ರಾಜಕೀಯ ಮರೆತು 'ಸೀತಾರಾಮ ಕಲ್ಯಾಣ'ದಲ್ಲಿ ಒಂದಾದ ನಾಯಕರು
Recommended Video

ಬೆಂಗಳೂರು, ಜನವರಿ 25 : ಅವರು ಬೇರೆ-ಬೇರೆ ಪಕ್ಷದ ರಾಜಕೀಯ ನಾಯಕರು. ಸರ್ಕಾರ, ಪ್ರತಿಪಕ್ಷ ಎಂದು ಸದಾ ಟೀಕಾ ಪ್ರಹಾರ ನಡೆಸುವವರು. ಆದರೆ, ಇಂದು ಎಲ್ಲರೂ ಒಂದಾಗಿ ಸೀತಾರಾಮ ಕಲ್ಯಾಣದಲ್ಲಿ ಪಾಲ್ಗೊಂಡು ಅಕ್ಷತೆ ಹಾಕಿ ಆಶೀರ್ವಾದ ಮಾಡಿದರು.
ಹೌದು, ಗುರುವಾರ ರಾತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಚಿತ್ರದ ಪ್ರೀಮಿಯರ್ ಶೋ ನಡೆಯಿತು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಿನಿಮಾವನ್ನು ವೀಕ್ಷಣೆ ಮಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಸಭೆ ಮುಗಿಸಿ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಯೇ ಸಿನಿಮಾ ವೀಕ್ಷಣೆಗೆ ತೆರಳಿದರು. ನಿಖಿಲ್ ಕುಮಾರಸ್ವಾಮಿ ಅವರಿಗೆ ಶುಭ ಹಾರೈಸಿದರು.

ಶಿವಮೊಗ್ಗ ನಗರ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸಹ ಸಿನಿಮಾ ನೋಡಲು ಆಗಮಿಸಿದ್ದರು. ನಿಖಿಲ್ ಕುಮಾರಸ್ವಾಮಿ ಅವರು ಈಶ್ವರಪ್ಪ ಅವರನ್ನು ಬರಮಾಡಿಕೊಂಡರು. ಸಿನಿಮಾಗೆ ಒಳ್ಳೆಯದಾಗಲಿ ಎಂದು ಈಶ್ವರಪ್ಪ ಹಾರೈಸಿದರು.
ಉಳಿದಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವರಾದ ಜಮೀರ್ ಅಹಮದ್ ಖಾನ್, ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಸೇರಿದಂತೆ ವಿವಿಧ ನಾಯಕರು ಸೀತಾರಾಮ ಕಲ್ಯಾಣ ಚಿತ್ರವನ್ನು ವೀಕ್ಷಣೆ ಮಾಡಿದರು.

ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ನಟಿಸಿರುವ ಸೀತಾರಾಮ ಕಲ್ಯಾಣ ಶುಕ್ರವಾರ ಬಿಡುಗಡೆಯಾಗುತ್ತಿದೆ. ನೃತ್ಯ ನಿರ್ದೇಶಕ ಹರ್ಷ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ರವಿಶಂಕರ್, ಶರತ್ ಕುಮಾರ್, ಚಿಕ್ಕಣ್ಣ, ಸಾಧುಕೋಕಿಲ, ಮಧುಬಾಲ, ಗಿರಿಜಾ ಲೋಕೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.












Click it and Unblock the Notifications