6.40 ಲಕ್ಷ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗಲಿದೆ ನಿರೀಕ್ಷಿಸಿ!
ಬೆಂಗಳೂರು, ಆಗಸ್ಟ್ 26: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಆರನೇ ವೇತನ ಆಯೋಗ ರಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ 6.40 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಶುಭ ಸುದ್ದಿ ನಿರೀಕ್ಷೆ ಹುಟ್ಟಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. [7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?]

ಕೇಂದ್ರ ಸರ್ಕಾರ ಏಳನೇ ವೇತನ ಆಯೋಗ ರಚನೆ ಮಾಡಿದೆ. ರಾಜ್ಯ ಸರ್ಕಾರ ಈವರೆಗೂ ಐದನೇ ವೇತನ ಆಯೋಗ ಜಾರಿ ಮಾಡಿದ್ದು, ಮತ್ತೊಂದು ವೇತನ ಆಯೋಗವನ್ನು ರಚಿಸುವ ಸಮಯ ಬಂದಿದೆ. [ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಕೊಡುಗೆ]
ಕೇಂದ್ರ ವೇತನ ಆಯೋಗಗಳ ಶಿಫಾರಸ್ಸು ಮತ್ತು ವೇತನ ಪರಿಷ್ಕರಣೆ ಅವಧಿಯನ್ನು ಕರ್ನಾಟಕ ಸರ್ಕಾರ ಅನುಸರಿಸುವುದಿಲ್ಲ ಎಂದು ಜುಲೈ ತಿಂಗಳಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಈಗ ಆಯೋಗ ರಚನೆ ಬಗ್ಗೆ ಸುಳಿವು ನೀಡಿರುವುದರಿಂದ ರಾಜ್ಯ ಸರ್ಕಾರಿ ನೌಕರರು ಸಂಬಳ, ಭತ್ಯೆ, ಪಿಂಚಣಿ ಏರಿಕೆ ನಿರೀಕ್ಷಿಸಬಹುದು.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ
ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವಾದ ವೇತನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ವೇತನ ಆಯೋಗ ರಚನೆ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. [ಸಚಿವರುಗಳಿಗೆ ತಿಂಗಳಿಗೆ 1 ಸಾವಿರ ಲೀಟರ್ ಇಂಧನ ಭಾಗ್ಯ]

ರಾಜ್ಯಕ್ಕೆ ಪ್ರತ್ಯೇಕ ಶಿಫಾರಸು
ಕೇಂದ್ರ ಸರ್ಕಾರ ಈಗಾಗಲೇ 7ನೇ ವೇತನ ಆಯೋಗದ ಶಿಫಾರಸ್ಸು ಒಪ್ಪಿದೆ ಎಂಬ ವಿಚಾರವನ್ನು ತಮ್ಮ ಗಮನಕ್ಕೆ ತಂದಿದ್ದಾರೆ. ರಾಜ್ಯ ಸರ್ಕಾರ ಸಂಪ್ರದಾಯಿಕವಾಗಿ ತನ್ನದೇ ಆದ ವೇತನ ಆಯೋಗಗಳ ಶಿಫಾರಸ್ಸಿನ ಮೇರೆಗೆ ವೇತನ ಪರಿಷ್ಕರಣೆ ಮಾಡಿಕೊಂಡು ಬಂದಿದೆ. ಐದಾರು ವರ್ಷಕ್ಕೊಮ್ಮೆ ಜಾರಿಗೊಳಿಸಲಾಗುತ್ತದೆ.

ಮುಂದಿನ ವೇತನ ಪರಿಷ್ಕರಣೆ ಯಾವಾಗ?
ಐದು ವರ್ಷಗಳ ವೇತನ ಪರಿಷ್ಕರಣೆ ಕ್ರಮದಂತೆ ವೇತನ ಆಯೋಗದ ಶಿಫಾರಸು ಅನ್ವಯ ಮುಂದಿನ ವೇತನ ಪರಿಷ್ಕರಣೆ ಏನಿದ್ದರೂ 2017ರಲ್ಲಿ ನಿರೀಕ್ಷಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹೊಸ ವೇತನ ಆಯೋಗ ಶಿಫಾರಸು ಮೇಲೆ ಅನ್ವಯ
ಹೊಸ ವೇತನ ಆಯೋಗ ಶಿಫಾರಸು ಮೇಲೆ ಅನ್ವಯ ವೇತನ ಪರಿಷ್ಕರಣೆ ನಡೆಯಲಿದೆ. ಯಾವಾಗ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು .ಸಚಿವಾಲಯದ ಸಿಬ್ಬಂದಿಗೂ ವಿಧಾನ ಮಂಡಲದ ಅಧಿವೇಶನ ನಡೆಯುವಾಗ ವಿಶೇಷ ಭತ್ಯೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications