ಕೊರೊನಾ ವೈರಸ್ ರಾತ್ರಿ ಮಾತ್ರ ಡ್ಯೂಟಿಯಲ್ಲಿರುತ್ತದೆಯೇ?: ರಾತ್ರಿ ಕರ್ಫ್ಯೂಗೆ ವ್ಯಾಪಕ ಟೀಕೆ
ರಾಜ್ಯದಾದ್ಯಂತ ಡಿ. 23ರಿಂದ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಗೆ ತರಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಜನರು ಮನೆಯಿಂದ ಹೊರಗೆ ಓಡಾಡುವಂತಿಲ್ಲ. ಅಗತ್ಯ ತುರ್ತು ಸೇವೆಗಳು ಮತ್ತು ಸಾಗಾಣಿಕೆಯ ಹೊರತಾಗಿ ಬೇರೆಲ್ಲ ಚಟುವಟಿಕೆಗಳನ್ನೂ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
Recommended Video
ಬ್ರಿಟನ್ನಲ್ಲಿ ಕೊರೊನಾ ವೈರಸ್ ಸೋಂಕಿನ ರೂಪಾಂತರಿ ತಳಿ ಕಾಣಿಸಿಕೊಂಡಿರುವುದರಿಂದ ಮತ್ತಷ್ಟು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ತಾಂತ್ರಿಕ ಸಮಿತಿಯ ಸಲಹೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಜನರು ಗುಂಪುಗೂಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ತಂದಿದೆ.
ಆದರೆ ಇದು ವ್ಯಾಪಕ ಟೀಕೆಗೆ ಒಳಗಾಗಿದೆ. ರಾತ್ರಿ ಕರ್ಫ್ಯೂ ಜಾರಿ ಮಾಡುವುದರಿಂದ ಯಾವ ರೀತಿ ಪ್ರಯೋಜನವಾಗುತ್ತದೆ ಎಂದು ವಿವರಿಸುವಂತೆ ಅನೇಕರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಮಾಧ್ಯಮಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಜನರು ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿತಿದ್ದಾರೆ. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದು ಮುಂತಾದ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು. ಕೊರೊನಾ ರಾತ್ರಿ ಹೊತ್ತು ಮಾತ್ರ ಓಡಾಡುತ್ತದೆಯೇ? ಎಂದು ಅಣಕಿಸಿದ್ದಾರೆ.
ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ: ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಪೊಲೀಸ್ ಕಮಿಷನರ್!
ಸರ್ಕಾರದ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಅನೇಕರು ರಾತ್ರಿ ಕರ್ಫ್ಯೂವನ್ನು ವ್ಯಂಗ್ಯವಾಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ. ಮುಂದೆ ಓದಿ.
ಕೊರೊನಾ ಏನು ಗೂಬೆನಾ?
'ರಾತ್ರಿ ಮಾತ್ರ ಕರ್ಫ್ಯೂ ಅಂತೆ. ಕೊರೊನಾನೇನು ಗೂಬೆ ಅನ್ಕೊಂಡಿದಾರ?' ಎಂದು ಖ್ಯಾತ ಚಿತ್ರ ಸಾಹಿತಿ ಕವಿರಾಜ್, ರಾಜ್ಯ ಸರ್ಕಾರದ ನಿರ್ಧಾರವನ್ನು ಅಣಕಿಸಿದ್ದಾರೆ.
ವೈರಸ್ ರಾತ್ರಿ ಓಡಾಡುತ್ತದೆ!
ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಕೊರೊನಾ ವೈರಸ್ ಮನೆಯಿಂದ ಹೊರಗೆ ಬಂದು ತಿರುಗಾಡುವುದರಿಂದ ಸಾರ್ವಜನಿಕರು ಆ ಸಮಯದಲ್ಲಿ ಮನೆಯ ಒಳಗೇ ಇರಬೇಕಾಗಿ ವಿನಂತಿ- ಶ್ರೀನಿವಾಸ ಕಾರ್ಕಳ
ಮೋಹಿನಿ ದೆವ್ವ ಇದ್ದಂತೆ
ಕರೋನಾ ಒಂಥರಾ ಮೋಹಿನಿ ದೆವ್ವ ಇದ್ದಂಗೆ. ರಾತ್ರಿ ಹೊತ್ತು ಮಾತ್ರ ಉಲ್ಟಾ ಕಾಲಲ್ಲಿ ಓಡಾಡುತ್ತೆ. ಅದಕ್ಕೆ ನೈಟ್ ಕರ್ಫ್ಯೂ ಹೇರಿರೋದು ಫ್ರೆಂಡ್ಸ್- ದಿನೇಶ್ ಕುಮಾರ್
ರಾತ್ರಿ ಮಾತ್ರ ಡ್ಯೂಟಿಲಿ ಇರುತ್ತದೆ
ನಮ್ ಸರ್ಕಾರಗಳ ಪ್ರಕಾರ ಈ ವೈರಸ್ ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಮಾತ್ರ ಡ್ಯೂಟಿಲಿ ಇರುತ್ತದೆ. ಎಲೆಕ್ಷನ್ ಪ್ರಚಾರಗಳು, ರಾಜಕೀಯದವರ ಸಭೆಗಳು, ಮುಷ್ಕರಗಳು ಇವೆಲ್ಲ ಇದ್ದಾಗ ವೈರಸ್ ರಜ ಹಾಕಿರತ್ತೆ ಎಂದು ಅನ್ನೌನ್ ಟ್ರೋಲರ್ಸ್ ಪುಟ ವ್ಯಂಗ್ಯವಾಡಿದೆ.
