ವಿದ್ಯುತ್ ಕ್ಷೇತ್ರದ ಖಾಸಗೀಕರಣ; ಸಿದ್ದರಾಮಯ್ಯ ಕಿಡಿ

ಬೆಂಗಳೂರು ಆಗಸ್ಟ್ 10: "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನದ್ರೋಹಿ ಹಾಗೂ ದೇಶದ್ರೋಹಿಯಾದ ವಿದ್ಯುಚ್ಛಕ್ತಿ (ತಿದ್ದುಪಡಿ) ಕಾಯ್ದೆ-2022 ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಮೂಲಕ ಅಂಬಾನಿ, ಅದಾನಿಯಂತಹ ಉಳ್ಳವರು, ಉದ್ಯಮಿಗಳಿಗೆ ಕೈಗೆ ಚಿನ್ನದ ಖಜಾನೆಗಳನ್ನೆ ಕೊಡಲು ಹೊರಟಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಈ ಕುರಿತು ಬುಧವಾರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ವಿದ್ಯುತ್ ಕ್ಷೇತ್ರವು ನಮ್ಮ ಸಂವಿಧಾನದ 7ನೇ ಶೆಡ್ಯೂಲ್‍ನಲ್ಲಿ ಸಮವರ್ತಿ ಪಟ್ಟಿಯಲ್ಲಿರುವ ಕಾರಣದಿಂದ ಇದರಲ್ಲಿ ಯಾವುದೇ ತಿದ್ದುಪಡಿ ತರಬೇಕಾದರೆ ರಾಜ್ಯಗಳ ಸಹಮತಿ ಕಡ್ಡಾಯ ಕುರಿತು ಶಾಸನಸಭೆಗಳಲ್ಲಿ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ.

ಆದರೆ ಕೇಂದ್ರ ಸರ್ಕಾರ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರಗಳಿಗೆ ಯಾವ ಮನ್ನಣೆಯನ್ನೂ ನೀಡದೆ ವಿದ್ಯುಚ್ಛಕ್ತಿ (ತಿದ್ದುಪಡಿ) ಕಾಯ್ದೆ 2022 ತರಲು ಹೊರಟಿದೆ. ಈ ಕಾಯ್ದೆಯಿಂದ ಜನರ ಬದುಕಿನ ಮೇಲೆ ಬೀರುವ ಪ್ರಭಾವ ಕುರಿತು ವ್ಯಾಪಕವಾಗಿ ಚರ್ಚೆ ಮಾಡಬೇಕು. ಆದರೆ ದೇಶವನ್ನು ಕೋವಿಡ್ ರೋಗವು ಬಾಧಿಸುತ್ತಿದ್ದಾಗ ಕರಡನ್ನು ಬಿಡುಗಡೆ ಮಾಡಿದ ಮೋದಿ ಸರ್ಕಾರ, ಈಗ ಏಕಾಏಕಿ ಕಾಯ್ದೆಯನ್ನು ಸಂಸತ್ತಿನ ಮುಂದೆ ಮಂಡಿಸಿದೆ ಎಂದು ಸಿದ್ದರಾಮಯ್ಯ ದೂರಿದರು.

ಖಾಸಗಿಯವರ ಕೈಗೆ ವಿದ್ಯುತ್ ಕ್ಷೇತ್ರ

ಖಾಸಗಿಯವರ ಕೈಗೆ ವಿದ್ಯುತ್ ಕ್ಷೇತ್ರ

ಈವರೆಗೆ ಕಡು ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದ ಬಿಜೆಪಿ ಸರ್ಕಾರ ಈಗ ನಗರ, ಗ್ರಾಮೀಣ ಭಾಗದ ಮಧ್ಯಮ ವರ್ಗ, ಮೇಲ್ ಮಧ್ಯಮ ವರ್ಗದವರ ಕುತ್ತಿಗೆಗೂ ನೇಣಿನ ಕುಣಿಕೆ ಬಿಗಿಗೊಳಿಸಲು ಹೊರಟಿದೆ. ಇದರ ಭಾಗವಾಗಿಯೇ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸಲು ನರೇಂದ್ರ ಮೋದಿ ಸಜ್ಜಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಜನರ ಕೈಗೆ ಪಾಲಿಸ್ಟರ್ ಧ್ವಜಗಳನ್ನು ಕೊಟ್ಟು ಅಂಬಾನಿ, ಅದಾನಿ ಮುಂತಾದವರ ಕೈಗೆ ಚಿನ್ನದ ಖಜಾನೆಗಳನ್ನೆ ಕೊಡಲು ಹೊರಟಿದೆ. ಪ್ರಧಾನಿಗಳು ಕೆಲವೇ ಕಾರ್ಪೊರೇಟ್ ಕಂಪೆನಿಗಳಿಗೆ ಮಾತ್ರ ಅಚ್ಛೇದಿನ್ ತರಲು ನಿರಂತರವಾಗಿ ಕೆಲಸ ದುಡಿಯುತ್ತಿದ್ದಾರೆ ಈ ಕಾಯ್ದೆ ಜಾರಿ ಮೂಲಕ ಸಾಬೀತಾಗಿದೆ. ಹಿಂದಿನ ಸರ್ಕಾರಗಳು ಮತ್ತು ದೇಶದ ಜನ ಕಳೆದ 75 ವರ್ಷಗಳಿಂದ ಕಷ್ಟಪಟ್ಟು ನಿರ್ಮಿಸಿದ್ದ ಬಹುಪಾಲು ಸಂಪತ್ತನ್ನು ಅದಾನಿ, ಅಂಬಾನಿ, ಟಾಟಾ, ವೇದಾಂತ ಮುಂತಾದ ಕೆಲವರ ಕೈಗೆ ಕೊಟ್ಟು ಸಂಭ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಈಗ ವಿದ್ಯುತ್ ಕ್ಷೇತ್ರವನ್ನು ಹರಾಜಿಗಿಟ್ಟಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈವರೆಗೆ ಸಬ್ಸಿಡಿಯಲ್ಲಿ ವಿದ್ಯುತ್ ಪೂರೈಕೆ

