ತರಕಾರಿ ಸರಬರಾಜಿಗೆ ಲಂಚ ಕೇಳಿದ ಸುಬ್ರಮಣ್ಯ ಎಸಿಬಿ ಬಲೆಗೆ
ತರಕಾರಿ ಪೂರೈಸುತ್ತಿದ್ದ ವ್ಯಕ್ತಿಗೆ ಇನ್ನೂ ಕೆಲವು ಸರಕಾರಿ ಕಾಲೇಜುಗಳಲ್ಲಿ ಅವಕಾಶ ಕೊಡಿಸಲು 2.75 ಲಕ್ಷ ರುಪಾಯಿ ಲಂಚ ಕೇಳಿದ್ದ ಗೌರಿಬದನೂರಿನ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುಬ್ರಮಣ್ಯ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ
ಗೌರಿಬಿದನೂರು, ಫೆಬ್ರವರಿ 15: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಆರ್.ಸುಬ್ರಮಣ್ಯ ಎಂಬುವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಗೌರಿಬಿದನೂರಿನ ಸರಕಾರಿ ವಿದ್ಯಾರ್ಥಿ ನಿಲಯಗಳಿಗೆ ಸರಬರಾಜುದಾರರೊಬ್ಬರು ತರಕಾರಿ ಪೂರೈಸುತ್ತಿದ್ದರು.
ಅದೇ ಸರಬರಾಜುದಾರರಿಗೆ ಹನ್ನೊಂದು ಕಾಲೇಜುಗಳಿಗೆ ತರಕಾರಿ ಪೂರೈಸಲು ಅನುಮತಿ ಕೊಡಿಸುವುದಾಗಿ 2016ರ ಡಿಸೆಂಬರ್ ನಲ್ಲಿ ಆರ್.ಸುಬ್ರಮಣ್ಯ ಎರಡು ಲಕ್ಷ ರುಪಾಯಿ ಲಂಚದ ಹಣ ಪಡೆದಿದ್ದಾರೆ. ಆದರೆ ಮೂರು ಕಡತಗಳನ್ನು ಹಾಗೇ ಬಾಕಿ ಇರಿಸಿಕೊಂಡು ಹೆಚ್ಚುವರಿಯಾಗಿ ಇನ್ನೂ 75 ಸಾವಿರ ರುಪಾಯಿ ಹಣ ಕೊಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.[ಹುಬ್ಬಳ್ಳಿಯ ಇಬ್ಬರು ಹುಡಾ ನೌಕರರು ಎಸಿಬಿ ಬಲೆಗೆ]
ಅರ್ಜಿದಾರರು ನೀಡಿದ ದೂರಿನ ಅನ್ವಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಫೆಬ್ರವರಿ 15ರಂದು ಆರ್.ಸುಬ್ರಮಣ್ಯ 75 ಸಾವಿರ ರುಪಾಯಿ ಹಣವನ್ನು ಲಂಚವಾಗಿ ಪಡೆಯುವಾಗ ಬಲೆಗೆ ಬೀಳಿಸಿದ್ದಾರೆ. ಇದೀಗ ಸುಬ್ರಮಣ್ಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.[ಸೈಟ್ ಮೇಲೆ ಸೈಟು ಹೊಡೆದಿದ್ದ ಕಾಳೇಗೌಡನ ಆಸ್ತಿ ವಿವರ]
ಇದೇ ಸುಬ್ರಮಣ್ಯ ವಿರುದ್ಧ ತುಮಕೂರು ಜಿಲ್ಲಾ ಎಸಿಬಿ ಠಾಣೆಯಲ್ಲಿ ಅಕ್ಟೋಬರ್ 3, 2016ರಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.