ಯಜಮಾನ ಸಂಬಳ ನೀಡಿಲ್ಲ, ನೌಕರ ಮೊಬೈಲ್ ಟವರ್ ಏರಿದ !
ಉಡುಪಿ, ಆಗಸ್ಟ್ 11: ವರ್ಷಾನುಗಟ್ಟಲೆ ಕೆಲಸ ಮಾಡಿಸಿಕೊಂಡ ಮಾಲೀಕ ಸಂಬಳ ಮತ್ತು ಅರಿಯರ್ಸ್ ನೀಡಿಲ್ಲವೆಂದು ಯುವಕನೊಬ್ಬ ಮೊಬೈಲ್ ಟವರ್ ಏರಿ ಕೆಳಗೆ ಬಿದ್ದು ಸಾಯ್ತೀನಿ ಎಂದು ಧಮ್ಕಿ ಹಾಕಿದ ಘಟನೆ ಜಿಲ್ಲೆಯ ವಂಡ್ಸೆಯಲ್ಲಿ ವರದಿಯಾಗಿದೆ.
ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರು ಅಂತೂ ಇಂತು, 28 ವರ್ಷದ ಕೇರಳ ಮೂಲದ ಯುವಕನನ್ನು ಸಮಾಧಾನ ಮಾಡಿ ಮೊಬೈಲ್ ಟವರಿನಿಂದ ಕೆಳಗಿಳಿಸುವಲ್ಲಿ ಹೈರಾಣವಾಗಿ ಹೋಗಿದ್ದಾರೆ.
ಘಟನೆಯ ಬಗ್ಗೆ: ಕೇರಳ ಮೂಲದ ಬಿಜು ಎನ್ನುವಾತ ಈ ಘಟನೆಯ ಕಥಾನಾಯಕ, ಶಶಿಧರನ್ ಈತನ ಮಾಲೀಕ. ಇಬ್ಬರೂ ಗಾಡ್ಸ್ ಓನ್ ಕಂಟ್ರಿಯವರು.
ಮಾಲೀಕ ಶಶಿಧರನ್ ಕಳೆದ 24ವರ್ಷದಿಂದ ಕೊಲ್ಲೂರು ಬಳಿಯ ಗ್ರಾಮದಲ್ಲಿ ನೆಲಸಿದ್ದಾನೆ. ಕಟ್ಟಡಗಳಿಗೆ ಕಾಂಕ್ರೀಟ್ ರಿಂಗ್ ತಯಾರು ಮಾಡುವುದು , ಬಾವಿ ಸ್ವಚ್ಚಗೊಳಿಸುವುದು ಈತನ ಕಾಯಕ. ಕೇರಳದ ಹಲವಾರು ಯುವಕರು ಈತನ ಜೊತೆ ಕೆಲಸ ಮಾಡುತ್ತಿದ್ದಾರೆ.
ಶಶಿಧರನ್ ಬಳಿ ಬಿಜು ಎನ್ನುವಾತ ಸುಮಾರು ಎಂಟು ವರ್ಷದಿಂದ ಕೆಲಸ ಮಾಡುತ್ತಿದ್ದ. ಸಂಬಳ, ಸವಲತ್ತು, ಅದು ಇದು ಸೇರಿ ಮಾಲೀಕ ಶಶಿಧರನ್ ಅರವತ್ತು ಸಾವಿರ ರೂಪಾಯಿಯನ್ನು ಬಿಜುಗೆ ಬಾಕಿ ಉಳಿಸಿಕೊಂಡಿದ್ದಂತೆ.
ಬಾಕಿ ಕೊಡಬೇಕಾದ ಹಣವನ್ನು ಕೊಡಲು ಬಿಜು ಒತ್ತಾಯಿಸುತ್ತಲೇ ಇದ್ದರೂ, ಮಾಲೀಕ ಇವತ್ತು, ನಾಳೆ ಅನ್ಕೊಂಡು ದಿನ ಮುಂದೂಡುತ್ತಿದ್ದ. ಕೊನೆಗೆ ಬಾಕಿ ಹಣದಲ್ಲಿ ಹತ್ತು ಸಾವಿರ ರೂಪಾಯಿ ಚುಕ್ತಾ ಮಾಡಿದ್ದಾನೆ.
ಪೂರ್ತಿ ಹಣ ನೀಡದ ಯಜಮಾನನ ಮೇಲೆ ಸಿಟ್ಟಿಗೆದ್ದ ಬಿಜು ಸೀದಾ ಬೆಳ್ಲಂಬೆಳಗ್ಗೆ ವಂಡ್ಸೆ ಮುಖ್ಯ ರಸ್ತೆಯಲ್ಲಿರುವ ಮುನ್ನೂರು ಅಡಿ ಎತ್ತರದ ರಿಲಯನ್ಸ್ ಮೊಬೈಲ್ ಟವರ್ ಏರಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಧಮ್ಕಿ ಹಾಕಲಾರಂಭಿಸಿದ.
ಬಿಜು ಮೊಬೈಲ್ ಟವರ್ ಏರಿದ ಘಟನೆ ಸುದ್ದಿಯಾಗುತ್ತಿದ್ದಂತೇ, ನೂರಾರು ಜನ ಅಲ್ಲಿ ಜಮಾಯಿಸಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ದಳದವರು, ಕೊಲ್ಲೂರು ಠಾಣಾ ಪೊಲೀಸರು ಎಷ್ಟು ಮನವೊಲಿಸಲು ಪ್ರಯತ್ನಿಸಿದರೂ ಬಿಜು ಕೆಳಗಿಳಿಯಲು ಒಪ್ಪಲಿಲ್ಲ.
ಕೊನೆಗೆ ಎಲ್ಲಿದ್ದರೋ ಏನೋ, ಮಾಲೀಕ ಶಶಿಧರನ್ ಸ್ಥಳಕ್ಕೆ ಧಾವಿಸಿ ಇನ್ನೆರಡು ದಿನದಲ್ಲಿ ಬಾಕಿ ಎಲ್ಲಾ ಹಣವನ್ನು ಚುಕ್ತಾ ಮಾಡುವುದಾಗಿ ಬಿಜುವಿಗೆ ಎಲ್ಲರ ಮುಂದೆ ಭರವಸೆ ನೀಡಿದ.
ಮಾಲೀಕನ ಭರವಸೆಯ ನಂತರ ಬಿಜುವಿನ ಆತ್ಮಹತ್ಯೆಯ ಕಾವು ತಣ್ಣಗಾಗಿದೆ, ಆಗ ಅಗ್ನಿಶಾಮಕ ದಳದ ಸಿಬ್ಬಂದಿ ಟವರ್ ಏರಿ ಬಿಜುವನ್ನು ಧರೆಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಮಾಹಿತಿ: ಡೈಜಿವರ್ಲ್ಡ್)