ಬೇವು ಉಂಡಿದ್ದ ಯಡಿಯೂರಪ್ಪಗೆ ಯುಗಾದಿ ಬೆಲ್ಲ: ರಾಜ್ಯಾಧ್ಯಕ್ಷರಾಗಿ ಆಯ್ಕೆ
ನವದೆಹಲಿ, ಏ 8: ಅಸಂಖ್ಯಾತ ಕಾರ್ಯಕರ್ತರ ಮತ್ತು ಮುಖಂಡರ ಒತ್ತಡಕ್ಕೆ ಮಣಿದ ಬಿಜೆಪಿ ಕೇಂದ್ರ ನಾಯಕರು ಮಾಜಿ ಸಿಎಂ, ಶಿವಮೊಗ್ಗ ಕ್ಷೇತ್ರದ ಹಾಲಿ ಸಂಸದ ಬಿ ಎಸ್ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಪ್ರಲ್ಹಾದ್ ಜೋಶಿ ಅವರ ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಮೂಲಕ, ಕಳೆಗುಂದಿರುವ ಪಕ್ಷಕ್ಕೆ ಹೊಸ ಚೈತನ್ಯ ನೀಡುವ ಕೆಲಸಕ್ಕೆ ಕೊನೆಗೂ ಕೇಂದ್ರ ನಾಯಕರು ಮನಸ್ಸು ಮಾಡಿದ್ದಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ನೂತನ ವರ್ಷಾಚರಣೆಯ ದಿನವಾದ ಯುಗಾದಿಯ ದಿನದಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯದಲ್ಲಿ ಅಧಿಕಾರ ವಹಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. (ಬಿಎಸ್ವೈಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಹುತೇಕ ಖಚಿತ)
ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷರ ಹೆಸರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅರುಣ್ ಸಿಂಗ್ ಶುಕ್ರವಾರ (ಏ 8) ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದು ಬಂದಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ 1988, 1999 ಮತ್ತು 2007ರಲ್ಲಿ ಯಡಿಯೂರಪ್ಪ ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸಿದ್ದರು.
ರಾಜ್ಯಾಧ್ಯಕ್ಷ ಪ್ರಕಟಣೆಯ ನಂತರ ದೆಹಲಿಯಲ್ಲಿ ಯಡಿಯೂರಪ್ಪ ಹೇಳಿದ್ದು, ಸ್ಲೈಡಿನಲ್ಲಿ
ವಿಶ್ವಾಸಕ್ಕೆ ಆಭಾರಿ
ಪಕ್ಷ ನನ್ನ ಮೇಲಿಟ್ಟ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಮತ್ತು ಸಮರ್ಥವಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಲಿದ್ದೇನೆ ಎನ್ನುವ ನಂಬಿಕೆಯಿದೆ. ಅಮಿತ್ ಶಾ ಮತ್ತು ಪ್ರಧಾನಿ ಮೋದಿಗೆ ನನ್ನ ಧನ್ಯವಾದಗಳು ಎಂದು ಅಮಿತ್ ಶಾ ಮನೆಯಿಂದ ಹೊರಬಂದ ನಂತರ ಯಡಿಯೂರಪ್ಪ ದೆಹಲಿಯಲ್ಲಿ ಹೇಳಿದ್ದಾರೆ.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ
ಪಕ್ಷ ಎಂದ ಮೇಲೆ ಕೆಲವೊಂದು ಗೊಂದಲಗಳು ಇರುವುದು ಸಹಜ, ಎಲ್ಲರನ್ನೂ ಒಂದುಗೂಡಿಸಿ ಪಕ್ಷವನ್ನು ಬಲಪಡಿಸುತ್ತೇನೆ. ರಾಜ್ಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ರಾಜ್ಯ ಪ್ರವಾಸ ಮಾಡಿ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕೋರ್ಟ್ ಕೇಸ್
ತನ್ನ ಮೇಲಿದ್ದ ಕೋರ್ಟ್ ಕೇಸುಗಳು ಒಂದೊಂದಾಗಿ ರದ್ದುಗೊಂಡ ಬಳಿಕ, ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕೆನ್ನುವ ಪ್ರಯತ್ನವನ್ನು ಯಡಿಯೂರಪ್ಪ ತೀವ್ರಗೊಳಿಸಿದ್ದರು. ಬಹಳಷ್ಟು ಬಾರಿ ಆ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ದ ಎನ್ನುವ ಹೇಳಿಕೆಯನ್ನೂ ಬಿಎಸ್ವೈ ನೀಡಿದ್ದರು.
ಮೇಲ್ನೋಟಕ್ಕೆ ಎಲ್ಲರೂ ಬಿಎಸ್ವೈ ಬೇಕು ಎನ್ನುತ್ತಿದ್ದರು
ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ರಾಜ್ಯ ಮುಖಂಡರಲ್ಲಿ ಯಾರಲ್ಲೂ ತಕರಾರಿಲ್ಲ. ಅವರು ಪಕ್ಷದ ಪ್ರಶ್ನಾತೀತ ನಾಯಕ. ಬಿಎಸ್ವೈಗೆ ಅವರೇ ಪರ್ಯಾಯ ಶಕ್ತಿ ಎಂದು ಶೆಟ್ಟರ್, ಸದಾನಂದ ಗೌಡ, ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ಹಿಂದೆಯೇ ಪ್ರತಿಕ್ರಿಯಿಸಿದ್ದರು.
ಕಾರ್ಯಕರ್ತರ ಸಂಭ್ರಮ
ಯಡಿಯೂರಪ್ಪ ರಾಜ್ಯಾಧ್ಯಕ್ಷರು ಎನ್ನುವ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ, ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯ ಮುಂದೆ ಮತ್ತು ಉಡುಪಿ, ಬೀದರ್, ಶಿವಮೊಗ್ಗ, ಮಂಗಳೂರು, ಬಳ್ಳಾರಿ, ಕಲಬುರಗಿ, ವಿಜಯಪುರ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಮೈಸೂರು, ಕೊಪ್ಪಳ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ರೇಸ್ ನಲ್ಲಿದ್ದ ಇತರರು
ಯಡಿಯೂರಪ್ಪ ಅವರ ಹೆಸರು ಮಂಚೂಣಿಯಲ್ಲಿದ್ದರೂ, ಸಿ ಟಿ ರವಿ, ಆರ್ ಅಶೋಕ್ ಮತ್ತು ನಳಿನ್ ಕುಮಾರ್ ಕಟೀಲ್ ಅವರ ಹೆಸರೂ ರಾಜ್ಯಾಧ್ಯಕ್ಷ ಹುದ್ದೆಯ ರೇಸ್ ನಲ್ಲಿತ್ತು.