ಶಾಮನೂರು ಶಿವಶಂಕರಪ್ಪಗೆ ಮತಿಭ್ರಮಣೆ, ಮಾಜಿ ಸಚಿವರ ಆರೋಪಕ್ಕೆ ಆಕ್ರೋಶ
ಬೆಂಗಳೂರು, ಅಕ್ಟೋಬರ್ 25: "ಲಿಂಗಾಯತ ಪ್ರತ್ಯೇಕ ಧರ್ಮದ ಬೆಂಬಲಕ್ಕೆ ಸೆಳೆಯಲು ಕೆಲವು ಮಠಾಧೀಶರಿಗೆ ಹಣ, ಕಾರು ಕೊಡಲಾಗಿದೆ" ಎಂದು ಹೇಳಿಕೆ ನೀಡಿರುವ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಮತಿಭ್ರಮಣೆಯಾಗಿದೆ ಎಂದು ಲಿಂಗಾಯತ ಸ್ವತಂತ್ರ ಧರ್ಮದ 99 ಉಪಪಂಗಡಗಳ ಒಕ್ಕೂಟದ ಪ್ರಮುಖರು ಟೀಕಿಸಿದ್ದಾರೆ.
"ಕೂಡಲಸಂಗಮದ ಜಯಬಸವ ಮೃತ್ಯುಂಜಯ ಸ್ವಾಮೀಜಿಗೆ ಲಕ್ಷಾಂತರ ರುಪಾಯಿ ನಗದು, ಕಾರು ನೀಡಿದ್ದು, ಸರ್ಕಾರದಿಂದ 2.50 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ" ಎಂದು ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದರು.

ಕೂಡಲೇ ಈ ಆರೋಪವನ್ನು ಅವರು ಸಾಬಿತುಪಡಿಸಬೇಕು. ಇಲ್ಲದಿದ್ದರೆ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಕುರ್ಚಿ ಖಾಲಿ ಮಾಡಬೇಕು. ಅಲ್ಲದೇ ಕೂಡಲಸಂಗಮ ಸ್ವಾಮೀಜಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಎಲ್ಲೆಡೆ ಶಾಮನೂರು ಶಿವಶಂಕರಪ್ಪ ಪ್ರತಿಕೃತಿ ದಹನ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ಶಿವಶಂಕರಪ್ಪ ಅವರು ರಾತ್ರಿ 12ಕ್ಕೆ ಮಲಗಿ, ಮಧ್ಯಾಹ್ನ 12ಕ್ಕೆ ಏಳುವಂಥವರು. ಇವರಿಗೆ ವೀರಶೈವವು ಗೊತ್ತಿಲ್ಲ, ಲಿಂಗಾಯತವು ಗೊತ್ತಿಲ್ಲ. ಇನ್ನಾದರೂ ನಾಲಗೆ ಬಿಗಿ ಹಿಡಿದು ಮಾತನಾಡಲಿ. 80 ವರ್ಷ ದಾಟಿದ ಈ ವೃದ್ಧರು ಇನ್ನೂ ಅಧಿಕಾರದ ಆಸೆಯನ್ನು ಬಿಟ್ಟಿಲ್ಲ ಎಂದು ಟೀಕಿಸಲಾಗಿದೆ.
ವೀರಶೈವ ಮಹಾಸಭಾ ಅಧ್ಯಕ್ಷ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಸೌಲಭ್ಯಕ್ಕಾಗಿ ತಮ್ಮನ್ನು ಪರಿಶಿಷ್ಠ ಜಾತಿಯಲ್ಲಿ ಸೇರಿಸಿ ಎಂದು ಬೀದಿಗಿಳಿದು ಹೋರಾಟ ಮಾಡಿದ್ದ ಸ್ವಾಮೀಜಿಯನ್ನು ತಿಂಗಳ ಬಾಡಿಗೆಗೆ ತೆಗೆದುಕೊಂಡಿರುವ ಇವರು ತಮ್ಮ ಜೀವನ ಪೂರ್ತಿ ಹಣದ ಬಲದಿಂದಲೇ ಎಲ್ಲರನ್ನೂ ಕೊಂಡುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ವಾಭಿಮಾನಿ ಲಿಂಗಾಯತ ಸಮುದಾಯ ಇವರಿಗೆ ತಲೆ ಬಾಗದ ಕಾರಣ ಇದೀಗ ತಲೆ ಕೆಟ್ಟವರಂತೆ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಯುವ ಉಪಾಧ್ಯಕ್ಷ ಸಂಗಮೇಶ ಬಬಲೇಶ್ವರ, ಶಂಕರ ಗುಡಸ ಬೆಳಗಾವಿ, ವಿಠ್ಠಲ ಕೋಳೂರು ಸಿಂದಗಿ, ಭೀಮನಗೌಡ ಪರಗೊಂಡ ಕಲಬುರಗಿ, ರಾಜಣ್ಣ ಮರಳಪ್ಪನವರ ಧಾರವಾಡ, ಮಲ್ಲಿಕಾರ್ಜುನ ಕೊಟಗಿ ಬೀಳಗಿ, ಶೇಖರಗೌಡ ಗೌಡರ ಕೂಡಲಸಂಗಮ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications