ಸಿದ್ದರಾಮಯ್ಯ ಕನ್ನಡ ಪ್ರೀತಿ : ಸಾಲು-ಸಾಲು ಟ್ವೀಟ್
ಬೆಂಗಳೂರು, ಜನವರಿ 07 : '1 ರಿಂದ 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂಬುದು ನನ್ನ ಅಭಿಪ್ರಾಯ. ಭಾಷೆ ಎಂದರೆ ಜ್ಞಾನವಲ್ಲ, ಅದು ಕಲಿಕೆಯ ಮಾಧ್ಯಮ ಅಷ್ಟೆ.
ಇಂಗ್ಲೀಷ್ ಮಾಧ್ಯಮದಲ್ಲಿ ಓದಿದವರು ಮಾತ್ರ ಜ್ಞಾನಿಗಳು ಎಂಬ ತಪ್ಪು ಕಲ್ಪನೆ ಮೊದಲು ತೊಲಗಬೇಕು' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಭಾಷೆ, ಕನ್ನಡ ಮಾಧ್ಯಮದ ಬಗ್ಗೆ ಸಾಲು-ಸಾಲು ಟ್ವೀಟ್ ಮಾಡಿದ್ದಾರೆ. 'ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಪ್ರಯತ್ನ ನಡೆಸಿದಾಗ ಮಾತ್ರ ಪ್ರಾಂತೀಯ ಭಾಷೆಗಳ ರಕ್ಷಣೆ ಸಾಧ್ಯ' ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಭಾನುವಾರ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಭಾಷಣ ಮಾಡಿದ ಅವರು ಕನ್ನಡದ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ತಮ್ಮ ನಿಲುವನ್ನು ತೆರೆದಿಟ್ಟರು.
'ನಾನು ಮೊದಲ ಬಾರಿ ಶಾಸಕನಾದಾಗ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಕಾನೂನು ವಿದ್ಯಾರ್ಥಿಯಾಗಿದ್ದರೂ ಕನ್ನಡದ ಬಗ್ಗೆ ನನಗಿದ್ದ ಆಸಕ್ತಿಯೇ ಇಂತಹ ಮಹತ್ವದ ಜವಾಬ್ದಾರಿ ಸಿಗಲು ಕಾರಣ' ಎಂದು ಸಿದ್ದರಾಮಯ್ಯ ಟ್ವೀಟ್ನಲ್ಲಿ ತಿಳಿಸಿದ್ದಾರೆ.
|
ಕನ್ನಡ ಭೋಧನೆ ಕಡ್ಡಾಯ
2016 ರಲ್ಲಿ ನಮ್ಮ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧನೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣಕ್ಕೆ ಅವಕಾಶವಿದ್ದರೆ ಅದನ್ನು ಶೀಘ್ರವಾಗಿ ಮಾಡಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಕನ್ನಡ ಮಾಧ್ಯಮದಲ್ಲಿ ಓದಿ ವಿಜ್ಞಾನಿಗಳಾಗಿದ್ದಾರೆ
ಸಿ.ಎನ್.ಆರ್.ರಾವ್, ಸರ್.ಎಂ ವಿಶ್ವೇಶ್ವರಯ್ಯ ಅವರು ಕನ್ನಡ ಮಾಧ್ಯಮದಲ್ಲಿ ಓದಿ ವಿಜ್ಞಾನಿಗಳಾಗಿದ್ದಾರೆ. ಕನ್ನಡದಲ್ಲಿ ಓದಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುದು ತಪ್ಪು ಕಲ್ಪನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
|
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ
1 ರಿಂದ 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂಬುದು ನನ್ನ ಅಭಿಪ್ರಾಯ. ಭಾಷೆ ಎಂದರೆ ಜ್ಞಾನವಲ್ಲ, ಅದು ಕಲಿಕೆಯ ಮಾಧ್ಯಮ ಅಷ್ಟೆ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
|
ಕನ್ನಡಿಗರೇ ನಮ್ಮ ಭಾಷೆ ಗೌರವಿಸಬೇಕು
ಕನ್ನಡ ಭಾಷಿಗರು ಎಂದಿಗೂ ತಮ್ಮ ಮಾತೃಭಾಷೆಯ ಬಗ್ಗೆ ನಿರಭಿಮಾನಿಗಳಾಗಬೇಕಾದ ಅಗತ್ಯವಿಲ್ಲ. ಕನ್ನಡಿಗರಾದ ನಾವೇ ನಮ್ಮ ಭಾಷೆಯನ್ನು ಗೌರವಿಸದೆ ಹೋದರೆ, ನಾವೇ ಅದನ್ನು ಪ್ರೀತಿಸದೆ ಹೋದರೆ, ಬೇರೆಯವರಿಂದ ನಾವದನ್ನು ಅಪೇಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
|
ನಾವೆಲ್ಲ ಕನ್ನಡಿಗರು
ಪ್ರತ್ಯೇಕ ಉತ್ತರ ಕರ್ನಾಟಕದ ಬೇಡಿಕೆಯಿಟ್ಟವರು ಯಾರೂ ಜನಸಾಮಾನ್ಯರಲ್ಲ. ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಹೀಗೆ ಜನರ ಹಾದಿ ತಪ್ಪಿಸುತ್ತಿದ್ದಾರೆ. ನಾವು ಉತ್ತರ ಕರ್ನಾಟಕದಲ್ಲಿಯೇ ಇರಲಿ, ದಕ್ಷಿಣ ಕರ್ನಾಟಕದಲ್ಲಿಯೇ ಇರಲಿ ಎಲ್ಲರೂ ಕನ್ನಡಿಗರೇ ಎಂದು ಹೇಳಿದ್ದಾರೆ.
|
ಅಖಂಡ ಕರ್ನಾಟಕ
ಅಖಂಡ ಕರ್ನಾಟಕವನ್ನು ಉಳಿಸುವತ್ತ, ಬೆಳೆಸುವತ್ತ ನಾವೆಲ್ಲ ಒಂದಾಗಿ ಪ್ರಯತ್ನ ಮಾಡಬೇಕು. ಕರ್ನಾಟಕ ಬರಿ ರಾಜ್ಯವಲ್ಲ, ಅದು ನಮ್ಮ ಉಸಿರು ಎಂಬುದನ್ನು ನಾವು ಮರೆಯಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications