ಕಾರಿನಿಂದ ಕುಸಿದು ಬಿದ್ದ ಮಾಜಿ ಸಿಎಂ ಸಿದ್ದರಾಮಯ್ಯ
ವಿಜಯನಗರ: ಮಾಜಿ ಸಿಎಂ ಸಿದ್ದರಾಮಯ್ಯ ಕಾರು ಹತ್ತುವಾಗ ಕುಸಿದು ಬಿದ್ದ ಘಟನೆ ಕೂಡ್ಲಿಗಿ ಹೆಲಿಪ್ಯಾಡ್ನಲ್ಲಿ ನಡೆದಿದೆ. ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ್ದರು. ಹೆಲಿಕಾಪ್ಟರ್ನಿಂದ ಇಳಿದು ಎಲ್ಲರನ್ನೂ ಮಾತನಾಡಿಸಿದ್ದ ಸಿದ್ದರಾಮಯ್ಯ, ಕಾರು ಹತ್ತುವಾಗ ದಿಢೀರ್ ಕುಸಿದಿದ್ದಾರೆ. ಆಗ ಕೆಳಗೆ ಬೀಳುತ್ತಿದ್ದ ಸಿದ್ದರಾಮಯ್ಯ ಅವರನ್ನ ಹಿಡಿದುಕೊಳ್ಳಲಾಗಿದೆ.
ಇನ್ನು ಸಿದ್ದರಾಮಯ್ಯ ಕುಸಿದು ಬೀಳುತ್ತಿದ್ಧಂತೆ ಕ್ಷಣಕಾಲ ಅಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಗ ತಕ್ಷಣ ಅವರ ಹಿಂದೆ ಇದ್ದ ಗನ್ಮ್ಯಾನ್ ಹಾಗೂ ವೈದ್ಯರು ಸಿದ್ದರಾಮಯ್ಯ ಅವರನ್ನ ಹಿಡಿದುಕೊಂಡಿದ್ದಾರೆ. ಕೂಡಲೇ ಕಾರಿನ ಒಳಗೆ ಕೂರಿಸಿ ಅವರಿಗೆ ಮಜ್ಜಿಗೆ ಅಥವಾ ಗ್ಲೂಕೋಸ್ ನೀಡಲಾಗಿದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಬಿಸಿಲಿನ ತಾಪಕ್ಕೆ ಹೀಗಾಯ್ತಾ? ಎಂಬ ಅನುಮಾನ ಕೂಡ ಮೂಡಿದೆ. ಸ್ವಲ್ಪ ಹೊತ್ತು ಕಾರಿನಲ್ಲೇ ಸುಧಾರಿಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ನಂತರ ಜನರತ್ತ ಕೈಬೀಸಿ ಅಲ್ಲಿಂದ ತೆರಳಿದರು.

ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ
ಇನ್ನು ಘಟನೆ ಸಂಬಂಧ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ಆತಂಕ ಪಡುವ ಅಗತ್ಯತೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ಕಾರಿನಿಂದ ಕುಸಿದ ವಿಡಿಯೋ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಮತ್ತೊಂದು ಕಡೆ ಈ ಘಟನೆಯಿಂದ ಸಿದ್ದರಾಮಯ್ಯ ಅವರ ಅಭಿಮಾನಿಗಳಲ್ಲಿ ಕ್ಷಣಕಾಲ ಆತಂಕ ನಿರ್ಮಾಣವಾಗಿತ್ತು. ಕೂಡಲೇ ಅವರನ್ನ ಕಾರಿನ ಒಳಗೆ ಕೂರಿಸಿ, ಮಜ್ಜಿಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಲೀಡರ್ಸ್ ಹೇಳಿದ್ದಾರೆ. ಈ ಮಾಹಿತಿ ನಂತರ ಸಿದ್ದರಾಮಯ್ಯ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ.
— Siddaramaiah (@siddaramaiah) April 29, 2023
ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ.
ಈಗ ಆರಾಮಾಗಿದ್ದೇನೆ.
ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ.
ಪ್ರಚಾರ ಕಾರ್ಯದಲ್ಲಿ ಸಿದ್ದರಾಮಯ್ಯ ಬ್ಯುಸಿ
ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಇರುವ ಕಾರಣ, ರಾಜ್ಯದ ವಿವಿಧೆಡೆ ಸಿದ್ದರಾಮಯ್ಯ ಪ್ರಚಾರಕ್ಕೆ ಭಾರಿ ಬೇಡಿಕೆ ಇದೆ. ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಸಿದ್ದರಾಮಯ್ಯ ಅವರ ಬಳಿ ಪ್ರಚಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ವಿಶ್ರಾಂತಿಯ ಕೊರತೆ ಕೂಡ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಹಾಗೇ ಬಿಸಿಲಿನ ತಾಪ ಕೂಡ ಹೆಚ್ಚಾಗಿದ್ದು ಅದರ ಪರಿಣಾಮ ಕೂಡ ತಳ್ಳಿಹಾಕುವಂತಿಲ್ಲ.

