ವಿಡಿಯೋ; ಆಪಾದನೆ ಸಾಬೀತು ಮಾಡಿ ಎಚ್ಡಿಕೆ ಆರಗ ಜ್ಞಾನೇಂದ್ರ ಸವಾಲು
ಬೆಂಗಳೂರು, ಜನವರಿ 09; ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೊ ರವಿ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಕಿಂಗ್ಪಿನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸ್ಯಾಂಟ್ರೊ ರವಿ ಬಗ್ಗೆ ಮಾತನಾಡುವಾಗ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಸ್ಯಾಂಟ್ರೋ ರವಿ ಹಣ ಎಣಿಸಿದ್ದು ಗೃಹ ಸಚಿವರ ಮನೆಯಲ್ಲಿಯೇ" ಎಂದು ಆರೋಪ ಮಾಡಿದ್ದರು.
ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಅತ್ಯಂತ ಬೇಜವಾಬ್ದಾರಿಯಿಂದ ಹೇಳುವ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಶ್ರೀ @hd_kumaraswamy ಯವರು ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ವೇದ್ಯವಾಗುತ್ತದೆ.
— Araga Jnanendra (@JnanendraAraga) January 9, 2023
ಅವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಬೇಕು. pic.twitter.com/VaTK2SMdT7
ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ವಿಡಿಯೋ ಮೂಲಕ ಕುಮಾರಸ್ವಾಮಿ ಆರೋಪಕ್ಕೆ ಪ್ರಕ್ರಿಯೆ ನೀಡಿದ್ದಾರೆ. 'ಅವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಬೇಕು' ಎಂದು ಸವಾಲು ಹಾಕಿದ್ದಾರೆ.

'ಸ್ಯಾಂಟ್ರೊ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಅತ್ಯಂತ ಬೇಜವಾಬ್ದಾರಿಯಿಂದ ಹೇಳುವ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಶ್ರೀ ಎಚ್. ಡಿ. ಕುಮಾರಸ್ವಾಮಿ ಯವರು ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ವೇದ್ಯವಾಗುತ್ತದೆ' ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವ್ಯಂಗ್ಯವಾಡಿದ ಕಾಂಗ್ರೆಸ್; ಸ್ಯಾಂಟ್ರೊ ರವಿ ವಿರುದ್ಧ ಮೈಸೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಈ ಕುರಿತು ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯಕ್ತರಿಗೆ ಸೂಚನೆ ನೀಡಿದ್ದಾರೆ.
ಆದರೆ ಸ್ಯಾಂಟ್ರೊ ರವಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಈ ಕುರಿತು ಟ್ವೀಟ್ ಮಾಡಿದ್ದು, ಸರ್ಕಾರವನ್ನು ವ್ಯಂಗ್ಯವಾಡಿದೆ.
'ಸರ್ಕಾರದ ಚೀಫ್ ಬ್ರೋಕರ್ ಸ್ಯಾಂಟ್ರೋ ರವಿಯನ್ನು ಇನ್ನೂ ಬಂಧಿಸಲಾಗಿಲ್ಲ, ಪತ್ನಿಯ ದೂರಿನ ಹೊರತಾಗಿ ಬೇರೆ ದೂರು ದಾಖಲಾಗಿಲ್ಲ, ತನಿಖೆಗೆ ಮುಂದಾಗಿಲ್ಲ. ತಮ್ಮ ಮಗನ ಸ್ವೀಟ್ ಬ್ರದರ್ನನ್ನು ರಕ್ಷಿಸುತ್ತಿರುವುದು ಯಾರು Basavaraj Bommai ಅವರೇ?' ಎಂದು ಕಾಂಗ್ರೆಸ್ ಕೇಳಿದೆ.
'ಆತನನ್ನು ಮುಟ್ಟಿದರೆ 'ಸಿಡಿ ಕ್ರಾಂತಿ' ಆಗಿಬಿಡುವ ಭಯವೇ? ಸರ್ಕಾರದ ಅಕ್ರಮಗಳು ಹೊರಬರುವ ಆತಂಕವೇ?. ಸ್ಯಾಂಟ್ರೋ ರವಿಯನ್ನ ಪೊಲೀಸರು ಹುಡುಕುತ್ತಿದ್ದಾರಂತೆ!. ಗೃಹ ಇಲಾಖೆಯ ವರ್ಗಾವಣೆಯ ಹೊಣೆ ಹೊತ್ತವನು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದು ಪರಮ ಹಾಸ್ಯವಲ್ಲವೇ!' ಎಂದು ಸರ್ಕಾರದ ಕಿವಿ ಹಿಂಡಿದೆ.
'ಪೊಲೀಸರು ಆತನನ್ನು ಒಮ್ಮೆ ಗೃಹಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸಿಗಬಹುದೇನೋ!. ಸಿಡಿ ಸರ್ಕಾರದ ಸಂಪೂರ್ಣ ಜಾತಕ ಆತನ ಬಳಿ ಇರುವಾಗ ಆತನ ತನಿಖೆ ಸಾಧ್ಯವೇ?' ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.












Click it and Unblock the Notifications