Siddaramaiah; ಕೋಲಾರದಿಂದ ಸ್ಪರ್ಧೆ, ಪ್ಲಸ್ ಪಾಯಿಂಟ್ಗಳು!
ಬೆಂಗಳೂರು, ನವೆಂಬರ್ 14; ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆಯೇ?. ಈ ಸುದ್ದಿ ಕರ್ನಾಟಕ ರಾಜಕೀಯಲ್ಲಿ ಈಗ ಬಹು ಚರ್ಚಿತವಾದ ವಿಷಯ.
ಭಾನುವಾರ ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಮಾಡುತ್ತಿರುವುದು ಏಕೆ? ಎಂಬುದು ಸಹ ಎಲ್ಲರ ಪ್ರಶ್ನೆ. ಬೆಂಗಳೂರು ನಗರದಿಂದ ಬಹಳ ದೂರದಲ್ಲಿರುವ ಕಾರಣ ಮತ್ತೆ ಬಾದಾಮಿಯಿಂದ ಕಣಕ್ಕಿಳಿಯಲು ಸಿದ್ದರಾಮಯ್ಯ ಬಯಸಿಲ್ಲ ಎಂಬ ಮಾಹಿತಿ ಇದೆ.
Breaking; ಸಿದ್ದರಾಮಯ್ಯರನ್ನು ತಮ್ಮ ಕ್ಷೇತ್ರಕ್ಕೆ ಆಹ್ವಾನಿಸಿದ ಸಚಿವ!
2018ರ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆಯ ಬಾದಾಮಿಯಲ್ಲಿ ಕಣಕ್ಕಿಳಿದ ಸಿದ್ದರಾಮಯ್ಯ ಬಾದಾಮಿಯಲ್ಲಿ ಪ್ರಯಾಸದ ಗೆಲುವು ಕಂಡಿದ್ದರು. ಆದ್ದರಿಂದ ಮುಂದಿನ ಚುನಾವಣೆಗೆ ಸುರಕ್ಷಿತವಾಗಿರುವ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ.
ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ; ಯತೀಂದ್ರ ಕೊಟ್ಟರು ಸುಳಿವು!
ಸಿದ್ದರಾಮಯ್ಯ 2023ರ ಚುನಾವಣೆಗೆ ಮತ್ತೆ ಬಾದಾಮಿ, ಚಾಮರಾಜಪೇಟೆ, ಕೋಲಾರ, ವರುಣ ಹೀಗೆ ವಿವಿಧ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ಹಬ್ಬಿದೆ. ಇದರ ನಡುವೆಯೇ ಅವರು ಕೋಲಾರಕ್ಕೆ ಕಾಲಿಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಸಹ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರ ತಿಳಿಯಲು ಕಾದು ಕುಳಿತಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಜಾಸ್ತಿ ಒತ್ತಡ ಇದೆ: ಸಿದ್ದರಾಮಯ್ಯ
ಸಿದ್ದರಾಮಯ್ಯ ಹೇಳಿದ್ದೇನು?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೋಲಾರ ಕ್ಷೇತ್ರದಲ್ಲಿ ಪಡೆದಿದ್ದು 38,537 ಮತಗಳು ಮಾತ್ರ. ಬಿಜೆಪಿಯ ಪ್ರಭಾವ ಜಿಲ್ಲೆಯಲ್ಲಿ ಅಷ್ಟಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸಾಕಷ್ಟು ಪ್ರಭಾವ ಹೊಂದಿವೆ. ಆದ್ದರಿಂದ ಸಿದ್ದರಾಮಯ್ಯ ಕೋಲಾರ ಆಯ್ಕೆ ಮಾಡಿಕೊಳ್ಳಲಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆ.
ಭಾನುವಾರ ಕೋಲಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ನಾನು ಈಗ ನಾಮಪತ್ರ ಸಲ್ಲಿಸಲು ಬಂದಿಲ್ಲ. ಹೈಕಮಾಂಡ್ ಒಪ್ಪಿಗೆ ನೀಡಿ, ನಾಮಪತ್ರ ಸಲ್ಲಿಕೆ ಮಾಡಲು ಬಂದಾಗ ಜೋರಾಗಿ ಚಪ್ಪಾಳೆ ಹೊಡೆಯಿರಿ. ಕೋಲಾರದಿಂದ ಸ್ಪರ್ಧಿಸಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ, ಆಗಲ್ಲ ಎನ್ನಲಾರೆ" ಎಂದು ಹೇಳಿದ್ದಾರೆ.
