ದೆಹಲಿಗೆ ಎಸ್.ಎಂ.ಕೃಷ್ಣ, ರಾಜಕೀಯ ವಲಯದಲ್ಲಿ ಕುತೂಹಲ
ಬೆಂಗಳೂರು, ಅಕ್ಟೋಬರ್ 15 : ದೆಹಲಿಗೆ ಬರುವಂತೆ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಭಾರೀ ಕುತೂಹಲ ಕೆರಳಿಸಿದೆ. ಗುರುವಾರ ಕೃಷ್ಣ ಅವರು ಸೋನಿಯಾ ಗಾಂಧಿ ಮತ್ತು ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಲಿದ್ದಾರೆ.
ಕರ್ನಾಟಕಕ್ಕೆ ರಾಹುಲ್ ಗಾಂಧಿ ಆಗಮಿಸುವ ಮೊದಲು ಬಿ.ಕೆ.ಹರಿಪ್ರಸಾದ್ ಮತ್ತು ಎಸ್.ಎಂ.ಕೃಷ್ಣ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬುಧವಾರ ಎಂ.ವಿ.ರಾಜಶೇಖರನ್, ಜಾಫರ್ ಷರೀಫ್ ಅವರು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. [ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕೊಡಲು ರಾಹುಲ್ ಗೆ ಮನವಿ]

ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇವೆಲ್ಲ ಬೆಳವಣಿಗೆಗಳಿಂದ ರಾಜ್ಯ ರಾಜಕೀಯದಲ್ಲಿ ಏನೋ ನಡೆಯುತ್ತಿದೆ ಎಂಬ ಸುದ್ದಿಗಳು ಹಬ್ಬಿವೆ. [ದಲಿತರಿಗೆ ಸಿಎಂ ಪಟ್ಟ, ಕಾಂಗ್ರೆಸ್ ನಾಯಕರು ಹೇಳುವುದೇನು?]
ದೆಹಲಿಗೆ ಎಸ್.ಎಂ.ಕೃಷ್ಣ: ರಾಜ್ಯದ ಕಾಂಗ್ರೆಸ್ನಲ್ಲಿನ ಬೆಳವಣಿಗೆಗಳ ನಡುವೆಯೇ ಬುಧವಾರ ಎಸ್.ಎಂ.ಕೃಷ್ಣ ಅವರಿಗೆ ಕಾಂಗ್ರೆಸ್ ಹೈ ಕಮಾಂಡ್ ಬುಲಾವ್ ನೀಡಿದ್ದು, ಗುರುವಾರ ದೆಹಲಿಗೆ ಬರುವಂತೆ ಸೂಚನೆ ನೀಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅಹ್ಮದ್ ಪಟೇಲ್ ಅವರನ್ನು ಕೃಷ್ಣ ಇಂದು ಭೇಟಿ ಮಾಡಲಿದ್ದಾರೆ.
ಮೂಲ ಮತ್ತು ವಲಸಿಗ ಫೈಟ್ : ಮೂಲ ಕಾಂಗ್ರೆಸಿಗರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಇದೆ. ಆದ್ದರಿಂದಲೇ ಮೂಲ ಕಾಂಗ್ರೆಸಿಗರು ಸಭೆ ನಡೆಸಿದ್ದು, ಹೈಕಮಾಂಡ್ಗೂ ಈ ಬಗ್ಗೆ ಮಾಹಿತಿ ರವಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಸ್.ಎಂ.ಕೃಷ್ಣ ಅವರ ದೆಹಲಿ ಭೇಟಿ ಭಾರೀ ಕುತೂಹಲ ಹುಟ್ಟು ಹಾಕಿದೆ. ಸಿದ್ದರಾಮಯ್ಯ ಅವರ ನಿಲುವಿನಿಂದಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂಬುದು ಮೂಲ ಕಾಂಗ್ರೆಸಿಗರ ಅಭಿಪ್ರಾಯವಾಗಿದ್ದು, ಇದನ್ನು ಅವರು ಹೈಕಮಾಂಡ್ಗೆ ಮನವರಿಕೆ ಮಾಡಿಕೊಡಲಿದ್ದಾರೆ.












Click it and Unblock the Notifications