ರೋಷನ್ ಬೇಗ್ ಪಾಲಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಬಂದ್!
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ವೈಖರಿ, ಎಕ್ಸಿಟ್ ಪೋಲ್, ಎನ್ಡಿಎ ಅಧಿಕಾರಕ್ಕೇರುವ ಸಾಧ್ಯತೆ ಕುರಿತಂತೆ ಮಾಜಿ ಸಚಿವ, ಶಾಸಕ ರೋಷನ್ ಬೇಗ್ ಅವರು ಗರಂ ಆಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ದ ವಾಗ್ದಾಳಿ ನಡೆಸಿದ್ದಕ್ಕೆ ಈಗ ಬೆಲೆ ತೆತ್ತಿದ್ದಾರೆ. ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಸಿದ್ದರಾಮಯ್ಯ ವಿರುದ್ದ ಧ್ವನಿ ಎತ್ತಿದ ಕೂಡಲೇ ರೋಷನ್ ಬೇಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಸಾಧ್ಯವಿಲ್ಲ, ಯಾಕೆಂದರೆ ಅವರು ಎಐಸಿಸಿ ಸದಸ್ಯರು, ಜೊತೆಗೆ ಅಲ್ಪಸಂಖ್ಯಾತ ಮುಖಂಡರು ಕೂಡಾ ಎಂಬ ಮಾತು ಸುಳ್ಳಾಗಿದೆ.
ಸಿದ್ದರಾಮಯ್ಯ ಅವರ ಮಾತಿಗೆ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಲೆ ಕೊಟ್ಟಿದ್ದಾರೆ. ಇತ್ತೀಚೆಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಜತೆ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಆದರೆ, ಈಗ ಕೈ ತೆನೆ ಸರ್ಕಾರದಲ್ಲಿ ಜೆಡಿಎಸ್-ಕಾಂಗ್ರೆಸ್ ಎರಡೂ ಬಾಗಿಲು ಮುಚ್ಚಿವೆ.
ಆದರೆ, ಈ ಹಿಂದೆ ಬಿಜೆಪಿ ಸೇರುವ ಪ್ರಯತ್ನವನ್ನು ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಹಾಡಿ ಹೊಗಳಿದ್ದರು. ಆದರೆ, ಅವರ ಪ್ರಯತ್ನಕ್ಕೆ ಕರ್ನಾಟಕ ಬಿಜೆಪಿ ನಾಯಕರು ಒಪ್ಪಿದರೂ, ಆರೆಸ್ಸೆಸ್ ಅಡ್ಡಗಾಲು ಹಾಕಿಬಿಟ್ಟಿತು ಎಂಬುದು ಗುಟ್ಟಾದ ವಿಷಯವಾಗಿಲ್ಲ. ದೇಶದ ಪುರಾತನ ಪಕ್ಷದ ನಿಷ್ಠಾವಂತ ಎಂದು ಹೇಳಿಕೊಂಡು ತಿರುಗುತ್ತಿದ್ದ ರೋಷನ್ ಬೇಗ್ ಗೆ ಈಗ ಎಲ್ಲಾ ಪ್ರಮುಖ ಪಕ್ಷಗಳ ಬಾಗಿಲು ಬಂದ್ ಆಗಿದ್ದು, ಮುಂದೇನು ಮಾಡುತ್ತಾರೆ ಕಾದು ನೋಡಬೇಕಿದೆ

ಬಿಜೆಪಿ ಸೇರಲು ಯಾರು ಅಡ್ಡಿಯಾದರು?
ಬೆಂಗಳೂರಿನಲ್ಲಿ ಪಕ್ಷಾತೀತ ಶಾಸಕರು ಎಂಬ ಗುಂಪೊಂದಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಯಾವುದೇ ಇದ್ದರೂ ಬೆಂಗಳೂರಿನಲ್ಲಿ ಸಮಪಾಲು, ಸರ್ವರಿಗೂ ಅವಕಾಶ ಎಂಬ ಅಘೋಷಿತ ವಾಕ್ಯದಡಿಯಲ್ಲ್ ಕೆಲವು ಶಾಸಕರು ಇನ್ನೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ರೋಷನ್ ಬೇಗ್ ಅವರು ಬಿಜೆಪಿ ಸೇರಲು ಮುಂದಾದಾಗ, ಬಿಜೆಪಿಯ ಬೆಂಗಳೂರು ಶಾಸಕರು ಬೆನ್ನಿಗೆ ನಿಂತು ಪಕ್ಷದ ಹೈಕಮಾಂಡ್ ತನಕ ಸುದ್ದಿ ಮುಟ್ಟಿಸಿದ್ದರು. ಆದರೆ, ಬೇಗ್ ಅವರು ಬಿಜೆಪಿ ಸೇರುವುದು ಬೇಡ ಎಂದು ಆರೆಸ್ಸೆಸ್ ಮುಖಂಡರು ಖಡಾಖಂಡಿತವಾಗಿ ಹೇಳಿದ್ದರಿಂದ ಬೇಗ್ ಗೆ ಬಾಗಿಲು ಬಂದ್ ಆಯಿತು.

ರೋಷನ್ ಬೇಗ್ ಕಾಂಗ್ರೆಸ್ ತೊರೆಯುವ ಮನಸ್ಸಿರಲಿಲ್ಲ
ವೇಣುಗೋಪಾಲ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ಧ ದನಿಯೆತ್ತಿದರೂ ರೋಷನ್ ಬೇಗ್ ಅವರಿಗೆ ಕಾಂಗ್ರೆಸ್ ತೊರೆಯುವ ಮನಸ್ಸಿರಲಿಲ್ಲ. ಆದರೆ, ಸೂಕ್ತ ಸ್ಥಾನ ಮಾನ ಸಿಗಲಿಲ್ಲ ಎಂಬ ಕೊರಗಿತ್ತು. ಶಿವಾಜಿನಗರದಲ್ಲಿ ಜನಪ್ರಿಯತೆ, ಕಾಂಗ್ರೆಸ್ ಹೈಕಮಾಂಡ್ ನಾಯಕರಲ್ಲಿ ನಿಷ್ಠೆ ಹೊಂದಿದ್ದರೂ, ಅಧಿಕಾರ ಸಿಗದ ಕಾರಣ ಹತಾಶೆಯಿಂದ ಮಾತನಾಡಿದ್ದು ಈಗ ಮುಳುವಾಗಿದೆ.

2004ರ ನಕಲಿ ಛಾಪಾ ಕಾಗದ ಹಗರಣ
ಅಬ್ದುಲ್ ತೆಲಗಿ ಆರೋಪಿಯಾಗಿದ್ದ 2004ರ ನಕಲಿ ಛಾಪಾ ಕಾಗದ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿತ್ತು. ಎಸ್ಎಂ ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಬೇಗ್ ಅವರು ರಾಜೀನಾಮೆ ನೀಡಬೇಕಾಯಿತು. ಬೇಗ್ ಬಂಧನಕ್ಕೆ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತ್ತು. ಅಬ್ದುಲ್ ಕರೀಂ ತೆಲಗಿ ಕೂಡಾ ರಾಜಕೀಯ ನಾಯಕರ ನೆರವು ಸಿಕ್ಕಿದ್ದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು ಬೇಗ್ ಗೆ ಮುಳುವಾಗಿತ್ತು. ಬೇಗ್ ಅವರ ರಾಜಕೀಯ ಬದುಕನ್ನು ಮುಕ್ತಾಯಗೊಳಿಸಿ ಶಿವಾಜಿನಗರ ಕ್ಷೇತ್ರದ ಮೇಲೆ ಪ್ರಭುತ್ವ ಸ್ಥಾಪಿಸಲು ಬಿಜೆಪಿ ಹವಣಿಸಿತ್ತು.

ಆದರೆ, ಬೇಗ್ ಅವರನ್ನು ಉಳಿಸಿದ್ದು ಕಾಂಗ್ರೆಸ್
ನಕಲಿ ಛಾಪಾ ಕಾಗದ, ಭೂ ಹಗರಣ, ಯಾವುದೇ ಹಗರಣ ಮೈಮೇಲೆ ಬಂದರೂ ರೋಷನ್ ಬೇಗ್ ಗೆ ಆಶ್ರಯ ಹಾಗೂ ನೆರಳಾಗಿ ನಿಂತಿದ್ದು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಮೇಲೆ ಬೇಗ್ ಅವರ ನಿಷ್ಠೆ ಅಚಲವಾಗಿತ್ತು. ಆದರೆ, ಅವರು ಕಾಂಗ್ರೆಸ್ ನಾಯಕರ ವಿರುದ್ಧವೆ ಮಾತನಾಡಿ, ಅಶಿಸ್ತು ತೋರಿಸಿದ್ದು, ಅವರಿಗೆ ಮುಳುವಾಯಿತು ಎಂದು ಯುಟಿ ಖಾದರ್ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಜೆಪಿ ಹೈಕಮಾಂಡ್ ಸಂಪರ್ಕಿಸಿದ್ದ ಬೇಗ್
ಬೆಂಗಳೂರಿನ ಶಾಸಕರ ಮೂಲಕ ಮಾಜಿ ಸಚಿವ ಎಂಜೆ ಅಕ್ಬರ್, ಮುಕ್ತಾರ್ ಅಬ್ಬಾಸ್ ನಖ್ವಿ ಸಂಪರ್ಕಿಸಿದ್ದ ಬೇಗ್ ಅವರು ಬಿಜೆಪಿ ಸೇರುವುದಕ್ಕೆ ಬೇಗ್ ಯತ್ನಿಸಿದ್ದರು. ಆದರೆ, ಬಹುಕೋಟಿ ಐಎಂಎ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿದ್ದರಿಂದ ಬೇಗ್ ಅವರಿಗೆ ಆರೆಸ್ಸೆಸ್ ತಡೆ ಬಲವಾಯಿತು.












Click it and Unblock the Notifications