ಖಾಸಗಿ ಸಮೀಕ್ಷೆಯಲ್ಲಿ ಗೆಲುವಿನ ಸೂಚನೆ
ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಸುರಕ್ಷಿತವೇ?. ಇದು ಸದ್ಯ ಎಲ್ಲರನ್ನೂ ಕಾಡುವ ಪ್ರಶ್ನೆ. ಕ್ಷೇತ್ರದಲ್ಲಿ ಅಹಿಂದ, ಅಲ್ಪ ಸಂಖ್ಯಾತ, ಒಕ್ಕಲಿಗ ಮತಗಳು ಹೆಚ್ಚಿವೆ. ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಸೇರಿದ ನಾಯಕರು. ಈಗಾಗಲೇ ಕೋಲಾರದಲ್ಲಿ ಖಾಸಗಿ ಸಂಸ್ಥೆ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಸಿದ್ದರಾಮಯ್ಯ ಗೆಲ್ಲುವ ಸಾಧ್ಯತೆ ಶೇ 60ರಷ್ಟಿದೆ ಎಂಬ ವರದಿ ಬಂದಿದೆ. ಇದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವವಿದೆ
ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್, ಜೆಡಿಎಸ್ ಪ್ರಭಾವ ಅಧಿಕ. ಕೋಲಾರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ನ ಕೆ. ಶ್ರೀನಿವಾಸ ಗೌಡ 82,788 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ರಾಜ್ಯಸಭೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷದಿಂದ ಉಚ್ಛಾಟನೆಗೊಂಡಿರುವ ಅವರು ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದಾರೆ.
ಅಲ್ಲದೇ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುತ್ತಾರೆ ಎಂದರೆ ಮತ್ತಷ್ಟು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಬಹುದು?. ಆಗ ಪಕ್ಷದ ಪ್ರಭಾವ ಮತ್ತಷ್ಟು ಹೆಚ್ಚಲಿದ್ದು, ಸಿದ್ದರಾಮಯ್ಯ ಗೆಲುವಿಗೆ ಸಹಕಾರಿ ಆಗಲಿದೆ ಎಂಬುದು ಲೆಕ್ಕಾಚಾರವಾಗಿದೆ.
ಬೆಂಗಳೂರಿಗೆ ಹತ್ತಿರವಿರುವ ಕ್ಷೇತ್ರ
ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ತಮ್ಮ ಕ್ಷೇತ್ರ ನೋಡಿದರೆ ಸಾಲದು ರಾಜ್ಯದ ಉಳಿದ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಚಾರ ಮಾಡಬೇಕು. ಆದ್ದರಿಂದ ಕೋಲಾರ ಅವರ ಪ್ರಚಾರಕ್ಕೆ ಹೋಗಿಬರಲು ಹತ್ತಿರವಿರುವ ಕ್ಷೇತ್ರ. ಬೆಂಗಳೂರು ಸಮೀಪವಿರುವುದರಿಂದ ಅಲ್ಲಿ ಪ್ರಚಾರ ಮುಗಿಸಿ ಹಳೆ ಮೈಸೂರು ಕಡೆಯೂ ಹೆಚ್ಚು ಗಮನ ನೀಡಲು ಸಹಕಾರಿಯಾಗಿದೆ. ಆದ್ದರಿಂದ ಸಿದ್ದರಾಮಯ್ಯ ಕೋಲಾರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಸಿದ್ದರಾಮಯ್ಯ ಕೋಲಾರದಲ್ಲಿ ಕಣಕ್ಕಿಳಿದರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಹೆಚ್ಚು ಸ್ಥಾನವನ್ನು ಪಕ್ಷ ಗೆಲ್ಲಲು ಸಹಾಯಕವಾಗಲಿದೆ ಎಂಬುದು ಲೆಕ್ಕಾಚಾರವಾಗಿದೆ.
300 ಕೆಜಿ ಸೇಬಿನ ಹಾರದ ಸ್ವಾಗತ
ಭಾನುವಾರ ವಿಶೇಷ ಬಸ್ ಮೂಲಕ ಕೋಲಾರಕ್ಕೆ ಸಿದ್ದರಾಮಯ್ಯ ಆಗಮಿಸಿದರು. ಸಾವಿರಾರು ಜನರು ಸಿದ್ದರಾಮಯ್ಯ ಸ್ವಾಗತಿಸಿದರು. 300 ಕೆಜಿ ತೂಕದ ಸೇಬಿನ ಹಾರವನ್ನು ಹಾಕಿ ಅವರನ್ನು ಸ್ವಾಗತಿಸಲಾಯಿತು.
ದೇವಾಲಯ, ಚರ್ಚ್, ದರ್ಗಾಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ಆದರೆ ಕೋಲಾರ ಭಾಗದ ಪ್ರಭಾವಿ ನಾಯಕ ಕೇಂದ್ರದ ಮಾಜಿ ಸಚಿವ ಕೆ. ಹೆಚ್. ಮುನಿಯಪ್ಪ ಗೈರು ಗಮನ ಸೆಳೆಯಿತು. ಕೋಲಾರ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿತು.