ಸೆ.10ರಂದು ಬಂದ್ : ಶಾಲೆಗಳ ಬೆಂಬಲವಿಲ್ಲ
ಬೆಂಗಳೂರು, ಸೆ.9 : ಕರ್ನಾಟಕದ ಜಲ್ವಂತ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಎಸ್ಎಫ್ಐ ಸೆ.10ರ ಬುಧವಾರ ಕರೆ ನೀಡಿರುವ ಬಂದ್ಗೆ ಯಾವ ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ಬೆಂಬಲ ಘೋಷಿಸಿಲ್ಲ. ಶಾಲೆಯಿಂದ ವಿಶ್ವವಿದ್ಯಾಲಯದ ತನಕ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡುವಂತೆ ಎಸ್ಎಫ್ಐ ಕರೆ ನೀಡಿದೆ.
ಹಿಂದಿನ ಸುದ್ದಿ : ಕರ್ನಾಟಕದ ಜ್ವಲಂತ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಲು ರಾಜ್ಯಾದ್ಯಂತ ಸೆ.10 ರಂದು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಬಂದ್ಗೆ ಎಸ್ಎಫ್ಐ ಕರೆ ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ)ದ ಅಧ್ಯಕ್ಷರಾದ ವಿ.ಅಂಬರೀಷ್ ಅವರು, ಕರ್ನಾಟಕದ ಶೈಕ್ಷಣಿಕ ಕ್ಷೇತ್ರ ಸಮಸ್ಯೆಗಳ ಗೂಡಾಗಿದೆ. 6 ರಿಂದ 14 ವರ್ಷದೂಳಗಿನ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಆರ್ಟಿಇ ಕಾಯ್ದೆ ರಾಜ್ಯದಲ್ಲಿ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣ ಕೇಂದ್ರಗಳನ್ನು ಸರ್ಕಾರ ಪ್ರಾರಂಭಿಸುವ ಬದಲಾಗಿ ಎಲ್.ಕೆ.ಜಿ, ಯು.ಕೆ.ಜಿ, ಬೇಬಿ ಸಿಟ್ಟಿಂಗ್ ನಡೆಸಲು ಖಾಸಗಿ ಅವರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಶಿಕ್ಷಣ ಕ್ಷೇತ್ರ ವ್ಯಾಪಾರಿಕರಣವಾಗುತ್ತಿದೆ ಎಂದು ಎಸ್ಎಫ್ಐ ಆರೋಪಿಸಿದೆ. [ವಿದ್ಯಾರ್ಥಿಗಳಿಗೆ ಮೋಡಿ ಮಾಡಲಿದ್ದಾರೆ ಮೋದಿ]
ರಾಜ್ಯದಲ್ಲಿ 1 ಲಕ್ಷ 68 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಿಸಿಯೂಟ ಯೋಜನೆಯನ್ನು ಖಾಸಗಿಕರಣ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿಷ್ಠಿತ ನಗರಗಳು ಸೇರಿದಂತೆ ರಾಜ್ಯದೆಲ್ಲೆಡೆ ನಾಯಿ ಕೂಡೆಯಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂದು ಎಸ್ಎಫ್ಐ ದೂರಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಹಲವಾರು ಸಮಸ್ಯೆಗಳಿದ್ದು, ಉನ್ನತ ಶಿಕ್ಷಣವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಸರ್ಕಾರಿ ವಿವಿಗಳನ್ನು ಬಲಪಡಿಸುವ ಬದಲು ಖಾಸಗಿ ವಿವಿಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಉನ್ನತ ಶಿಕ್ಷಣ ಹಣವಂತರಿಗೆ ಮಾತ್ರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್ಎಫ್ಐ ಹೇಳಿದೆ.
ಪ್ರಾಥಮಿಕ ಶಾಲೆಗಳಿಂದ ವಿವಿಯ ತನಕ ಶಿಕ್ಷಕರ ಮತ್ತು ಉಪನ್ಯಾಸಕರ ನೇಮಕಾತಿ ನಡೆಯುತ್ತಿಲ್ಲ. ಆದ್ದರಿಂದ ಶಾಲೆ ಮತ್ತು ಕಾಲೇಜುಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣವಿಲ್ಲ. ಹೀಗೆ ಸಾಲು-ಸಾಲು ಸಮಸ್ಯೆಗಳಿದ್ದು, ಆದ್ದರಿಂದ ನಾವೆಲ್ಲರೂ ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾವನ್ನು ಎಚ್ಚರಿಸಬೇಕಾಗಿದೆ ಎಂದು ಮನವಿ ಮಾಡಲಾಗಿದೆ.
ಆದ್ದರಿಂದ ಭಾರತ ವಿದ್ಯಾರ್ಥಿ ಫೆಡರೇಷನ್ ಕರೆ ನೀಡಿರುವ ಸೆ.10ರ ಬಂದ್ಗೆ ಎಲ್ಲಾ ಶಾಲೆ, ಕಾಲೇಜು ಮತ್ತು ವಿವಿಗಳು ಬೆಂಬಲ ನೀಡಿ ಬಂದ್ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications