ರಾಹುಲ್ ಗಾಂಧಿ ಸಮ್ಮುಖದಲ್ಲಿ ರೈತರಿಗೆ ಪ್ಯಾಕೇಜ್ ಘೋಷಣೆ
ಹಾವೇರಿ, ಅಕ್ಟೋಬರ್ 10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಸಮ್ಮುಖದಲ್ಲಿ ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ರೈತರ ಎಲ್ಲಾ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡುವ ಪರಿಹಾರ ಧನ 5 ಲಕ್ಷಕ್ಕೆ ಹೆಚ್ಚಳ, ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ 2 ಸಾವಿರ ರೂ. ವಿಧವಾ ವೇತನ ನೀಡುವುದು ಸೇರಿದಂತೆ ಹಲವಾರು ಘೋಷಣೆಗಳನ್ನು ಮಾಡಲಾಗಿದೆ.
ಹಾವೇರಿಯ ಗುಡಗೂರಿನಲ್ಲಿ ಶನಿವಾರ ನಡೆದ ರೈತರ ಸಮಾವೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಸಿದ್ದರಾಮಯ್ಯ ಅವರು ಈ ಘೋಷಣೆಗಳನ್ನು ಮಾಡಿದರು. 'ರೈತರ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳಬಾರದು' ಎಂದು ಕರೆ ನೀಡಿದರು.[ರಾಹುಲ್ ಶನಿವಾರದ ಭೇಟಿಯ ಕ್ಷಣ-ಕ್ಷಣದ ಮಾಹಿತಿ]

'ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಶನಿವಾರ ಅವರು ಕೆಲವು ಘೋಷಣೆಗಳನ್ನು ಮಾಡಲಿದ್ದಾರೆ' ಎಂದು ಶುಕ್ರವಾರ ಮಂಡ್ಯದಲ್ಲಿ ರಾಹುಲ್ ಗಾಂಧಿ ಹೇಳಿದ್ದರು. ಅದರಂತೆ ಕರ್ನಾಟಕ ಸರ್ಕಾರ ರೈತರಿಗಾಗಿ ಇಂದು ಹಲವು ಘೋಷಣೆಗಳನ್ನು ಮಾಡಿದೆ. [ರಾಹುಲ್ ಗಾಂಧಿ ಮಂಡ್ಯದಲ್ಲಿ ಹೇಳಿದ್ದೇನು?]
ಕರ್ನಾಟಕದಲ್ಲಿ ಈ ವರ್ಷ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ 56 ಮತ್ತು ಹಾವೇರಿ ಜಿಲ್ಲೆಯಲ್ಲಿ 44, ತುಮಕೂರು 36, ಮೈಸೂರಿನಲ್ಲಿ 33 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎರಡು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಇಂದಿನ ಘೋಷಣೆಗಳು
* ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡುತ್ತಿದ್ದ ಪರಿಹಾರ 2ರಿಂದ 5 ಲಕ್ಷಕ್ಕೆ ಏರಿಕೆ
* ಮೃತ ರೈತರ ಮಕ್ಕಳ ಸ್ನಾತಕೋತ್ತರ ವಿದ್ಯಾಭ್ಯಾಸದ ತನಕದ ವೆಚ್ಚ ಸರ್ಕಾರದಿಂದ ಪಾವತಿ
* ರೈತರ ಅಲ್ಪ, ಮಧ್ಯಮ, ದೀರ್ಘಾವಧಿ ಸಾಲದ ಮೇಲಿನ ಎಲ್ಲಾ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ
* ರೈತ ಕುಟುಂಬಗಳಿಗೆ ಸರ್ಕಾರದಿಂದ ಜೀವವಿಮೆ
* ಮೃತ ರೈತರ ಪತ್ನಿಯ ವಿಧವಾ ಮಾಶಾಸನ 500 ರಿಂದ 2 ಸಾವಿರ ರೂ. ಗೆ ಏರಿಕೆ












Click it and Unblock the Notifications