ಐಸಿಯು ಬೆಡ್, ಆಕ್ಸಿಜನ್ ಕೊರತೆ ಬಗ್ಗೆ ಹೈಕೋರ್ಟ್ ಕಳವಳ
ಕರ್ನಾಟಕದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಹೆಚ್ಚುವರಿ ಹಾಸಿಗೆ ಸೌಲಭ್ಯ ಒದಗಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಇತ್ತೀಚೆಗೆ ಸೂಚಿಸಿದೆ.
ಕೋವಿಡ್ನಿಂದಾಗಿ ರಾಜ್ಯದಲ್ಲಿ ರೋಗಿಗಳು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಬಂದ ಎರಡು ಪತ್ರಗಳನ್ನು ಆಧರಿಸಿ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಮುಂದಿನ ವಿಚಾರಣೆ ಏಪ್ರಿಲ್ 27ಕ್ಕೆ ನಿಗದಿಯಾಗಿದೆ.
ಹೈ ಡಿಪೆಂಡೆನ್ಸಿ ಘಟಕ (ಎಚ್ಡಿಯು) ಮತ್ತು ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳ ಲಭ್ಯವಿಲ್ಲದಿರುವುದು ಆತಂಕಕಾರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿದೆ.

"ಬೆಂಗಳೂರು ನಗರದಲ್ಲಿ ಕೇವಲ 32 ಎಚ್ಡಿಯು ಹಾಸಿಗೆಗಳು ಖಾಲಿ ಇವೆ, ಕೇವಲ 11 ವೆಂಟಿಲೇಟರ್ ಸೌಲಭ್ಯ ಇರುವ ತೀವ್ರ ನಿಗಾ ಘಟಕಗಳು ಲಭ್ಯವಿವೆ. ಯಾವುದೇ ಐಸಿಯು ಹಾಸಿಗೆಗಳು ಲಭ್ಯವಿಲ್ಲ." ಎಂಬ ಅಂಕಿ ಅಂಶವನ್ನು ಪರಿಗಣಿಸಿ ಕೆಲವು ಸಲಹೆಗಳನ್ನು ನೀಡಿದೆ.
* ಹತ್ತಿರದ ಜಿಲ್ಲೆಗಳಲ್ಲಿ ಹೈ ಡಿಪೆಂಡೆನ್ಸಿ ಘಟಕ ಮತ್ತು ವೆಂಟಿಲೇಟರ್ ಸೌಲಭ್ಯ ಇರುವ ತೀವ್ರ ನಿಗಾ ಘಟಕ ಮತ್ತು ತೀವ್ರ ನಿಗಾ ಘಟಕಗಳು ಲಭ್ಯತೆ ಎಷ್ಟಿದೆ ಎಂಬುದನ್ನು ಗುರುತಿಸಲು ಸರ್ಕಾರ, ಬಿಬಿಎಂಪಿ ಹಾಗೂ ಸಂಬಂಧಪಟ್ಟವರು ಮುಂದಾಗಬೇಕು.
* ಕೋವಿಡ್ ಯಾವುದೇ ಕ್ಷಣದಲ್ಲಿ ಉಲ್ಬಣವಾಗಬಹುದು ಮತ್ತು ಮೇಲೆ ತಿಳಿಸಿದ ಮೂರೂ ವಿಭಾಗಗಳು ಲಭಿಸದು ಎಂಬ ನೆಲೆಯಲ್ಲೇ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.
* ಮುಂದಿನ ವಿಚಾರಣೆಯ ವೇಳೆ(ಏಪ್ರಿಲ್ 27) ಗೆ ಒದಗಿಸಲಾದ ಹೆಚ್ಚುವರಿ ಹಾಸಿಗೆಗಳ ಮಾಹಿತಿಯನ್ನು ಸರ್ಕಾರ ಒದಗಿಸಬೇಕು.
* ಬೆಂಗಳೂರು ನಗರದಲ್ಲಿ ಆಮ್ಲಜನಕದ ಪೂರೈಕೆ, ರೆಮ್ಡಿಸಿವಿರ್ ಲಭ್ಯತೆ ಕುರಿತು ಡೇಟಾಬೇಸ್ ರೂಪಿಸಲು ಸರ್ಕಾರ ಮುಂದಾಗಬೇಕು.
* ಆಸ್ಪತ್ರೆ ಲಭ್ಯವಿಲ್ಲದ ವ್ಯಕ್ತಿಗಳಿಗೆ ಕೋವಿಡ್ ಆಸ್ಪತ್ರೆಗಳಾಚೆಗೆ ಸಹಾಯ ಕೇಂದ್ರ ಸ್ಥಾಪಿಸಬೇಕು. ಮತ್ತು ಸಹಾಯ ಕೇಂದ್ರದಲ್ಲಿ ಡೆಸ್ಕ್ನಲ್ಲಿ ರೆಮ್ಡಿಸಿವಿರ್ ಲಭ್ಯತೆಯ ಮಾಹಿತಿಯೂ ಇರಬೇಕು.
* ರೆಮ್ಡಿಸಿವಿರ್ ಖರೀದಿ ಮತ್ತು ಎಲ್ಲಾ ಆಸ್ಪತ್ರೆಗಳಿಗೆ ಅವುಗಳ ಸಮಾನ ವಿತರಣೆ ಕುರಿತು ಸರ್ಕಾರ ನಿರ್ಧರಿಸಲಿ.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)












Click it and Unblock the Notifications