ಹಿಂದೂ ಯಾತ್ರಾರ್ಥಿಗಳ ಕೂಗಿಗೆ ಸ್ಪಂದಿಸುವ ಸಿದ್ದರಾಮಯ್ಯ?
ಬೆಂಗಳೂರು, ಅ 6: ಹಜ್ ಯಾತ್ರಾರ್ಥಿಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ ಎನ್ನುವ ಬಹುಸಂಖ್ಯಾತರ ಕೂಗಿಗೆ ಸಿದ್ದರಾಮಯ್ಯ ಸರಕಾರ ಸ್ಪಂದಿಸಿದೆ. ಹಿಂದೂ ಧಾರ್ಮಿಕ ಸ್ಥಳಗಳಿಗೆ ತೆರಳುವ ಭಕ್ತಾದಿಗಳಿಗೂ ಸಬ್ಸಿಡಿ ನೀಡಲು ಕೊನೆಗೂ ಸಿದ್ದು ಸರಕಾರ ಮುಂದಾಗಿದೆ.
ಉತ್ತರಖಾಂಡದ ಪವಿತ್ರ ಕ್ಷೇತ್ರಗಳಾದ ಕೇದಾರನಾಥ್, ಬದ್ರಿನಾಥ್, ಗಂಗೋತ್ರಿ, ಯಮುನೋತ್ರಿ ಸೇರಿದಂತೆ ಗುಜರಾತಿನಲ್ಲಿರುವ ದ್ವಾರಕಾ, ಒರಿಸ್ಸಾದಲ್ಲಿರುವ ಪುರಿ ಮತ್ತು ತಮಿಳುನಾಡಿನಲ್ಲಿರುವ ರಾಮೇಶ್ವರಂ (ಚಾರ್ ಧಾಮ್) ತೆರಳುವ ಯಾತ್ರಾರ್ಥಿಗಳಿಗೆ ಸಬ್ಸಿಡಿ ನೀಡುವ ಮಹತ್ವದ ನಿರ್ಧಾರಕ್ಕೆ ಸಿದ್ದರಾಮಯ್ಯ ಸರಕಾರ ಬಂದಿದೆ.
ಹಜ್ ಯಾತ್ರೆಗೆ ತೆರಳುವ ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತಿರುವ ಸಬ್ಸಿಡಿ ಮಾದರಿಯಲ್ಲೇ ಚಾರ್ ಧಾಮ್ ಯಾತ್ರಾರ್ಥಿಗಳಿಗೂ ಶೀಘ್ರವೇ ಸರಕಾರ ಸಬ್ಸಿಡಿ ನೀಡಲಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಸದ್ಯದಲ್ಲೇ ಹೊರಬೀಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮುಜರಾಯಿ ಇಲಾಖೆ ವತಿಯಿಂದ ಚಾರ್ ಧಾಮ್ ಕೈಗೊಳ್ಳುವ ಯಾತ್ರಾಥಿಗಳಿಗೆ ಸರಕಾರ ಸಬ್ಸಿಡಿ ನೀಡುವ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ ಬಿ ಜಯಚಂದ್ರ ಅವರ ವಿಶೇಷ ಆಸಕ್ತಿಯೇ ಕಾರಣ ಎನ್ನಲಾಗುತ್ತಿದೆ.
ಜಯಚಂದ್ರ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಮುಂದಿನ ವಾರ ಮುಜರಾಯಿ ಇಲಾಖೆಯ ಅಧಿಕಾರಿಗಳ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆಯ ನಂತರ ಸರಕಾರದಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಹಜ್ ಯಾತ್ರಿಗಳಿಗೆ ಸರಕಾರ ಸಬ್ಸಿಡಿ ನೀಡಿ ಸಹಕರಿಸುತ್ತಿತ್ತು. ಅದೇ ರೀತಿ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಯಾತ್ರಾಥಿಗಳಿಗೂ ಸಬ್ಸಿಡಿ ನೀಡಬೇಕೆಂದು ಬಹುದಿನದ ಬೇಡಿಕೆಯಾಗಿತ್ತು.
ಸಬ್ಸಿಡಿಗೆ ಸರಕಾರ ಅಂತಿಮಗೊಳಿಸಿರುವ ದೇವಾಲಯಗಳ ಪಟ್ಟಿಯಲ್ಲಿ ಅಮರನಾಥ್ ಮತ್ತು ವೈಷ್ಣೋದೇವಿ ದೇವಾಲಯ ಇಲ್ಲ (ಪ್ರಮುಖವಾಗಿ, ಈ ಎರಡು ದೇವಾಲಯಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸಬ್ಸಿಡಿ ನೀಡಬೇಕೆನ್ನುವುದು ಬಹುದಿನದ ಬೇಡಿಕೆಯಾಗಿತ್ತು)












Click it and Unblock the Notifications