ಒಂದು ತಪ್ಪು ಹೆಜ್ಜೆ ಪಕ್ಷಕ್ಕೆ ಮುಳುವಾದೀತು: ಬಿಎಸ್ವೈಗೆ ಹೈಅಲರ್ಟ್ ಆಗಿರುವಂತೆ ಬಿಜೆಪಿ ವರಿಷ್ಠರ ಸೂಚನೆ
ವಿಜಯಪುರದ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸತತ ವಾಗ್ದಾಳಿಯ ನಂತರೂ ಮೌನಕ್ಕೆ ಶರಣಾಗಿರುವ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದೆ ಎನ್ನುವ ಮಾಹಿತಿಯಿದೆ.
ಈ ಹಿಂದೆ, ಸಿದ್ದರಾಮಯ್ಯನವರ ಸರಕಾರದ ಒಂದು ತಪ್ಪು ಹೆಜ್ಜೆ ಕಾಂಗ್ರೆಸ್ಸಿಗೆ ಮುಳುವಾಗಿರುವುದನ್ನು ಉದಾಹರಣೆಯಾಗಿ ಕೊಟ್ಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಸೂಚನೆಯನ್ನು ನೀಡಿದ್ದಾರೆ.
ಲಿಂಗಾಯಿತ ಧರ್ಮವನ್ನು ಒಡೆಯುವ ಸಿದ್ದರಾಮಯ್ಯನವರ ನಿರ್ಧಾರ ಕಾಂಗ್ರೆಸ್ಸಿಗೆ ಯಾವರೀತಿ ಚುನಾವಣೆಯಲ್ಲಿ ಹಿನ್ನಡೆಯನ್ನು ತಂದುಕೊಟ್ಟಿತು ಎನ್ನುವುದನ್ನು ಉಲ್ಲೇಖಿಸಿ, ಸದ್ಯದ ರಾಜ್ಯದ ಬೆಳವಣಿಗೆ ಪಕ್ಷಕ್ಕೆ ಮುಜುಗರ ತಂದೊಡ್ಡಬಾರದು ಎನ್ನುವ ಸೂಚನೆ ಬಿಜೆಪಿ ಹೈಕಮಾಂಡ್ ನಿಂದ ಬಿಎಸ್ವೈಗೆ ಬಂದಿದೆ.
ಮೀಸಲಾತಿ ವಿಚಾರ ರಾಜ್ಯದಲ್ಲಿ ಭಾರೀ ಸದ್ದನ್ನು ಮಾಡುತ್ತಿರುವ ಈ ಹೊತ್ತಿನಲ್ಲಿ, ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಲದಂತೆ ಯಡಿಯೂರಪ್ಪನವರಿಗೆ ದೆಹಲಿಯಿಂದ ಸೂಚನೆ ಬಂದಿದೆ ಎಂದು ಹೇಳಲಾಗುತ್ತಿದೆ.

ಸಮುದಾಯಗಳ ಮೀಸಲಾತಿಗೆ ಪಾದಯಾತ್ರೆ
ಹಲವು ಸಮುದಾಯಗಳು ಮೀಸಲಾತಿಗೆ ಪಾದಯಾತ್ರೆ, ಸಭೆಗಳನ್ನು ನಡೆಸುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ಗ್ರೌಂಡ್ ರಿಪೋರ್ಟ್ ಅನ್ನು ಪಡೆದುಕೊಂಡಿರುವ ನಡ್ಡಾ, ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ಪಕ್ಷದ ಎಲ್ಲಾ ಮುಖಂಡರ ಸಲಹೆಗಳನ್ನು ಪಡೆದು ಸರಿಯಾದ ನಿರ್ಧಾರ ತೆಗೆದುಕೊಳ್ಳಿ ಎನ್ನುವ ಸೂಚನೆಯನ್ನು ನೀಡಿದ್ದಾರೆ.

ನಿಮಗೆ ಎಲ್ಲಾ ರೀತಿಯ ಸಹಕಾರ ನಮ್ಮಿಂದ ಸಿಗಲಿದೆ
ಬಿಜೆಪಿ ವಿರುದ್ದ ತಿರುಗಿಬೀಳಲು ಸದಾ ಒಂದಲ್ಲಾ ಒಂದು ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮತ್ತು ಇತರ ಸಂಘಟನೆಗಳು ಹರಿಹಾಯುತ್ತಿವೆ. ಇಂತಹ ಸಮಯದಲ್ಲಿ ಒಂದು ತಪ್ಪು ನಿರ್ಧಾರ ಸರಕಾರದ ಇಮೇಜಿಗೆ ಧಕ್ಕೆ ತರಬಹುದು. ನಿಮಗೆ ಎಲ್ಲಾ ರೀತಿಯ ಸಹಕಾರ ನಮ್ಮಿಂದ ಸಿಗಲಿದೆ ಎನ್ನುವ ಭರವಸೆಯನ್ನು ನಡ್ಡಾ ಅವರು ಯಡಿಯೂರಪ್ಪನವರಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕುರುಬ ಸಮುದಾಯ
ಈಗಾಗಲೇ, ಕಾಗಿನೆಲೆ ಪೀಠದ ಸ್ವಾಮೀಜಿಗಳು ಮತ್ತು ಸಚಿವ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಕುರುಬ ಸಮುದಾಯದ ಪಾದಯಾತ್ರೆ ಮತ್ತು ನಭೂತೋ ನಭವಿಷ್ಯತಿಃ ಎನ್ನುವ ರೀತಿಯಲ್ಲಿ ಬೃಹತ್ ಸಭೆ ನಡೆದಿದೆ. ಪಂಚಮಶಾಲಿ ಸಮುದಾಯದ ಹೋರಾಟವೂ ಮುಂದುವರಿದೆ. ಈ ಎಲ್ಲಾ ವಿಚಾರವನ್ನು ಬಿಜೆಪಿ ವರಿಷ್ಠರು ಗಮನಿಸಿದ್ದಾರೆ.
Recommended Video

ಹೋರಾಟದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಬಾರದು
ಮೀಸಲಾತಿಗೆ ಶಿಫಾರಸು ಮಾಡುವುದು ಮತ್ತು ಅದಕ್ಕೆ ಅನುಮೋದನೆ ನೀಡುವುದು ರಾಜ್ಯ ಮತ್ತು ಕೇಂದ್ರ ಸರಕಾರ. ಇವೆರಡೂ ನಮ್ಮ ಪಕ್ಷವೇ ಆಗಿರುವುದರಿಂದ ಜಾಗ್ರತೆಯಿಂದ ಹೆಜ್ಜೆಯಿಡಬೇಕಾಗುತ್ತದೆ. ಹಾಗೆಯೇ, ಪಕ್ಷದ ಯಾವುದೇ ಸಚಿವರು ಇನ್ನು ಮುಂದೆ ಈ ಹೋರಾಟದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ಸೂಚನೆಯನ್ನೂ ಬಿಜೆಪಿ ವರಿಷ್ಠರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications