ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮರು ಚಾಲನೆ; 5 ಅಭ್ಯರ್ಥಿಗಳ ಪಟ್ಟಿ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಸರ್ವೋದಯ ಕರ್ನಾಟಕ ಪಕ್ಷ 5 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗ ಪಕ್ಷಕ್ಕೆ ಮರು ಚಾಲನೆ ನೀಡಲಾಗಿದೆ.
ಬೆಂಗಳೂರು, ಜನವರಿ 24; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿವೆ. ಇಂತಹ ಸಂದರ್ಭದಲ್ಲಿಯೇ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮರು ಚಾಲನೆ ನೀಡಲಾಗಿದೆ. ಐದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಸಹ ಘೋಷಣೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮರು ಚಾಲನೆ ನೀಡಲಾಗಿದೆ. ಈ ಮೂಲಕ ರಾಜ್ಯದ ಚುನಾವಣಾ ಕಣದಲ್ಲಿ ಮತ್ತೊಮ್ಮೆ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಪಕ್ಷವನ್ನು ಸ್ವರಾಜ್ ಇಂಡಿಯಾ ಜೊತೆ ವಿಲೀನಗೊಳಿಸಲಾಗಿತ್ತು.
ಕೆಲವು ದಿನಗಳ ಹಿಂದೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷಕ್ಕೆ ಮರು ಚಾಲನೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಅಲ್ಲದೇ ಪಕ್ಷದ ನೂತನ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗಿತ್ತು. ಸಾಹಿತಿ ದೇವನೂರ ಮಹದೇವ ಮತ್ತುಅವರ ಪತ್ನಿ ಕೆ. ಸಾವಿತ್ರಿಬಾಯಿ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಹತ್ತದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಕ್ಷದ ನೂತನ ಪದಾಧಿಕಾರಿಗಳಾಗಿ ಚಾಮರಸ ಮಾಲಿಪಾಟೀಲ (ಅಧ್ಯಕ್ಷ), ಪ್ರಸನ್ನ ಎನ್. ಗೌಡ (ಪ್ರಧಾನ ಕಾರ್ಯದರ್ಶಿ), ಅಮ್ಜದ್ ಪಾಷ (ಕಾರ್ಯಾಧ್ಯಕ್ಷ), ಶಿವರಾಜ್ ರೇವಣ ಸಿದ್ದಯ್ಯ (ಕಾರ್ಯಾಧ್ಯಕ್ಷ) ಯಾದವ ರೆಡ್ಡಿ (ಉಪಾಧ್ಯಕ್ಷ) ಮತ್ತು ವಕ್ತಾರರಾಗಿ ಜೆ. ಎಂ. ವೀರಸಂಗಯ್ಯ ಮತ್ತು ಪುನೀತ್ ಎನ್. ಆಯ್ಕೆಯಾಗಿದ್ದಾರೆ.

ಸ್ವರಾಜ್ ಇಂಡಿಯಾ ಜೊತೆ ವಿಲೀನ
2005ರಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಆರಂಭವಾಗಿತ್ತು. ನಂತರದ ದಿನಗಳಲ್ಲಿ ಸ್ವರಾಜ್ ಇಂಡಿಯಾ ಜೊತೆ ಪಕ್ಷವನ್ನು ವಿಲೀನಗೊಳಿಸಲಾಗಿತ್ತು. ಆದರೆ ಈಗ ಸ್ವರಾಜ್ ಇಂಡಿಯಾ ಪಕ್ಷವು 2024ರ ಚುನಾವಣೆ ತನಕ ರಾಜಕೀಯದಿಂದ ದೂರ ಇರಲು ನಿರ್ಧರಿಸಿದೆ. ಆದ್ದರಿಂದ ಸರ್ವೋದಯ ಕರ್ನಾಟಕ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷಕ್ಕೆ ಮರು ಚಾಲನೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಸೋಮವಾರ ಬೆಂಗಳೂರು ನಗರದಲ್ಲಿ ನಡೆದ ಸಮಾರಂಭದಲ್ಲಿ ಪಕ್ಷಕ್ಕೆ ಮರು ಚಾಲನೆ ನೀಡಲಾಗಿದೆ.

ಪಕ್ಷದ ಅಧ್ಯಕ್ಷರು ಹೇಳಿದ್ದೇನು?
ಪಕ್ಷದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, "ಪಕ್ಷವನ್ನು ಸ್ವರಾಜ್ ಇಂಡಿಯಾ ಜೊತೆ ವಿಲೀನಗೊಳಿಸಲಾಗಿತ್ತು. ಈಗ ಪ್ರಾದೇಶಿಕವಾಗಿಯೇ ಉಳಿಯಲು ತೀರ್ಮಾನಿಸಿ ಮರು ಚಾಲನೆ ನೀಡಲಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಯ್ದ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಬಡಗಲಪುರ ನಾಗೇಂದ್ರ ಮಾತು
ಸರ್ವೋದಯ ಕರ್ನಾಟಕ ಪಕ್ಷದ ಕೋರ್ ಕಮಿಟಿಯಲ್ಲಿ ಸಾಹಿತಿ ದೇವನೂರ ಮಹದೇವ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಇಂದೂಧರ ಹೊನ್ನಾಪುರ ಮುಂತಾದವರು ಇದ್ದಾರೆ. 15 ಜಿಲ್ಲಾ ಘಟಕಗಳನ್ನು ರಚನೆ ಮಾಡಲಾಗಿದೆ.
ಪಕ್ಷದ ಮರು ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ, "ದೇವನೂರ ಮಹದೇವ ಮತ್ತು ಕೆ. ಎಸ್. ಪುಟ್ಟಣ್ಣಯ್ಯ ಅವರ ಒತ್ತಾಸೆಯಂತೆ 2005ರಲ್ಲಿ ಆರಂಭವಾದ ಕರ್ನಾಟಕ ಸರ್ವೋದಯ ಪಕ್ಷವು ನಂತರದ ದಿನಗಳಲ್ಲಿ ಸ್ವರಾಜ್ ಇಂಡಿಯಾ ಜೊತೆ ವಿಲೀನವಾಗಿತ್ತು. ಈಗ ಪಕ್ಷಕ್ಕೆ ಮರು ಚಾಲನೆ ನೀಡಲಾಗಿದೆ" ಎಂದರು.

ಪಕ್ಷದ ಅಭ್ಯರ್ಥಿಗಳ ಪಟ್ಟಿ
2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
* ಮೇಲುಕೋಟೆ - ದರ್ಶನ್ ಪುಟ್ಟಣ್ಣಯ್ಯ
* ಮಂಡ್ಯ - ಮಧು ಚಂದನ್ ಎ. ಸಿ.
* ವಿರಾಜಪೇಟೆ- ಮನು ಸೋಮಯ್ಯ
* ಬೆಳ್ತಂಗಡಿ - ಆದಿತ್ಯ ಕೊಲ್ಲಾಜೆ
* ಬೀಳಗಿ - ಶೈಲಾ ನಾಯಕ್












Click it and Unblock the Notifications