ಬೆಂಗಳೂರಲ್ಲಿ ವಿರೋಧ ಪಕ್ಷಗಳ ಸಭೆ; ಔತಣ ಕೂಟ ಕರೆದ ಸೋನಿಯಾ ಗಾಂಧಿ!
ಬೆಂಗಳೂರು, ಜುಲೈ 12; ಲೋಕಸಭೆ ಚುನಾವಣೆ 2024ರಲ್ಲಿ ಬಿಜೆಪಿ ಎದುರಿಸುವ ಕುರಿತುತ ವಿರೋಧದ ಪಕ್ಷಗಳು ಸಭೆಗಳನ್ನು ನಡೆಸುತ್ತಿವೆ. ವಿರೋಧ ಪಕ್ಷಗಳ 2ನೇ ಸಭೆ ಜುಲೈ 18ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಈ ಸಭೆಗೂ ಮೊದಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಔತಣ ಕೂಟ ಆಯೋಜನೆ ಮಾಡಿದ್ದಾರೆ.
ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ 2ನೇ ಸಭೆಗೆ 24 ವಿರೋಧ ಪಕ್ಷಗಳನ್ನು ಆಹ್ವಾನಿಸಲಾಗಿದೆ. ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ವಿರೋಧಿಸಿದ್ದ ಎಎಪಿಗೆ ಸಹ ಸಭೆಗೆ ಆಹ್ವಾನ ನೀಡಲಾಗಿದೆ.

ವಿರೋಧ ಪಕ್ಷಗಳ ಎರಡನೇ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷದಲ್ಲಿ ಉಂಟಾದ ಒಡಕಿನ ಬಳಿಕ ಮೊದಲ ಬಾರಿಗೆ ವಿರೋಧ ಪಕ್ಷಗಳ ಸಭೆ ನಡೆಯುತ್ತಿದೆ.
ಔತಣ ಕೂಟ ಆಯೋಜನೆ; ಬೆಂಗಳೂರಿನಲ್ಲಿ ಜುಲೈ 18ರಂದು ನಡೆಯುವ ವಿರೋಧ ಪಕ್ಷದ ಸಭೆಗೆ ಒಂದು ದಿನ ಮೊದಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಔತಣ ಕೂಟ ಕರೆದಿದ್ದಾರೆ. ಎಲ್ಲಾ ವಿರೋಧ ಪಕ್ಷಗಳಿಗೆ ಸಹ ಈ ಔತಣ ಕೂಟಕ್ಕೆ ಆಹ್ವಾನ ಕೊಡಲಾಗಿದೆ. ಆದರೆ ಔತಣ ಕೂಟ ಎಲ್ಲಿ ನಡೆಯಲಿದೆ? ಎಂಬುದು ಇನ್ನೂ ಖಚಿತವಾಗಿಲ್ಲ.
ಬಿಹಾರದ ಪಾಟ್ನಾದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷಗಳ ಮೊದಲ ಸಭೆ ನಡೆದಿತ್ತು. ಸುಮಾರು 15 ವಿರೋಧ ಪಕ್ಷಗಳು ಇದರದಲ್ಲಿ ಪಾಲ್ಗೊಂಡಿದ್ದವು. ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ 24 ಪಕ್ಷಗಳು ಪಾಲ್ಗೊಳ್ಳುವ ಮಾಹಿತಿ ಇದೆ. ಎಎಪಿ ಪಾಲ್ಗೊಳ್ಳಲಿದೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಎನ್ಸಿಪಿ ಪಕ್ಷದ ಒಡಕು ಒಂದು ಕಡೆ ವಿರೋಧ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಹಿನ್ನಡೆ ಉಂಟು ಮಾಡಿದೆ. ಆದರೆ ಸೋಮವಾರದ ಮಾಹಿತಿ ಪ್ರಕಾರ ಹೊಸ 8 ಪಕ್ಷಗಳು ಬೆಂಗಳೂರಿನಲ್ಲಿ ನಡೆಯಲಿರುವ 2ನೇ ಸಭೆಯಲ್ಲಿ ಪಾಲ್ಗೊಳ್ಳಲಿವೆ. ಆದರೆ ಕರ್ನಾಟಕದ ಜೆಡಿಎಸ್ ಈ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಳೆದ ವಾರ ಘೋಷಣೆ ಮಾಡಿದ್ದರು.
ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಆರ್ಎಸ್ಪಿ, ಐಯುಎಂಎಲ್, ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಮಣಿ) ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿವೆ. ಇವುಗಳಲ್ಲಿ ಕೆಡಿಎಂಕೆ ಮತ್ತು ಎಂಡಿಎಂಕೆ 2014ರಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿದ್ದವು. ನರೇಂದ್ರ ಮೋದಿ ಪ್ರಧಾನಿಯಾಗಲು ಬೆಂಬಲವನ್ನು ನೀಡಿದ್ದವು.
ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷಗಳಿಗೆ ಬೆಂಗಳೂರಿನ ಸಭೆಯ ಬಗ್ಗೆ ಈಗಾಗಲೇ ಆಹ್ವಾನ ಕಳಿಸಿದ್ದಾರೆ. ಆಹ್ವಾನದಲ್ಲಿ ಪಾಟ್ನಾದಲ್ಲಿ ನಡೆದ ಮೊದಲ ಸಭೆ ಯಶಸ್ವಿಯಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ.
ಮೊದಲ ಸಭೆಯಲ್ಲಿ ಹಲವಾರು ವಿಚಾರಗಳನ್ನು ನಾವು ಯಶಸ್ವಿಯಾಗಿ ಚರ್ಚಿಸಿದ್ದೇವೆ. ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಸವಾಲು ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಖರ್ಗೆ ಆಹ್ವಾನದಲ್ಲಿ ಉಲ್ಲೇಖ ಮಾಡಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ವಿರೋಧ ಪಕ್ಷಗಳ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ ಕೇಂದ್ರದ ಸುಗ್ರೀವಾಜ್ಞೆಯ ಬಗ್ಗೆ ಕಾಂಗ್ರೆಸ್ನ ಸ್ಪಷ್ಟ ನಿಲುವು ಬಯಸಿದ್ದ ಆಮ್ ಆದ್ಮಿ ಪಕ್ಷವು ಸಭೆಯಿಂದ ಅರ್ಧದಲ್ಲೇ ಹೊರ ನಡೆದಿತ್ತು. ಅಲ್ಲದೇ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿತ್ತು.
ನವದೆಹಲಿ ಮತ್ತು ಪಂಜಾಬ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಎಪಿ ಪಕ್ಷಕ್ಕೆ 2ನೇ ಸಭೆಯಲ್ಲಿಯೂ ಪಾಲ್ಗೊಳ್ಳಬೇಕು ಎಂದು ಆಹ್ವಾನ ಕೊಡಲಾಗಿದೆ. ಆದರೆ ಪಕ್ಷದ ನಾಯಕರು ಅರವಿಂದ್ ಕೇಜ್ರಿವಾಲ್ ಜೊತೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications