblock the Notifications