ಸುದ್ದಿವಾಹಿನಿಗಳ ಬೊಬ್ಬೆ
ಕನ್ನಡ ಸುದ್ದಿವಾಹಿನಿಗಳು ಉಸಿರೆಳೆದುಕೊಳ್ಳಲು ಪುರುಸೊತ್ತಿಲ್ಲದಂತೆ ಇನ್ನೊಂದು ಕೊರೊನಾ ಗುಮ್ಮ ಹುಟ್ಟಿಸುವುದರಲ್ಲಿ ನಿರತರಾಗಿದ್ದಾರೆ.
ಮಾನ್ಯ ಬಿಎಸ್ ಯಡಿಯೂರಪ್ಪ ಅವರೇ, ಕರ್ಫ್ಯೂ, ಲಾಕ್ ಡೌನ್ ಯಾವುದು ಮಾಡಬೇಡಿ. ಆರೋಗ್ಯಸೇವೆ ತುರ್ತು ಸ್ಥಿತಿ ನಿಭಾಯಿಸಲು ಸಜ್ಜಾಗಿಟ್ಟುಕೊಳ್ಳಿ ಸಾಕು. ಈ ಮಾಧ್ಯಮಗಳ ಒತ್ತಡಕ್ಕೆ ತಲೆಬಾಗಬೇಡಿ. ಸರ್ಕಾರಿ ನೌಕರರಿಗೆ ಸಂಬಳ ಇಲ್ಲ ಅಂದರೆ, ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಅಂದರೆ ಜನ ಕೇಳೊದು ನಿಮ್ಮನ್ನೇ ಹೊರತು ಮಾಧ್ಯಮದವರನ್ನಲ್ಲ. ಜನ ಮೂರು ಹೊತ್ತು ಮನೆಲಿ ಕೂತು ಇವರ ಬೊಬ್ಬೆ ಟಿವಿಲಿ ನೋಡಿದರೆ ಅವರಿಗೆ TRP ಬರುತ್ತೆ, ಜಾಹೀರಾತು ದುಡ್ಡು ಬರುತ್ತೆ, ಸರ್ಕಾರಕ್ಕೆ ಏನು ಸಿಗಲ್ಲ. ಕರ್ಫ್ಯೂ, ಲಾಕ್ ಡೌನ್ ಎಲ್ಲ ಹಾಕಬೇಡಿ ದಯವಿಟ್ಟು. ವ್ಯಾಪಾರ-ಉದ್ಯೋಗ ಎಲ್ಲ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ- ವಸಂತ್ ಶೆಟ್ಟಿ
ಆಗ ಮುಸ್ಲಿಮರು, ಈಗ ಕ್ರಿಶ್ಚಿಯನ್ನರು
ಮೊದಲಿಗೆ ಕೋರೋನಾ ವೈರಸನ್ನು ತಬ್ಲೀಗಿಗಳ ಕೊರಳಿಗೆ ಕಟ್ಟಿದ ಸರ್ಕಾರ, ಈಗ ಬ್ರಿಟನ್ನಿನ ಹೊಸ ವೈರಸನ್ನೂ ಕ್ರಿಶ್ಚಿಯನ್ನರ ಕೊರಳಿಗೆ ಕಟ್ಟಲು ಹೊರಟ ಸರ್ಕಾರ.. ಜನವರಿ ಎರಡರಿಂದ ಯಾವುದೇ ವೈರಸ್ ಇರಲ್ವೇನೋ..- ಪ್ರಕಾಶ್ ಸಾಗರ್