ಗೋವಾ ಕನ್ನಡಿಗರ ಮನೆ ನೆಲಸಮಕ್ಕೆ ಸಿಎಂ ತೀವ್ರ ಅಸಮಾಧಾನ
ಬೆಂಗಳೂರು, ಸೆಪ್ಟೆಂಬರ್ 27: ಗೋವಾದ ಬೈನಾ ಬೀಚ್ನಲ್ಲಿ ಕನ್ನಡಿಗರು ವಾಸಿಸುತ್ತಿದ್ದ ಮನೆಗಳನ್ನು ನೆಲಸಮ ಮಾಡಿರುವ ಅಲ್ಲಿನ ಸರ್ಕಾರದ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಗೋವಾ ಸರ್ಕಾರ ಪದೇ ಪದೇ ಕನ್ನಡಿಗರ ಮೇಲೆ ಈ ರೀತಿಯ ವರ್ತನೆ ತೋರುವುದು ಸರಿಯಲ್ಲ,' ಎಂದು ಅವರು ಕಿಡಿ ಕಾರಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, "ಯಾವುದೇ ರಾಜ್ಯದಲ್ಲಿ ಹಲವಾರು ಭಾಷಿಕರು ವಾಸ ಮಾಡುತ್ತಾರೆ. ಗೋವಾದಲ್ಲಿ ಕನ್ನಡಿಗರು, ಕರ್ನಾಟಕದಲ್ಲಿ ಗೋವಾ, ತಮಿಳುನಾಡು, ಆಂಧ್ರ ಪ್ರದೇಶದವರು ಇದ್ದಾರೆ. ಅವರೆಲ್ಲರಿಗೂ ರಕ್ಷಣೆ ಕೊಡಬೇಕಾದದ್ದು ಅಲ್ಲಿನ ಸರ್ಕಾರದ ಜವಾಬ್ದಾರಿ," ಎಂದು ಅಭಿಪ್ರಾಯಪಟ್ಟರು.
"ಗೋವಾದಲ್ಲಿ ವಾಸ ಮಾಡುತ್ತಿದ್ದ ಕನ್ನಡಿಗರು ಕಾನೂನು ಉಲ್ಲಂಘಿಸಿ ಮನೆಗಳನ್ನು ಕಟ್ಟಿಕೊಂಡಿದ್ದರೆ ಕ್ರಮ ಕೈಗೊಳ್ಳಲಿ. ಆದರೆ, ಮನೆಗಳನ್ನು ಕೆಡವಿದ ಬಳಿಕ ಅವರಿಗೆ ಪುನರ್ವಸತಿ ಸೌಕರ್ಯ ಕಲ್ಪಿಸಬೇಕಿತ್ತು. ಕೂಡಲೇ ಸರ್ಕಾರ ಆ ಕೆಲಸ ಮಾಡಬೇಕು," ಎಂದು ಒತ್ತಾಯಿಸಿದರು.
ಗೋವಾ ಸರ್ಕಾರ ಕನ್ನಡಿಗರ ವಿರುದ್ಧ ತೋರಿರುವ ವರ್ತನೆಯನ್ನು ಖಂಡಿಸಿ ಅಲ್ಲಿನ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುತ್ತೇನೆ, ಕರೆಯನ್ನೂ ಮಾಡುತ್ತೇನೆ: @siddaramaiah
— CM of Karnataka (@CMofKarnataka) September 27, 2017
"ಒಕ್ಕೂಟ ವ್ಯವಸ್ಥೆಯಲ್ಲಿ ಸಾಮರಸ್ಯ ಉಳಿಯಬೇಕಾದರೆ ರಾಜ್ಯ, ರಾಜ್ಯಗಳ ನಡುವೆ ಪರಸ್ಪರ ಸಹಕಾರ, ಸಹಾಯ ಇರಬೇಕು. ಆಗ ಮಾತ್ರ ಆ ವ್ಯವಸ್ಥೆ ಉಳಿಯಲು ಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಗೋವಾ ನಡೆದುಕೊಳ್ಳಬೇಕು," ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.
ಇನ್ನು ಈ ಕುರಿತು ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುತ್ತೇನೆ. ದೂರವಾಣಿ ಮೂಲಕವೂ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.












Click it and Unblock the Notifications