ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ! ಯಾರೆಲ್ಲಾ ವರ್ಗಾವಣೆ ಆಗಿದ್ದಾರೆ?
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸುದ್ದಿಯಲ್ಲಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರಣಕ್ಕೆ ಹೀಗೆ ಅಧಿಕಾರಿಗಳನ್ನ ವರ್ಗಾವಣೆ ಮಾಡುತ್ತಿರುವ ಕುರಿತು ಸರ್ಕಾರ ಮಾಹಿತಿ ನೀಡುತ್ತಿದೆ. ಇದೀಗ ದಿಢೀರ್ ಮತ್ತೆ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.
ಪ್ರತಿಬಾರಿ ರಾಜ್ಯ ಸರ್ಕಾರ ಬದಲಾದ ಸಂದರ್ಭದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ಗ್ಯಾರಂಟಿ. ಈಗಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡ್ತಿದ್ದಂತೆ ವರ್ಗಾವಣೆ ಪರ್ವ ಶುರುವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಖಡಕ್ ಆಗಿ ಕೆಲಸ ಮಾಡದ ಅಧಿಕಾರಿಗಳಿಗೆ ಕೆಲ ದಿನಗಳ ಹಿಂದೆ ಖಡಕ್ ವಾರ್ನ್ ಕೂಡ ಕೊಟ್ಟಿದ್ದರು. ಹೀಗಿದ್ದಾಗಲೇ ಇದೀಗ ದಿಢೀರ್ ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ಹೊರಬಿದ್ದಿದೆ. ಹಾಗಾದರೆ ಈಗ ವರ್ಗಾವಣೆ ಆಗಿರುವ ಅಧಿಕಾರಿಗಳು ಯಾರೆಲ್ಲಾ?

ವರ್ಗಾವಣೆ ಆಗಿರುವ ಅಧಿಕಾರಿಗಳ ಪಟ್ಟಿ
ರಾಜ್ಯದಲ್ಲಿ ಕೆಲವು ದಿನದ ಹಿಂದೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈಗ ದಿಢೀರ್ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದಂತೆ ತುಮಕೂರು ಜಿಲ್ಲೆಯ ಹಾಲಿ ಜಿಲ್ಲಾಧಿಕಾರಿಯಾದ ಕೆ. ಶ್ರೀನಿವಾಸ್ ಅವರನ್ನು ಟ್ರಾನ್ಸ್ಫರ್ ಮಾಡಲಾಗಿದೆ. ತುಮಕೂರು ಜಿಲ್ಲಾಧಿಕಾರಿ ಹುದ್ದೆ ನಿರ್ವಹಿಸುತ್ತಿರುವ ಕೆ. ಶ್ರೀನಿವಾಸ್ ಅವರನ್ನು, ಇದೀಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಗಿದೆ. ತುಮಕೂರಿನಿಂದ ಕೆ. ಶ್ರೀನಿವಾಸ್ ಅವರು ಈಗ ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ.
ತುಮಕೂರಿಗೆ ಹೊಸ ಜಿಲ್ಲಾಧಿಕಾರಿ
ಕೆ. ಶ್ರೀನಿವಾಸ್ ಅವರು ಆರ್. ರಾಮಚಂದ್ರನ್ ಅವರಿಂದ ಆಹಾರ ಸುರಕ್ಷತೆ & ಗುಣಮಟ್ಟ ಪ್ರಾಧಿಕಾರದ ಕಮಿಷನರ್ ಹುದ್ದೆಯನ್ನ ಹಸ್ತಾಂತರಿಸಿಕೊಳ್ಳುವರು. ಹಾಗೇ ತುಮಕೂರಿನಲ್ಲಿ ಜಿಲ್ಲಾಧಿಕಾರಿ ಆಗಿದ್ದ ಕೆ. ಶ್ರೀನಿವಾಸ್ ಅವರ ಜಾಗಕ್ಕೆ, ಮತ್ತೊಬ್ಬರು ಐಎಎಸ್ ಅಧಿಕಾರಿ, ಶುಭಾ ಕಲ್ಯಾಣ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ತುಮಕೂರು ಜಿಲ್ಲೆ ಜಿಲ್ಲಾಧಿಕಾರಿ ಆಗಿ, ಶುಭಾ ಕಲ್ಯಾಣ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಸದ್ಯ ಶುಭಾ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿದ್ದರು.
ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಬದಲಾವಣೆಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಈ ಹಿಂದಿನ ಸರ್ಕಾರದಲ್ಲಿ ಆಗಿದ್ದ ಬದಲಾವಣೆ ಕೈಬಿಡುತ್ತಿದೆ. ಆ ಮೂಲಕ ಜನರಿಗೆ ಉತ್ತಮ ಆಡಳಿತ ನೀಡಲು & ಆಡಳಿತ ಯಂತ್ರಕ್ಕೆ ಮೇಜರ್ ಸರ್ಜಾರಿ ಮಾಡಲು ಹಲವು ಅಧಿಕಾರಿಗಳನ್ನ ವರ್ಗಾವಣೆ ಮಾಡುತ್ತಿದೆ ಎನ್ನಲಾಗಿದೆ. ಆದರೆ ವಿರೋಧ ಪಕ್ಷದ ನಾಯಕರು ಬೇರೆಯದ್ದೇ ಆರೋಪ ಮಾಡುತ್ತಿದ್ದಾರೆ.












Click it and Unblock the Notifications