ಹೆಚ್ಚಿದ ಬೇಡಿಕೆ: ಸಾರಿಗೆ ಇಲಾಖೆಗೆ 4000 ಹೊಸ ಬಸ್, 13,000 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ ಸರ್ಕಾರ
ಬೆಂಗಳೂರು, ಜುಲೈ. 14: ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ಘೋಷಿಸಿದಂತೆ ಮಹಿಳೆಯರಿಗೆ ರಾಜ್ಯದಾದ್ಯಂತ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯ ಅನುಷ್ಠಾನದ ನಂತರ ರಾಜ್ಯದಲ್ಲಿ ಬಸ್ಗಳಿಗೆ ಬೇಡಿಕೆ ಹೆಚ್ಚಿದ್ದು, ಕರ್ನಾಟಕ ಸರ್ಕಾರವು 4,000 ಹೊಸ ಬಸ್ಗಳನ್ನು ಖರೀದಿಸಲು ನಿರ್ಧಾರ ಮಾಡಿದೆ.
ಇದರ ಜೊತೆಗೆ ಸಾರಿಗೆ ಇಲಾಖೆಯಲ್ಲಿ ಚಾಲಕರು, ಕಂಡಕ್ಟರ್ಗಳು ಮತ್ತು ಮೆಕ್ಯಾನಿಕ್ಗಳು ಸೇರಿದಂತೆ 13,000 ಅಧಿಕಾರಿಗಳನ್ನು ನೇಮಕ ಮಾಡುವ ನಿರ್ಧಾರವನ್ನು ಗುರುವಾರ ಪ್ರಕಟಿಸಿದೆ. ಈ ಯೋಜನೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗವಾದ ಐದು ಗ್ಯಾರಂಟಿಗಳಲ್ಲಿ ಒಂದಾಗಿತ್ತು. ಈ ಯೋಜನೆಯನ್ನು ಕಳೆದ ತಿಂಗಳು ಪ್ರಾರಂಭಿಸಲಾಯಿತು. ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗುರುವಾರ ಮಾತನಾಡಿ, "ಕರ್ನಾಟಕದಲ್ಲಿ ಮಹಿಳೆಯರಿಗೆ ಐಷಾರಾಮಿ ಅಲ್ಲದ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ನೀಡುವ 'ಶಕ್ತಿ' ಯೋಜನೆ ಜೂನ್ 11 ರಿಂದ ಪ್ರಾರಂಭವಾದಾಗಿನಿಂದ ಕೆಎಸ್ಆರ್ಟಿಸಿಯ 'ಆದಾಯ' ಹೆಚ್ಚಾಗಿದೆ. ಶಕ್ತಿ ಯೋಜನೆಗೆ ಕೆಎಸ್ಆರ್ಟಿಸಿ ಮಾಡುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಮುಂದಿನ ಒಂಬತ್ತು ತಿಂಗಳಲ್ಲಿ ಈ ಯೋಜನೆಗೆ 2,900 ಕೋಟಿ ರೂಪಾಯಿ ಬೇಕಾಗುತ್ತದೆ, ಅದನ್ನು ನಾವು ನೀಡುತ್ತೇವೆ" ಎಂದು ಹೇಳಿದ್ದಾರೆ.
"ನಾವು ಕೆಎಸ್ಆರ್ಟಿಸಿಗೆ 13,000 ಚಾಲಕರು, ಕಂಡಕ್ಟರ್ಗಳು ಮತ್ತು ಮೆಕ್ಯಾನಿಕ್ಗಳನ್ನು ನೇಮಕ ಮಾಡಲಿದ್ದೇವೆ. ನಾವು ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳು ಮತ್ತು ಗಂಡಸರಿಗೆ ತೊಂದರೆಯಾಗದಂತೆ ನಾವು 4,000 ಹೊಸ ಬಸ್ಗಳನ್ನು ಖರೀದಿಸುತ್ತೇವೆ" ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಜುಲೈ 12 ರವರೆಗೆ 18 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯಡಿ ರಾಜ್ಯದಲ್ಲಿ ಪ್ರಯಾಣಿಸಿದ್ದಾರೆ ಎಂದು ಹೇಳಿದ ಅವರು, "ಮಹಿಳೆಯರು ಸಂತೋಷವಾಗಿದ್ದಾರೆ. 18 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದು ಮಹಿಳೆಯರ ಸಬಲೀಕರಣವಲ್ಲವೇ..? ಹಣ ಉಳಿತಾಯವಾಗಿದೆ. ಈಗ ಮಹಿಳೆಯರು ದೇವಸ್ಥಾನಗಳಿಗೆ ಮತ್ತು ಅವರ ಹೆತ್ತವರ ಮನೆಗಳಿಗೆ ಪ್ರಯಾಣಿಸುತ್ತಿದ್ದಾರೆ" ಎಂದಿದ್ದಾರೆ.

ಸಾರ್ವಜನಿಕ ಸಾರಿಗೆ ಮತ್ತು ಸಮೂಹ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರಕ್ಕೆ ತಜ್ಞರು ಕರೆ ನೀಡಿದ್ದು, ಇದರ ಮಧ್ಯೆ ಹೊಸ ಬಸ್ಗಳನ್ನು ಖರೀದಿಸುವ ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ನಿರ್ಧಾರವು ಬಂದಿದೆ. ಕೆಎಸ್ಆರ್ಟಿಸಿ ಶೀಘ್ರದಲ್ಲೇ ಹೊಸ ಸಿಬ್ಬಂದಿಯನ್ನು ಪಡೆಯಲಿದೆ. ಇತ್ತ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇನ್ನೂ ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ.












Click it and Unblock the Notifications