ಕೂಡ್ಲಿಗಿ ಹೆಲಿಪ್ಯಾಡ್ ಬಳಿ ಘಟನೆ
ಸಿದ್ದರಾಮಯ್ಯ ರಾಜ್ಯದ ಮೂಲೆ ಮೂಲೆಗೂ ತೆರಳುವ ಜವಾಬ್ದಾರಿ ಹೊತ್ತುಕೊಂಡಿರುವ ಹಿನ್ನೆಲೆ ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ಹೆಲಿಕಾಪ್ಟರ್ ಮೂಲಕ ಬ್ಯುಸಿ ಶೆಡ್ಯೂಲ್ ನಿಭಾಯಿಸಲು ಸಾಧ್ಯ. ಪ್ರತಿಯೊಂದು ರಾಜಕೀಯ ಪಕ್ಷಗಳು ಈಗ ಹೆಲಿಕಾಪ್ಟರ್ ಅವಲಂಬಿಸಿವೆ. ಹೀಗಾಗಿ ಇಂದು ಕೂಡ ಅವರು ಹೆಲಿಕಾಪ್ಟರ್ ಮೂಲಕ ವಿಜಯನಗರಕ್ಕೆ ಬಂದು ಇಳಿದರು. ಕೂಡ್ಲಿಗಿ ಹೆಲಿಪ್ಯಾಡ್ನಲ್ಲಿ ಇಳಿದು ಪ್ರತಿಯೊಬ್ಬರನ್ನೂ ಮಾತನಾಡಿಸಿದ್ದಾರೆ. ಅಲ್ಲಿಂದ ತೆರಳಿ ಕಾರು ಹತ್ತವ ಸಂದರ್ಭದಲ್ಲಿ ದಿಢೀರ್ ಈ ಘಟನೆ ನಡೆದುಬಿಟ್ಟಿದೆ. ಕಾರು ಹತ್ತುವಾಗ ಸಿದ್ದರಾಮಯ್ಯ ಕುಸಿದಿದ್ದಾರೆ.
ಸಿದ್ದರಾಮಯ್ಯ ಜೊತೆ ಆಪ್ತರ ಸಾಥ್
ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದು ಬಿದ್ದ ಘಟನೆ ಸಂಬಂಧ ಅವರ ಆಪ್ತ ಶಾಸಕರು ಹಾಗೂ ಕಾಂಗ್ರೆಸ್ ಲೀಡರ್ಸ್ ಮಾಹಿತಿ ನೀಡಿದ್ದು, ಈಗ ಯಾವುದೇ ಆತಂಕ ಪಡುವ ಅಗತ್ಯತೆ ಇಲ್ಲ. ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತೊಂದ್ಕಡೆ ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅವರ ಎಲೆಕ್ಷನ್ ಕ್ಯಾಂಪೇನ್ ವೇಳಾಪಟ್ಟಿ ಕೂಡ ಯಾವುದೇ ಬದಲಾವಣೆ ಕಂಡಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಈ ಮೊದಲು ನಿಗದಿ ಮಾಡಿದಂತೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.











Click it and Unblock the Notifications