ಸಚಿವರ ಮೌಲ್ಯಮಾಪನಕ್ಕೆ ಸಿದ್ದರಾಮಯ್ಯ ತಯಾರಿ
ಬೆಂಗಳೂರು, ಅ.31 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರ ಕಾರ್ಯವೈಖರಿ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿಗೆ ಹಲವು ಬಾರಿ ದೂರು ನೀಡಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಲ್ಲೂ ಈ ಕುರಿತು ಅಸಮಾಧಾನ ವ್ಯಕ್ತವಾಗಿತ್ತು. ಆದ್ದರಿಂದ ಸಿಎಂ ಸಚಿವರ ಮೌಲ್ಯ ಮಾಪನ ನಡೆಸಲು ಮುಂದಾಗಿದ್ದಾರೆ.
ಹಲವು ಸಚಿವರು ಸಮರ್ಥವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ, ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಚಿವರು ಸಿಗುವುದಿಲ್ಲ ಎಂಬ ಆರೋಪಗಳ ಹಿನ್ನಲೆಯಲ್ಲಿ ಮೌಲ್ಯ ಮಾಪನ ನಡೆಸಲು ಸಿಎಂ ಸಿದ್ಧತೆ ನಡೆಸಿದ್ದಾರೆ. [ಸಚಿವರ ಟೆಸ್ಟ್ : ಸಿದ್ದು, ಪರಮೇಶ್ವರ್ ನಡುವೆ ಭಿನ್ನಮತ]

ಮೌಲ್ಯ ಮಾಪನದ ಮೊದಲ ಹಂತವಾಗಿ ಸಚಿವರು ತಾವು ಉಸ್ತುವಾರಿ ಹೊಂದಿರುವ ಜಿಲ್ಲೆಗಳಲ್ಲಿ ಎಷ್ಟು ಕ್ರಿಯಾಶೀಲರಾಗಿದ್ದಾರೆ ಎಂಬ ಬಗ್ಗೆ ಸಮಗ್ರ ಮಾಹಿತಿಯುಳ್ಳ ವರದಿಯೊಂದನ್ನು ಸಲ್ಲಿಸುವಂತೆ ಪ್ರತಿ ಜಿಲ್ಲೆಗೂ ನೇಮಕಗೊಂಡಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. [ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ವಿರುದ್ಧ ದೂರು]
ಎಲ್ಲಾ ಸಚಿವರ ವರದಿ ಬಂದ ನಂತರ ಅದನ್ನು ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರಿಗೆ ಸಲ್ಲಿಸುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್ ಅವರು ಸಚಿವರ ಕಾರ್ಯ ವೈಖರಿ ಬಗ್ಗೆ ವರದಿಯೊಂದನ್ನು ಹೈಕಮಾಂಡ್ಗೆ ಸಲ್ಲಿಸುವಂತೆ ಸೂಚಿಸಿದ್ದರು. ಆದ್ದರಿಂದ ಸಿಎಂ ಮೌಲ್ಯಮಾಪನ ಕಾರ್ಯ ಆರಂಭಿಸಿದ್ದಾರೆ.
ಬಿಬಿಎಂಪಿ ಚುನಾವಣೆ ಮೇಲೆ ಕಣ್ಣು : ಬೆಂಗಳೂರು ನಗರವನ್ನು ಪ್ರತಿನಿಧಿಸುವ ಶಾಸಕರು ಮತ್ತು ಸಚಿವರ ವಿರುದ್ಧವೂ ಸಿಎಂ ಅಸಮಾಧಾನ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡಿದರೂ ಪುನಃ ರಸ್ತೆಗಳು ಹೊಂಡ ಬಿದ್ದಿರುವುದು ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ. ಬಿಬಿಎಂಪಿ ಚುನಾವಣೆ ಇರುವುದರಿಂದ ಬೆಂಗಳೂರಿನ ಮೇಲೆ ಸಿಎಂ ವಿಶೇಷ ಗಮನವಿಟ್ಟಿದ್ದಾರೆ.
ವಾರದಲ್ಲಿ ಮೂರು ದಿನ ವಿಧಾನಸೌಧದಲ್ಲಿರಬೇಕು, ಉಳಿದ ಮೂರು ದಿನ ಉಸ್ತುವಾರಿ ವಹಿಸಿಕೊಂಡ ಜಿಲ್ಲೆಗಳಿಗೆ ಭೇಟಿ ನೀಡಬೇಕು, ಕೆಡಿಪಿ ಸಭೆಯಲ್ಲಿ ಭಾಗವಹಿಸಬೇಕು, ಶೀಘ್ರವಾಗಿ ಕಡತ ವಿಲೇವಾರಿ ಮಾಡಬೇಕು ಮುಂತಾದ ಸೂಚನೆಗಳನ್ನು ಸಿಎಂ ಸಚಿವರಿಗೆ ನೀಡಿದ್ದರು. ಮೌಲ್ಯಮಾಪನದ ಸಂದರ್ಭದಲ್ಲಿ ಇವುಗಳ ಪಾಲನೆಯಾಗಿದೆಯೇ? ಎಂಬ ಬಗ್ಗೆಯೂ ಗಮನಹರಿಸಲಾಗುತ್ತದೆ.
ಹಿಂದೊಮ್ಮೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಚಿವ ಮೌಲ್ಯಮಾಪನ ಮಾಡಲು ಮುಂದಾಗಿದ್ದರು. ಆಗ ಸ್ವತಃ ಸಿಎಂ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಸಚಿವರಿಗೆ ಬಿಸಿ ಮುಟ್ಟಿಸಲು ಮೌಲ್ಯಮಾಪನ ನಡೆಸಲು ಮುಂದಾಗಿದ್ದಾರೆ.












Click it and Unblock the Notifications