ಈವರೆಗೆ ಸಬ್ಸಿಡಿಯಲ್ಲಿ ವಿದ್ಯುತ್ ಪೂರೈಕೆ

ಇದುವರೆಗೂ ರೈತರು, ಬಡವರಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿತ್ತು. ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. 1948ರ ವಿದ್ಯುತ್ ನೀತಿಯು ಕಾರ್ಪೊರೇಟ್‌ನವರಿಗೆ ಹೆಚ್ಚು ತೆರಿಗೆ ಹಾಕಿ, ಬಡವರಿಗೆ ಕ್ರಾಸ್ ಸಬ್ಸಿಡಿ ನೀಡಲಾಗುತ್ತಿತ್ತು. ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿದ್ದರಿಂದ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು. ಇಂದು ಆಹಾರ ಧಾನ್ಯಗಳ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿ ಇರುವುದಕ್ಕೆ ರೈತರಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಿದ್ದೆ ಮುಖ್ಯ ಕಾರಣ ಎಂದು ಅವರು ತಿಳಿಸಿದರು.

ಈಗ ರೈತರು ಬಳಸುತ್ತಿರುವ ಪಂಪ್‌ಸೆಟ್‌ಗಳಿಗೆ, ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ, ನೇಕಾರಿಕೆ, ಚಮ್ಮಾರಿಕೆ, ಕಮ್ಮಾರಿಕೆ, ಮೀನುಗಾರಿಕೆಗೆ, ಬಡಗಿಗಳು ಮುಂತಾದವರು ವಿದ್ಯುತ್ ಬಳಸುತ್ತಿದ್ದರೆ ಅವರ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರುಗಳನ್ನು ಅಳವಡಿಸುವ ಮೂಲಕ ಈ ಶ್ರಮಿಕ ವರ್ಗದವರ ಜುಟ್ಟನ್ನು ಖಾಸಗಿಯವರ ಕೈಗೆ ನೀಡಲು ಕೇಂದ್ರ ಬಿಜೆಪಿ ಸರ್ಕಾರ ಹೊರಟಿದೆ.

ಸಣ್ಣ ಗೃಹ ಕೈಗಾರಿಕೆಯಿಂದ ಅಧಿಕ ಉದ್ಯೋಗ

ಸಣ್ಣ ಗೃಹ ಕೈಗಾರಿಕೆಯಿಂದ ಅಧಿಕ ಉದ್ಯೋಗ

ಸಣ್ಣ, ಗೃಹ ಕೈಗಾರಿಕೆಗಳಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಿದ್ದರಿಂದ ಇವುಗಳು ದೇಶದ ಕೋಟ್ಯಾಂತರ ಯುವಕರಿಗೆ ಉದ್ಯೋಗ, ಸ್ವಯಂ ಉದ್ಯೋಗ ನೀಡಿದ್ದವು. ಇಂದಿಗೂ ಕೂಡ ಶೇ.90 ರಷ್ಟು ಉದ್ಯೋಗವನ್ನು ಈ ಎರಡೇ ಕ್ಷೇತ್ರಗಳು ನೀಡಿವೆ. ಮೋದಿಯವರ ಸರ್ಕಾರದ ನೀತಿಗಳು ಈ ಎರಡೂ ಕ್ಷೇತ್ರಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ ಎಂದು ಕಿಡಿ ಕಾರಿದರು.

