ಸಿಎಂ ಸಿದ್ದುಗೆ ಹೈಕಮಾಂಡ್ ಎಚ್ಚರಿಕೆ ನಿಜವಂತೆ!
ಧಾರವಾಡ, ಏ. 18 : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮತದಾನ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಫಲಿತಾಂಶ ಹೊರಬರಲು ಒಂದು ತಿಂಗಳು ಬಾಕಿ ಇದ್ದರೂ ಹಲವಾರು ಲೆಕ್ಕಾಚಾರ ಆರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸದಿದ್ದರೆ, ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನ ತ್ಯಾಗ ಮಾಡಬೇಕಾಗುತ್ತದೆ ಎಂಬ ಮಾತುಗಳೂ ಇವೆ.
ಕರ್ನಾಟಕದಲ್ಲಿ ಸ್ಪಷ್ಟ ಬಹುತದೊಂದಿಗೆ ಸರ್ಕಾರ ರಚನೆ ಮಾಡಿದ 11 ತಿಂಗಳಿನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಚುನಾವಣೆ ಪರೀಕ್ಷೆ ಎದುರಾಗಿತ್ತು. ರಾಜ್ಯ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಸಿದ್ದರಾಮಯ್ಯ ರಾಜ್ಯದ 28 ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಿ ಪ್ರಚಾರ ನಡೆಸಿದ್ದರು.

ಲೋಸಕಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಬೇಕು, ಇಲ್ಲದಿದ್ದರೆ ಸಿಎಂ ಸ್ಥಾನ ತ್ಯಾಗ ಮಾಡಬೇಕು ಎಂದು ಹೈಕಮಾಂಡ್ ನಾಯಕರು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸಿದ್ದರಾಮಯ್ಯ ಅದೆಲ್ಲ ಸುಳ್ಳು ಬಿಡ್ರಿ ಮುಂದಿನ ನಾಲ್ಕು ವರ್ಷ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. [ಎಲ್ಲಿ ಎಷ್ಟು ಮತದಾನ ನಡೆಯಿತು?]
ಆದರೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತೀಕಟ್ಟಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಎಚ್ಚರಿಕೆ ನೀಡಿರುವುದು ಹೌದು ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ಧಾರವಾಡದ ಬಾಸೆಲ್ ಮಿಷನ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ನಾಯಕರು ಎಚ್ಚರಿಕೆ ನೀಡಿರುವುದು ನಿಜ ಎಂದರು. [ಚುನಾವಣೆ ನಂತರವೂ ನಾನೇ ಸಿಎಂ : ಸಿದ್ದರಾಮಯ್ಯ]
ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದರೆ ಉಡುಗೊರೆ ಕೊಡುತ್ತೇನೆ, ಇಲ್ಲದಿದ್ದರೆ ಏನೂ ಕೊಡಿಸುವುದಿಲ್ಲ ಎಂದು ಮಕ್ಕಳಿಗೆ ನಾವೆಲ್ಲರೂ ಹೇಳುತ್ತೇವೆ. ಹಾಗೆಯೇ ಸಿಎಂ ಸಿದ್ದರಾಮಯ್ಯ ಅವರಿಗೂ ವರಿಷ್ಠರು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸುವುದು ಸಿದ್ದರಾಮಯ್ಯ ಅವರಿಗೆ ಒಂದು ಪರೀಕ್ಷೆ ಎಂದು ವಿವರಿಸಿದರು. [ಇಲ್ಲಿದೆ ನೋಡಿ ಮತದಾನದ ಚಿತ್ರಗಳು]
ಮತದಾನಕ್ಕೆ ಎರಡು ದಿನ ಮೊದಲು ಬೆಂಗಳೂರಿನಲ್ಲಿ ಮಾಧ್ಯಮ ಸಂವಾದ ನಡೆಸಿದ ಸಿಎಂ ಸಿದ್ದರಾಮಯ್ಯ ಮುಂದಿನ ನಾಲ್ಕು ವರ್ಷಗಳ ಕಾಲ ನಾನೇ ಸಿಎಂ. ಹೈಕಮಾಂಡ್ ನಿಂದ ನನಗೆ ಯಾವುದೇ ಎಚ್ಚರಿಕೆ ಬಂದಿಲ್ಲ ಎಂದು ಹೇಳಿದ್ದರು. ಮತ್ತೀಕಟ್ಟಿ ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ ಇದರಲ್ಲಿ ಯಾವುದು ಸತ್ಯ?












Click it and Unblock the Notifications