ಸೆ.26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ
ಬೆಂಗಳೂರು, ಆಗಸ್ಟ್ 18 : ಅಂತೂ ಇಂತು ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆಯಲು ಕೆ.ಎಸ್.ಈಶ್ವರಪ್ಪ ವೇದಿಕೆ ಸಿದ್ಧಪಡಿಸಿದ್ದಾರೆ. ಸೆಪ್ಟೆಂಬರ್ 26ರಂದು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆಯಾಗಲಿದೆ.
ಬೆಂಗಳೂರಿನ ಶಾಸಕರ ಭವನದಲ್ಲಿ ಗುರುವಾರ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಯಿತು. ಮಾಜಿ ಸಂಸದ ವಿರೂಪಾಕ್ಷಪ್ಪ, ಮುಕುಡಪ್ಪ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶಮೂರ್ತಿ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.[ರಾಯಣ್ಣ ಬ್ರಿಗೇಡ್ : ಯಡಿಯೂರಪ್ಪ, ಈಶ್ವರಪ್ಪ ಜಟಾಪಟಿ]
ಸಭೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ಬಗ್ಗೆ ಅಂತಿಮ ರೂಪುರೇಷೆಯನ್ನು ತಯಾರು ಮಾಡಲಾಯಿತು. ಬ್ರಿಗೇಡ್ನ ಸಂಚಾಲಕರು ಮತ್ತು ವಕ್ತಾರರನ್ನು ನೇಮಕ ಮಾಡಲಾಯಿತು. ಇನ್ನೆರಡು ದಿನದಲ್ಲಿ ಬ್ರಿಗೇಡ್ ನೋಂದಣಿ ಮಾಡಿಸಲು ತೀರ್ಮಾನವನ್ನು ಕೈಗೊಳ್ಳಲಾಯಿತು.[ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ರಹಸ್ಯ ಬಯಲು!]
ಸೆಪ್ಟೆಂಬರ್ 26ರ ಸೋಮವಾರ ಹಾವೇರಿಯಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಸ್ಥಾಪನೆಯಾಗಲಿದ್ದು, ಅಂದು ಮೊದಲ ಸಮಾವೇಶ ನಡೆಯಲಿದೆ. ಬ್ರಿಗೇಡ್ ಸ್ಥಾಪನೆ ಮಾಡುವ ಮೂಲಕ ಕೆ.ಎಸ್.ಈಶ್ವರಪ್ಪ ಅವರು ಹಿಂದುಳಿದ ಮತ್ತು ಕುರುಬ ಸಮುದಾಯದ ನಾಯಕರರಾಗಿ ಹೊರಹೊಮ್ಮಲಿದ್ದಾರೆ......

ಯಡಿಯೂರಪ್ಪಗೆ ಅಧಿಕಾರ ಕೊಡಿಸುವುದು ಗುರಿ
ಸಭೆಯ ಬಳಿಕ ಮಾತನಾಡಿದ ಮಾಜಿ ಸಂಸದ ವಿರೂಪಾಕ್ಷಪ್ಪ ಅವರು, 'ದಲಿತ ಮತ್ತು ಹಿಂದುಳಿದವರಿಗೆ ಯಡಿಯೂರಪ್ಪ ಅವರ ಮೂಲಕ ಅಧಿಕಾರ ಕೊಡಿಸುವುದೇ ನಮ್ಮ ಗುರಿ' ಎಂದು ಹೇಳಿದರು.

ಯಡಿಯೂರಪ್ಪ ಅವರೇ ನಮ್ಮ ಸಿಎಂ ಅಭ್ಯರ್ಥಿ
ಸಭೆಯ ಬಳಿಕ ಮಾತನಾಡಿದ ಮುಕುಡಪ್ಪ ಅವರು, 'ಸಂವಿಧಾನದ ಆಶಯ ಈಡೇರಿಸಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಲಾಗುತ್ತಿದೆ. ಬ್ರಿಗೇಡ್ನಲ್ಲಿ ಜಿಲ್ಲಾ, ತಾಲೂಕು ಮತ್ತು ವಿದ್ಯಾರ್ಥಿ ಸಮಿತಿ ರಚನೆ ಮಾಡಲಾಗುತ್ತದೆ. ಯಡಿಯೂರಪ್ಪ ಅವರು ನಮ್ಮ ಸಿಎಂ ಅಭ್ಯರ್ಥಿ' ಎಂದು ಹೇಳಿದರು.

ಯಾವುದೇ ರಾಜಕೀಯ ಉದ್ದೇಶವಿಲ್ಲ
ಸಭೆಯ ಬಳಿಕ ಮಾತನಾಡಿದ ಬ್ರಿಗೇಡ್ನ ವಕ್ತಾರ ಚಿ.ನಾ.ರಾಮು ಅವರು, 'ಬ್ರಿಗೇಡ್ ಸ್ಥಾಪನೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಹಿಂದುಳಿದ ವರ್ಗದವರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಆದ್ದರಿಂದ, ಎಲ್ಲರೂ ಒಟ್ಟಾಗಿರಲು ಬ್ರಿಗೇಡ್ ಸ್ಥಾಪನೆ ಮಾಡಿದ್ದೇವೆ' ಎಂದರು.

ಬಿಜೆಪಿಗೆ ಶಕ್ತಿ ತುಂಬಲು ಬ್ರಿಗೇಡ್
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಬಿಜೆಪಿಗೆ ವಿರುದ್ಧವಾಗಿ ಸ್ಥಾಪನೆ ಮಾಡುತ್ತಿಲ್ಲ. ಬಿಜೆಪಿಗೆ ಶಕ್ತಿ ತುಂಬಲು ಸ್ಥಾಪಿಸಲಾಗುತ್ತಿದೆ' ಎಂದು ಮುಕುಡಪ್ಪ ಹೇಳಿದರು.

ಯಡಿಯೂರಪ್ಪಗೆ ಸೆಡ್ಡು
ಕೆ.ಎಸ್.ಈಶ್ವರಪ್ಪ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ಮೂಲಕ ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆದಿದ್ದಾರೆ. 'ಬ್ರಿಗೇಡ್ ಹುಟ್ಟು ಹಾಕುವುದರಿಂದ ಪಕ್ಷದ ಸಂಘಟನೆಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ, ಈ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು. ಪಕ್ಷದಲ್ಲಿರುವ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಮುಂತಾದ ಮೋರ್ಚಾಗಳಿವೆ ಇವುಗಳ ಮೂಲಕವೇ ಹಿಂದುಳಿದ ವರ್ಗದವರನ್ನು ಸಂಘಟಿಸಬೇಕು' ಎಂದು ಯಡಿಯೂರಪ್ಪ ಸೂಚನೆ ನೀಡಿದ್ದರು.












Click it and Unblock the Notifications