ಕೊರೊನಾ ತಪಾಸಣೆ; ಹಲವು ಪ್ರಶ್ನೆ ಕೇಳಿದ ಸಿದ್ದರಾಮಯ್ಯ
ನವದೆಹಲಿ, ಮಾರ್ಚ್ 17 : "ನೀವು ವೈದ್ಯರಾ?, ನಂಗೆ 93.4 ಇದೆ ಅಲ್ವಾ ಪರವಾಗಿಲ್ವಾ?, ನಂಗೆ ಕೊರೊನಾ ಭೀತಿ ಇಲ್ವಾ?" ಹೀಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸೌಧದ ಆವರಣದಲ್ಲಿ ಹಲವು ಪ್ರಶ್ನೆಗಳನ್ನು ಸಿಬ್ಬಂದಿಗೆ ಕೇಳಿದರು.
ಕರ್ನಾಟಕದಲ್ಲಿ ಕೊರೊನಾ ಹರಡದಂತೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಧಾನಸೌಧಕ್ಕೆ ಪ್ರವೇಶಿಸುವ ಶಾಸಕರು, ಸಚಿವರನ್ನು ಮುಂಜಾಗೃತ ಕ್ರಮವಾಗಿ ತಪಾಸಣೆ ನಡೆಸಲಾಗುತ್ತಿದೆ. ಸಿದ್ದರಾಮಯ್ಯರನ್ನು ಬುಧವಾರ ತಪಾಸಣೆ ನಡೆಸಲಾಯಿತು.

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಜೊತೆಗೆ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ ಸ್ಕ್ರೀನಿಂಗ್ ಮಾಡಿಸಿಕೊಂಡರು. ತಪಾಸಣೆ ಮಾಡುತ್ತಿದ್ದವರನ್ನು ನೋಡಿ "ನೀವು ವೈದ್ಯರಾ?" ಎಂದು ಪ್ರಶ್ನೆ ಮಾಡಿದರು. ಆಗ ಸಿಬ್ಬಂದಿ ನಾವು ತಾಪಮಾನ ಪರೀಕ್ಷೆ ಮಾಡುವವರು ಎಂದರು.

"99 ನಂಬರ್ ಬಂದ್ರೆ ಕೊರೊನಾ ಇದೆ ಎಂದು ಅರ್ಥವೆ?, ನಂಗೆ 93.4 ಇದೆ ಅಲ್ವಾ, ನಂಗೆ ಕೊರೊನಾ ಭೀತಿ ಇಲ್ಲ ಅಲ್ವಾ?" ಎಂದು ಪ್ರಶ್ನಿಸಿದರು ಹ್ಯಾಂಡ್ ಸ್ಯಾನಿಟರ್ನಿಂದ ಕೈ ಸ್ವಚ್ಛಗೊಳಿಸಿಕೊಂಡು ವಿಧಾನಸೌಧಕ್ಕೆ ತೆರಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, "ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಲಿ ಅಥವ ವೈದ್ಯಕೀಯ ಶಿಕ್ಷಣ ಸಚಿವರಾಗಲಿ ಕೊರೊನಾ ನಿಯಂತ್ರಣ ಕುರಿತು ಸದನದಲ್ಲಿ ಹೇಳಿಕೆ ನೀಡಬೇಕು" ಎಂದು ಒತ್ತಾಯಿಸಿದರು.
ಕರ್ನಾಟಕ ಸರ್ಕಾರ ಬುಧವಾರ ಮಾಲ್, ಚಿತ್ರಮಂದಿರ, ಪಬ್, ನೈಟ್ ಕ್ಲಬ್ಗಳನ್ನು ಬಂದ್ ಮಾಡುವ ಆದೇಶವನ್ನು ಒಂದು ವಾರ ವಿಸ್ತರಣೆ ಮಾಡಿದೆ. ಜಾತ್ರೆ, ಸಂತೆ, ಸಮಾವೇಶ, ಪ್ರತಿಭಟನೆಗಳನ್ನು ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.












Click it and Unblock the Notifications