ದೇವರಾಜ ಅರಸು ಆಡಳಿತ ಸ್ಮರಿಸಿದ ಸಿಎಂ ಸಿದ್ದರಾಮಯ್ಯ!
ಬೆಂಗಳೂರು: ಮಾಜಿ ಸಿಎಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದ ನಾಯಕ ದೇವರಾಜ ಅರಸು ಅವರನ್ನ ಹಾಲಿ ಸಿಎಂ ಸಿದ್ದರಾಮಯ್ಯ ನೆನೆದಿದ್ದಾರೆ. ದಿ.ದೇವರಾಜ ಅರಸು 41ನೇ ಪುಣ್ಯಸ್ಮರಣೆ ಹಿನ್ನೆಲೆ ವಿಧಾನಸೌಧದ ಆವರಣದಲ್ಲಿ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಅರಸು ಅವರನ್ನ ನೆನೆದರು.
ಮಾಜಿ ಸಿಎಂ ದಿ.ದೇವರಾಜ ಅರಸು ಅವರು ನಾಡು ಕಂಡ ಅತ್ಯುತ್ತಮ ರಾಜಕಾರಣಿ, ಅವರ ಕೆಲಸ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಿಎಂ ಇದೇ ವೇಳೆ ಪ್ರಸ್ತಾಪಿಸಿದರು. ದೇವರಾಜ ಅರಸು ಅವರು ಸಿಎಂ ಆಗಿ ಮಾಡಿದ ಕೆಲಸ ನಮಗೆ ಸ್ಫೂರ್ತಿ. ಅನೇಕರನ್ನ ಶಾಸಕರನ್ನಾಗಿಸಿ ಪ್ರಾತಿನಿಧ್ಯ ನೀಡುವ ಕೆಲಸ ಮಾಡಿದರು. ಈ ಮೂಲಕ ರಾಜಕೀಯ ವ್ಯವಸ್ಥೆಯಲ್ಲೂ ಸಾಮಾಜಿಕ ನ್ಯಾಯ ತರಲು ಅರಸು ಶ್ರಮಿಸಿದರು ಎಂದು ಮಾಜಿ ಸಿಎಂ ಬಗ್ಗೆ ಹಾಲಿ ಸಿಎಂ ಹೆಮ್ಮೆಯ ಮಾತುಗಳನ್ನ ಆಡಿದ್ದಾರೆ.

ಸಾಮಾಜಿಕ ನ್ಯಾಯದ ಹರಿಕಾರ ಅರಸು
ಹಾಗೇ ಮಾಜಿ ಮುಖ್ಯಮಂತ್ರಿ ಅರಸು ಅವರ ಸಾಮಾಜಿಕ ಕಾರ್ಯಗಳನ್ನ ಸಿಎಂ ಸಿದ್ದರಾಮಯ್ಯ ನೆನೆದರು. ಸಾಮಾಜಿಕ ನ್ಯಾಯದ ಹರಿಕಾರ. ಅನೇಕ ಸಾಮಾಜಿಕ ಮತ್ತು ಕ್ರಾಂತಿಕಾರಿ ತೀರ್ಮಾನ ಕೈಗೊಂಡಿದ್ದರು. ಭೂ ಸುಧಾರಣಾ ಕಾಯ್ದೆ, ಜೀತಪದ್ಧತಿ ಮುಕ್ತಿ, ಮಲಹೊರುವ ಪದ್ಧತಿಯನ್ನು ನಿಲ್ಲಿಸಿದ್ದರು ಎಂದರು. ರೈತರ ಸಾಲ ವಿಮೋಚನಾ ಕಾಯ್ದೆ, ಹಾವನೂರು ಆಯೋಗವನ್ನ ರಚಿಸಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ & ಧ್ವನಿಯಿಲ್ಲದ ಜನರ ಧ್ವನಿ ಆಗಿದ್ದರೆಂದು ಅರಸು ಸಾಧನೆ ಬಗ್ಗೆ ಬಣ್ಣಿಸಿದರು ಸಿಎಂ ಸಿದ್ದರಾಮಯ್ಯ.
ಅರಸು ಬಗ್ಗೆ ಭಾವನಾತ್ಮಕ ಟ್ವೀಟ್
ಹಾಗೇ ಅರಸು ಅವರ ಪುಣ್ಯಸ್ಮರಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ವಿಶೇಷ ಟ್ವೀಟ್ ಪೋಸ್ಟ್ ಮಾಡಿದ್ದಾರೆ. 'ದೇವರಾಜ ಅರಸು ಅವರು ನಾಡು ಕಂಡ ಮುತ್ಸದಿ ರಾಜಕಾರಣಿ. ಇಂದು ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದೇವೆ' ಎಂದು ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದಿಂದ 1972 ರಿಂದ 80 ರವರೆಗೆ ಮುಖ್ಯಮಂತ್ರಿಯಾಗಿ ಮಾಡಿದ ಕೆಲಸಗಳು ಜನರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

)ದೇವರಾಜ ಅರಸು ಅವರು ನಾಡು ಕಂಡ ಮುತ್ಸದಿ ರಾಜಕಾರಣಿ. ಇಂದು ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದೇವೆ.
— CM of Karnataka (@CMofKarnataka) June 6, 2023
ಅರಸು ಅವರು ಮುಖ್ಯಮಂತ್ರಿಯಾಗಿ ಹಾಗೂ ಅವರ ಜೀವಿತ ಕಾಲದಲ್ಲಿ ಮಾಡಿದ ಕೆಲಸ ನಮಗೆ ಸ್ಪೂರ್ತಿ. ಅನೇಕ ಸಾಮಾಜಿಕ, ಕ್ರಾಂತಿಕಾರಿ ತೀರ್ಮಾನಗಳನ್ನು ಕೈಗೊಂಡು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ.… pic.twitter.com/F3vXP6C8OO
ರಾಜ್ಯದ ವಿವಿಧೆಡೆ ಮಾಜಿ ಸಿಎಂ ಸ್ಮರಣೆ
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಮಾಜಿ ಮುಖ್ಯಮಂತ್ರಿ & ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದ ನಾಯಕ ದೇವರಾಜ ಅರಸು ಅವರ ಸ್ಮರಣೆ ನಡೆಯಿತು. ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ತಂದಿದ್ದ ಬದಲಾವಣೆ ಬಗ್ಗೆ ಸ್ಮರಿಸಿಕೊಳ್ಳಲಾಯಿತು. ಅದ್ರಲ್ಲೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅರಸು ಅವರ ಆಡಳಿತ ಕೈಗೊಂಡಿದ್ದ ನಿರ್ಧಾರ ಇಂದಿಗೂ ಮಾದರಿ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದರು. ಸಿಎಂ ಸಿದ್ದರಾಮಯ್ಯ ಕೂಡ ಅರಸು ಅವರನ್ನ ನೆನೆದು, ತಮ್ಮ ಆಡಳಿತದ ಮೇಲೆ ಅವರ ಆಶಯಗಳ ಜವಾಬ್ದಾರಿ ಎಂದಿದ್ದು ವಿಶೇಷ.
ಒಟ್ನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ದೇವರಾಜ ಅರಸು ಅವರ ಸ್ಮರಣೆ ಮಾಡಿದ್ದಾರೆ. ಹಾಗೇ ತಮ್ಮ ಸಾಮಾಜಿಕ ಕಾರ್ಯಗಳು ಅರಸು ಅವರು ಹಾಕಿಕೊಟ್ಟ ಹಾದಿಯಲ್ಲೇ ಇವೆ ಅನ್ನೋ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ ಅವುಗಳನ್ನ ಇನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುವ ಮಾತನ್ನ ಈ ವೇಳೆ ಕೊಟ್ಟಿರುವುದು ವಿಶೇಷ.












Click it and Unblock the Notifications