ಕನ್ನಡ ಶಾಲೆ ಮುಚ್ಚಿದ್ದ ಮಹಾರಾಷ್ಟ್ರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ಆ.1 : ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅಕ್ಷೇಪಣಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಕುರಿತು ಉತ್ತರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿ ಮಹಾರಾಷ್ಟ್ರ ಸರ್ಕಾರ ಮರಾಠಿ ಶಾಲೆಗಳನ್ನು ತೆರೆಯುತ್ತಿದೆ. ಇದು ಮಹಾಜನ್ ವರದಿಯ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್.ಲೋಧಾ ನೇತೃತ್ವದ ತ್ರಿ ಸದಸ್ಯಪೀಠ, ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ಉತ್ತರ ನೀಡಲು ಆರು ವಾರಗಳ ಕಾಲಾವಕಾಶ ನೀಡಿತು.

ಅರ್ಜಿಯ ವಿಚಾರಣೆ ವೇಳೆ ಯಳ್ಳೂರಿನಲ್ಲಿ ಮರಾಠಿ ನಾಮಫಲಕ ಸ್ಥಾಪಿಸಿದ ವಿಚಾರವೂ ನ್ಯಾಯಪೀಠದ ಮುಂದೆ ಬಂದಿತು. ಮಹಾರಾಷ್ಟ್ರ ಪರ ವಕೀಲರಾದ ಹರೀಶ್ ಸಾಳ್ವೆ ಮಹಾರಾಷ್ಟ್ರ ಗಡಿಯಲ್ಲಿ ಕರ್ನಾಟಕದ ಪೊಲೀಸರು ಮರಾಠಿಗರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಹೇಳಿದರು. [ಬೆಳಗಾವಿಯಲ್ಲಿ ಏನಾಗುತ್ತಿದೆ?]
ಇದಕ್ಕೆ ಉತ್ತರ ನೀಡಿದ ಕರ್ನಾಟಕದ ವಕೀಲರು ಹೈಕೋರ್ಟ್ ನಿರ್ದೇಶನಂತೆ ಯಳ್ಳೂರಿನಲ್ಲಿ ಮರಾಠಿ ನಾಮಫಲಕವನ್ನು ತೆರವುಗೊಳಿಸಲಾಗಿದೆ. ರಾಜ್ಯ ಯಾವುದೇ ಕಾನೂನನ್ನು ಉಲ್ಲಂಘನೆ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಎರಡೂ ರಾಜ್ಯಗಳು ಸೌರ್ಹದತೆ ಕಾಪಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಉಭಯ ರಾಜ್ಯಗಳಿಗೆ ಸಲಹೆ ನೀಡಿದರು.
ಮಹಾಜನ್ ವರದಿ ಉಲ್ಲಂಘಿಸಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಆರು ವಾರಗಳಲ್ಲಿ ಉತ್ತರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.












Click it and Unblock the Notifications