ಕೊಳವೆ ಬಾವಿಗಳಿಂದ ಹಿಡಿದು ಎಲ್ಲವುಗಳಿಗೆ ವಿದ್ಯುತ್ ಮೀಟರ್ ಅಳವಡಿಸಿ, ಪೂರ್ತಿ ಶುಲ್ಕ ವಸೂಲಿಗೆ ಮುಂದಾಗುತ್ತಾರೆ. ಆ ನಂತರ ಅವರ ಖಾತೆಗಳಿಗೆ ಸಬ್ಸಿಡಿ ಮರು ಪಾವತಿಸಲಾಗುವುದು ಎನ್ನುತ್ತಾರೆ. ಆದರೆ ಮೋದಿ ಸರ್ಕಾರ ಅಡುಗೆ ಸಿಲಿಂಡರ್‌ಗೂ ಇದೇ ರೀತಿ ಹೇಳಿತ್ತು. ನೇರವಾಗಿ ಜನರ ಖಾತೆಗಳಿಗೆ ಸಬ್ಸಿಡಿ ಮರುಪಾವತಿ ಮಾಡುವುದಾಗಿ ಹೇಳಿ ಮೋಸ ಮಾಡಿತ್ತು ಎಂದರು.

ಸರ್ಕಾರವೇ ವಿದ್ಯುತ್‌ ಕ್ಷೇತ್ರ ನಿಯಂತ್ರಿಸಲಿ

ಸರ್ಕಾರವೇ ವಿದ್ಯುತ್‌ ಕ್ಷೇತ್ರ ನಿಯಂತ್ರಿಸಲಿ

ವಿದ್ಯುತ್ ಕ್ಷೇತ್ರದ ಮೇಲಿನ ಸಂಪೂರ್ಣ ನಿಯಂತ್ರಣ ಸರ್ಕಾರದ್ದೆ ಆಗಿರಬೇಕು. ಇಲ್ಲದಿದ್ದರೆ ದೇಶವು ಅಧೋಗತಿಗೆ ಇಳಿದು ಹೋಗುತ್ತದೆ. ದೇಶದ ಅಭಿವೃದ್ಧಿ ವೇಗದ ಪ್ರಧಾನ ಮೂಲ ವಿದ್ಯುತ್ ಆಗಿದೆ. ಇಂಥ ಮೂಲ ಶಕ್ತಿಯನ್ನು ಜನರಿಗೆ ಸುಲಭದ ದರದಲ್ಲಿ, ಅಗತ್ಯವಿರುವ ಕಡೆ ಉಚಿತವಾಗಿ ನೀಡಲು ಸಾಧ್ಯವಾಗದಿದ್ದರೆ ಅಂಥ ದೇಶವು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಹಿಂದಿನ ಸರ್ಕಾರಗಳು ವಿದ್ಯುತ್ ಕ್ಷೇತ್ರದ ಮೇಲೆ ಅಪಾರ ಸಂಪನ್ಮೂಲಗಳನ್ನು ವಿನಿಯೋಗಿಸಿವೆ. ಪವರ್ ಗ್ರಿಡ್ ಕಾರ್ಪೊರೇಷನ್ ಮುಂತಾದ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಮೇಲೆ ಸರ್ಕಾರ ಹೂಡಿಕೆ ಮಾಡಿದೆ. ಇದಾದ ಮೇಲೆ ಖಾಸಗಿಯವರಿಗೆ ವಹಿಸಲು ಹೊರಟಿರುವುದು ಜನದ್ರೋಹಿ ನಡೆಯಾಗಿದೆ.

ಇದೆಲ್ಲವನ್ನು ಮನಗಂಡು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ಕ್ಷೇತ್ರವನ್ನು ಕಾರ್ಪೊರೇಟ್ ಬಲಾಢ್ಯರಿಗೆ ಬಿಟ್ಟು ಕೊಡಬಾರದು. ಪ್ರಗತಿಯ ಸಂಕೇತವಾದ ವಿದ್ಯುತ್‌ ನಿಯಂತ್ರಣ ಸರ್ಕಾರದ ಬಳಿಯೇ ಇರಬೇಕು. ಅಲ್ಲದೇ ಕಾರ್ಪೊರೇಟ್ ಕಂಪೆನಿಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ಲನ್ನು ಕೂಡಲೇ ವಸೂಲಿ ಮಾಡಬೇಕು.

ಒಕ್ಕೂಟ ವ್ಯವಸ್ಥೆ ವಿರುದ್ಧ ಕೇಂದ್ರ ತಾಳಿರುವ ಸರ್ವಾಧಿಕಾರಿ ಧೋರಣೆ ವಿರುದ್ಧ ರಾಜ್ಯ ಬಿಜೆಪಿ ಸರ್ಕಾರ, ಸಂಸದರು ಪ್ರತಿರೋಧಿಸುತ್ತಿಲ್ಲ. ಬಿಜೆಪಿಯ ಜನದ್ರೋಹಿ ಧೋರಣೆ ಖಂಡಿಸಬೇಕು. ಇಂತಹ ಕೆಟ್ಟ ಕಾನೂನನ್ನು ಜಾರಿಗೊಳಿಸಬಾರದು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+