ವಿಶ್ವನಾಥ್-ರಾಮಲಿಂಗಾರೆಡ್ಡಿ ಭೇಟಿ: ಸಿದ್ದರಾಮಯ್ಯಗೆ ರಾಜಕೀಯ ಖೆಡ್ಡಾ?
Recommended Video
ಬೆಂಗಳೂರು, ಜೂನ್ 19: ಜೆಡಿಎಸ್ ಪಕ್ಷದ ವಿರುದ್ಧ ಅಸಮಾಧಾನ ಹೊಂದಿರುವ ಹಿರಿಯ ಶಾಸಕ ಎಚ್.ವಿಶ್ವನಾಥ್ ಮತ್ತು ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ ಅವರು ಇಂದು ಭೇಟಿ ಆಗಿದ್ದು, ಈ ಭೇಟಿ ಬಹು ಕುತೂಹಲ ಕೆರಳಿಸಿದೆ.
ಇಬ್ಬರೂ ಶಾಸಕರು ಅವರವರ ಪಕ್ಷಗಳ ವಿರುದ್ಧ ಅಸಮಾಧಾನಗೊಂಡಿದ್ದು, ಇಬ್ಬರೂ ಹಿರಿಯ ರಾಜಕಾರಣಿಗಳಾಗಿದ್ದಾರೆ. ಇನ್ನೊಂದು ಸಾಮ್ಯತೆ ಎಂದರೆ ಇಬ್ಬರೂ ಸಿದ್ದರಾಮಯ್ಯ ವಿರೋಧಿ!
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ತಗ್ಗಿಸುವ ಯತ್ನದ ಆರಂಭವಾಗಿ ಈ ಇಬ್ಬರು ಹಿರಿಯ ರಾಜಕಾರಣಿಗಳ ಭೇಟಿಯನ್ನು ವಿಶ್ಲೇಷಿಸಲಾಗುತ್ತಿದೆ. ಅದಕ್ಕೆ ಕಾರಣಗಳೂ ಇವೆ.
ವಿಶ್ವನಾಥ್ ಈ ಮುಂಚಿನಿಂದಲೂ ಸಿದ್ದರಾಮಯ್ಯ ವಿರೋಧಿಯಾಗಿದ್ದರೆ, ರಾಮಲಿಂಗಾರೆಡ್ಡಿ ಅವರು ವಲಸಿಗ ಕಾಂಗ್ರೆಸ್ಸಿಗರ ವಿರುದ್ಧ ದನಿ ಎತ್ತಿದವರಾಗಿದ್ದಾರೆ. ಇಬ್ಬರೂ ಸಿದ್ದರಾಮಯ್ಯ ರಾಜಕಾರಣದಿಂದ ಪೆಟ್ಟು ತಿಂದವರೇ ಆಗಿದ್ದಾರೆ.

ನಾವು ಸಿದ್ದರಾಮಯ್ಯ ದ್ವೇಷಿಗಳಲ್ಲ: ವಿಶ್ವನಾಥ್
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಶ್ವನಾಥ್, ನಾವೇನೂ ಸಿದ್ದರಾಮಯ್ಯ ದ್ವೇಷಿಗಳಲ್ಲ ಈ ಭೇಟಿಯ ಬಗ್ಗೆ ಅನ್ಯತಾ ಭಾವಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ. ಆದರೆ ದಿನಕ್ಕೊಂದು ಮಗ್ಗಲು ಬದುಲಿಸುತ್ತಿರುವ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಈ ರೀತಿಯ ಭೇಟಿಗಳು ಅರಾಜಕಾರಣವೆಂದು ನಂಬಲು ಕಷ್ಟಸಾಧ್ಯ.

ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಆಗಿದ್ದರು
ವಿಶ್ವನಾಥ್ ಅವರು ಕೆಲವು ದಿನಗಳ ಹಿಂದೆ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಆಗಿದ್ದರು. ವಿಶೇಷವೆಂದರೆ ಅವರೂ ಸಹ ಸಿದ್ದರಾಮಯ್ಯ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಈಗ ಸಂಸದರಾಗಿರುವವರೆ.

ಸಿದ್ದರಾಮಯ್ಯ ವಿರೋಧಿಗಳ ಒಟ್ಟುಗೂಡಿಸುತ್ತಿದ್ದಾರೆಯೇ?
ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರೋಧಿಗಳನ್ನು ಒಟ್ಟುಗೂಡಿಸಿ ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯ ತಂತ್ರ ಹೂಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶ್ವನಾಥ್
ವಿಶ್ವನಾಥ್ ಅವರು ಪ್ರಸ್ತುತ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ದೇವೇಗೌಡ ಅವರು ವಿಶ್ವನಾಥ್ ಅವರನ್ನು ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ ವಿಶ್ವನಾಥ್ ಅವರು ರಾಜಕೀಯದಲ್ಲಿ ಸಕ್ರಿಯರಾಗಿರುವುದು ದೇವೇಗೌಡ ಅವರ ಸಂಧಾನ ಯಶಸ್ವಿ ಆಗಿದೆಯೇ ಎಂಬ ಅನುಮಾನವನ್ನೂ ಮೂಡಿಸುತ್ತಿದೆ.












Click it and Unblock the Notifications