Rohini Sindhuri: ರೋಹಿಣಿ ಸಿಂಧೂರಿಗೆ ಅಧಿಕಾರ ನೀಡಿದ ರಾಜ್ಯ ಸರ್ಕಾರ!
ಬೆಂಗಳೂರು: ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೂ ಮೇಜರ್ ಸರ್ಜರಿ ಮಾಡುತ್ತಿದೆ. ಈಗಾಗಲೇ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದೀಗ ಮತ್ತೆ ವರ್ಗಾವಣೆ ಮಾಡಿದೆ. ಈ ಪೈಕಿ ರೋಹಿಣಿ ಸಿಂಧೂರಿ ಅವರಿಗೂ ಪೋಸ್ಟಿಂಗ್ ಕೊಟ್ಟಿದೆ ಕರ್ನಾಟಕ ಸರ್ಕಾರ.
ಇತ್ತೀಚೆಗೆ 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು. ಇದೀಗ ಐವರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ, ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ರಾಜ್ಯ ಸರ್ಕಾರ. ಹಾಗಾದ್ರೆ ಯಾವ ಯಾವ ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡಲಾಗಿದೆ. ಈ ಪೈಕಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಯಾವ ಇಲಾಖೆ ನೀಡಿದ್ದಾರೆ. ಯಾವೆಲ್ಲ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಐಎಎಸ್ ರೋಹಿಣಿ ಸಿಂಧೂರಿಗೆ ಯಾವ ಇಲಾಖೆ?
ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಮಧ್ಯೆ ನಡೆದಿದ್ದ ಕಿತ್ತಾಟ ಗಮನ ಸೆಳೆದಿತ್ತು. ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧೆಡೆ ಕೂಡ ಈ ವಿಚಾರ ಸದ್ದು ಮಾಡಿತ್ತು. ಆಗ ಇಬ್ಬರೂ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಮಾಡಲಾಗಿತ್ತು. ಅದೇ ರೀತಿ ರೋಹಿಣಿ ಸಿಂಧೂರಿ ಅವರಿಗೆ ಇಷ್ಟು ದಿನ ಕಾಲ ಅಧಿಕಾರ ಇರ್ಲಿಲ್ಲ. ಈಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕರ್ನಾಟಕ ಗೆಜೆಟಿಯರ್ ಚೀಫ್ ಎಡಿಟರ್ ಆಗಿ ನೇಮಕ ಮಾಡಲಾಗಿದೆ. ಹಾಗೇ ಇನ್ನುಳಿದ ಯಾವೆಲ್ಲಾ ಅಧಿಕಾರಿಗಳ ಇಲಾಖೆ ಬದಲಾಗಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.
ವರ್ಗಾವಣೆ ಆಗಿರುವ ಐಎಎಸ್ ಅಧಿಕಾರಿಗಳು
*ಸುರಾಲ್ಕರ್ ವಿಕಾಸ್ ಕಿಶೋರ್: ವಲಯ ಆಯುಕ್ತ, ಬಿಬಿಎಂಪಿ, ರಾಜರಾಜೇಶ್ವರಿ ನಗರ ವಿಭಾಗ
*ಶ್ರೀರೂಪಾ: ಇಡಿ, ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ

ಹೊಸದಾಗಿ ಇಲಾಖೆ ಪಡೆದ ಅಧಿಕಾರಿಗಳು
*ರೋಹಿಣಿ ಸಿಂಧೂರಿ: ಚೀಫ್ ಎಡಿಟರ್, ಕರ್ನಾಟಕ ಗೆಜೆಟಿಯರ್
*ಕೆ.ಎಸ್. ಲತಾಕುಮಾರಿ: ಕೆಪಿಎಸ್ಸಿ ಕಾರ್ಯದರ್ಶಿ
*ಪಿ. ಪ್ರದೀಪ್: ನಿರ್ದೇಶಕ, ಆರ್ಡಿಪಿಆರ್ (ಸೋಷಿಯಲ್ ಆಡಿಟ್)
*ಸಂಗಪ್ಪ: ಕಿಯೋನಿಕ್ಸ್ ಮ್ಯಾನೇಜಿಂಗ್ ಡೈರೆಕ್ಟರ್
*ಸಿ.ಎನ್. ಶ್ರೀಧರ: ಜವಳಿ ಇಲಾಖೆ ಆಯುಕ್ತ
ಒಟ್ನಲ್ಲಿ ಇತ್ತೀಚೆಗೆ 10 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ಮತ್ತೆ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಹಾಗೇ ಇಷ್ಟುದಿನ ಇಲಾಖೆ ಇಲ್ಲದೆ ಕಾಯುತ್ತಿದ್ದ ಅಧಿಕಾರಿಗಳಿಗೂ ಸ್ಥಳ ನಿಯೋಜನೆ ಮಾಡಲಾಗಿದೆ. ಮುಂದೆ ಕೂಡ ಮತ್ತಷ್ಟು ಅಧಿಕಾರಿಗಳ ವರ್ಗಾವಣೆ ಬಗ್ಗೆ ಈ ಮೂಲಕ ಸುಳಿವು ಸಿಕ್ಕಂತಾಗಿದೆ. ಈ ನಡುವೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ಕರ್ನಾಟಕ ಗೆಜೆಟಿಯರ್ ಚೀಫ್ ಎಡಿಟರ್ ಆಗಿ ನೇಮಿಸಿರುವುದು ಗಮನ ಸೆಳೆದಿದೆ.
ಐಪಿಎಸ್ ಅಧಿಕಾರಿಗಳಿಗೂ ವರ್ಗಾವಣೆ ಶಾಕ್!
ಐಎಎಸ್ ಅಧಿಕಾರಿಗಳು ಮಾತ್ರವಲ್ಲದೆ ಐಪಿಎಸ್ ಅಧಿಕಾರಿಗಳಿಗೂ ವರ್ಗಾವಣೆ ಶಾಕ್ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪೈಕಿ ಪ್ರಮುಖವಾಗಿ ಸ್ಥಳ ನಿರೀಕ್ಷಣೆಯಲ್ಲಿ ಇದ್ದ ಐಪಿಎಸ್ ಅಧಿಕಾರಿ ಡಾ.ಕೆ. ಧರಣಿ ದೇವಿ ಅವರನ್ನು ಕನ್ನಡ & ಸಂಸ್ಕೃತಿ ಇಲಾಖೆ ನಿರ್ದೇಶಕ ಸ್ಥಾನಕ್ಕೆ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶವನ್ನು ಹೊರಡಿಸಿದೆ. ಮತ್ತೊಂದ್ಕಡೆ ಮೈಸೂರಿನ ಪೊಲೀಸ್ ಅಕಾಡೆಮಿ ನಿರ್ದೇಶಕ ಹುದ್ದೆಗೆ ವರ್ಗಾವಣೆ ಆಗಿದ್ದ ಡಿಜಿಪಿ ಎಸ್.ಡಿ. ಶರಣಪ್ಪ ಅವರನ್ನು ಇದೀಗ ರೈಲ್ವೆ ಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.












Click it and Unblock the Notifications