ಜನರ ಆಕ್ರೋಶಕ್ಕೆ ಸಿಕ್ಕ ಕೆಂಪು ಬಸ್; ಕೆಎಸ್ಆರ್ಟಿಸಿಗೆ ನಷ್ಟವೆಷ್ಟು?
ಬೆಂಗಳೂರು, ಸೆಪ್ಟೆಂಬರ್ 16 : 'ಬೇಡ, ಬೇಡ. ಬೆಂಕಿಬೇಡ, ಆವೇಶಕ್ಕೆ ನನ್ನನ್ನು ಬಲಿ ಕೊಡದಿರಿ, ನಾನು ನಿಮ್ಮ ಸೇವಕ' ಇದು ಕೆಎಸ್ಆರ್ಟಿಸಿ ಬಸ್ಗಳ ಕೂಗು. ಮೂರು ವರ್ಷಗಳಲ್ಲಿ ಜನರ ಆಕ್ರೋಶದಿಂದಾಗಿ ಕೆಎಸ್ಆರ್ಟಿಸಿಗೆ 21 ಕೋಟಿ ರೂ. ನಷ್ಟವಾಗಿದೆ.
ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನ ಖಂಡಿಸಿ ರಾಮನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಆಗ ಕೆಎ 11, ಎಫ್ 0469 ನಂಬರ್ನ ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ ಹಚ್ಚಲಾಗಿತ್ತು. ರಾಮನಗರ ವಿಭಾಗದ ಕನಕಪುರ ಘಟಕಕ್ಕೆ ಸೇರಿದ ಬಸ್ ಇದಾಗಿತ್ತು.
ಕೆಎಸ್ಆರ್ಟಿಸಿ ಸುಟ್ಟು ಹೋದ ಈ ಬಸ್ ಅನ್ನು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದೆ. ಬಸ್ ಸುಡಬೇಡಿ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಕಳೆದ ಮೂರು ವರ್ಷದಲ್ಲಿ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಬಸ್ಗೆ ಬೆಂಕಿ ಹಚ್ಚಿದ್ದರಿಂದ ಸಂಸ್ಥೆಗೆ 21 ಕೋಟಿ ರೂ. ನಷ್ಟ ಉಂಟಾಗಿದೆ.
ಕಳೆದ ವಾರ ನಡೆದ ಪ್ರತಿಭಟನೆ ವೇಳೆ ಬೆಂಕಿಗೆ ಆಹುತಿಯಾದ ಬಸ್ 29/12/2017ರಲ್ಲಿ ಕೆಎಸ್ಆರ್ಟಿಸಿಗೆ ಸೇರಿತ್ತು. 4/9/2019ರಂದು ಬಸ್ಗೆ ಬೆಂಕಿ ಹಚ್ಚಲಾಗಿದೆ. 2,64,000 ಕಿ. ಮೀ. ಸಂಚಾರ ನಡೆಸಿತ್ತು. ಕನಕಪುರ-ಮಳವಳ್ಳಿ-ಮೈಸೂರು ಮತ್ತು ಕನಕಪುರ- ಚುಂಚಿ ಕಾಲೋನಿ ಮಾರ್ಗದಲ್ಲಿ ಸಂಚಾರ ನಡೆಸುತ್ತಿತ್ತು.

ಬಸ್ಗಳ ಕಾರ್ಯಾಚರಣೆ
ಸಾಮಾನ್ಯವಾಗಿ ಬಂದ್, ಪ್ರತಿಭಟನೆ ನಡೆಯುವಾಗ ಪರಿಸ್ಥಿತಿ ನೋಡಿಕೊಂಡು ಬಸ್ಗಳನ್ನು ಓಡಿಸಲಾಗುತ್ತದೆ. ಆದರೆ, ಮೊದಲು ಕಲ್ಲು ಬೀಳುವುದು ಬಸ್ಗಳಿಗೆ. ಜನರ ಆಕ್ರೋಶ ಹೆಚ್ಚಾಗಿ ಬಸ್ಗೆ ಬೆಂಕಿ ಹಚ್ಚಿದ ಉದಾಹರಣೆಗಳು ಇವೆ.

244 ಬಸ್ ಜಖಂಗೊಂಡಿವೆ
ಮೂರು ವರ್ಷದಲ್ಲಿ ಪ್ರತಿಭಟನಾನಿರತರ ಆಕ್ರೋಶಕ್ಕೆ ಸಿಲುಕಿ 244 ಬಸ್ಗಳು ಹಾನಿಯಾಗಿವೆ. 5 ಬಸ್ ಸುಟ್ಟು ಕರಕಲಾಗಿವೆ. 2016-17ರಲ್ಲಿ 171 ಬಸ್ ಜಖಂಗೊಂಡಿದ್ದು, 4 ಬಸ್ಗಳಿಗೆ ಬೆಂಕಿ ಹಚ್ಚಲಾಗಿದೆ.

ಜಖಂಗೊಂಡ ಬಸ್ಗಳ ಲೆಕ್ಕ
2017-18ರಲ್ಲಿ 16 ಬಸ್, 2018-19ರಲ್ಲಿ 34 ಬಸ್, 2019ರಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ ತನಕ 23 ಬಸ್ಗಳಿಗೆ ಹಾನಿಯಾಗಿದೆ. 3 ವರ್ಷಗಳಲ್ಲಿ ಕೆಎಸ್ಆರ್ಟಿಸಿಗೆ 21 ಕೋಟಿ ರೂ. ನಷ್ಟ ಉಂಟಾಗಿದೆ.

ಬಸ್ ಸ್ಥಗಿತದಿಂದಾಗಿ ನಷ್ಟ
ಬಂದ್, ಪ್ರತಿಭಟನೆ ವೇಳೆ ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಇದರಿಂದಾಗಿ 2018-19ನೇ ಸಾಲಿನಲ್ಲಿ 13.16 ಕೋಟಿ ನಷ್ಟ ಕೆಎಸ್ಆರ್ಟಿಸಿಗೆ ಆಗಿದೆ.












Click it and Unblock the Notifications