ಬಿಜೆಪಿ ಸರ್ಕಾರ ರಚನೆ; ರೇಣುಕಾಚಾರ್ಯ, ಎಂಟಿಬಿ ವಾಕ್ಸಮರ!
ಬೆಂಗಳೂರು, ನವೆಂಬರ್ 25 : ಕರ್ನಾಟಕ ಬಿಜೆಪಿಯಲ್ಲಿ ಮೂಲ, ವಲಸಿಗ ಚರ್ಚೆ ಆರಂಭವಾಗಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆಗಳು ನಡೆಯುತ್ತಿರುವಾಗಲೇ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ವಲಸಿಗ ಶಾಸಕರು ಎಂಬ ಚರ್ಚೆಗೆ ನಾಂದಿ ಹಾಡಿದ್ದಾರೆ.
"ಕೇವಲ 17 ಶಾಸಕರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ" ಎಂಬ ಎಂ. ಪಿ. ರೇಣುಕಾಚಾರ್ಯ ಹೇಳಿಕೆ ಪಕ್ಷದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಈ ಹೇಳಿಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ನಡೆದರೆ ಎಂಟಿಬಿ ನಾಗರಾಜ್, ಆರ್. ಶಂಕರ್, ಎಚ್. ವಿಶ್ವನಾಥ್, ಮುನಿರತ್ನ ಸಚಿವರಾಗಲಿದ್ದಾರೆಯೇ? ಎಂಬ ಪ್ರಶ್ನೆಗಳು ಇದ್ದಿವೆ. ಇಂತಹ ಸಂದರ್ಭದಲ್ಲಿಯೇ 'ವಲಸಿಗ' ಎಂಬ ಹೇಳಿಕೆ ಕೇಳಿ ಬರುತ್ತಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗುತ್ತಿದೆ. ಈಗಾಗಲೇ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳು ವಾಪಸ್ ಆಗಿದ್ದಾರೆ. ಇಂತಹ ಸಂದರ್ಭದಲ್ಲಿಯೇ ರೇಣುಕಾಚಾರ್ಯ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ರೇಣುಕಾಚಾರ್ಯ ಹೇಳಿಕೆ
ಹೊನ್ನಾಳಿ ಶಾಸಕ ಎಂ. ಪಿ. ರೇಣುಚಾಕಾರ್ಯ, "ಯಾರೋ ಒಬ್ಬರಿಂದ ಸರ್ಕಾರ ಬಂದಿದೆ ಎಂದು ಹೇಳಲಾಗದು. 17 ಜನರಿಂದ ಬಿಜೆಪಿ ಸರ್ಕಾರ ಬಂದಿದೆ ಎಂಬುದು ಸುಳ್ಳು. ಬಿಜೆಪಿ ಪಕ್ಷದ ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಸರ್ಕಾರ ಬಂದಿದೆ" ಎಂದು ಹೇಳಿದ್ದಾರೆ.

17 ಶಾಸಕರಿಂದ ಅಧಿಕಾರ ಬಂದಿಲ್ಲ
"ಕೇವಲ 17 ಜನರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್, ಜೆಡಿಎಸ್ನಿಂದ ಬೇಸತ್ತವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಅಷ್ಟೇ" ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಎರಡೂ ಕೈ ಜೋಡಿಸಿದ್ದಕ್ಕೆ ಸರ್ಕಾರ
ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. "105 ಶಾಸಕರು ಇದ್ದಾಗ ಏಕೆ ಬಿಜೆಪಿ ಸರ್ಕಾರ ಆಗಲಿಲ್ಲ. ಎರಡೂ ಕೈ ಜೋಡಿಸಿದ್ದಕ್ಕೆ ಮಾತ್ರ ತಾನೇ ಸರ್ಕಾರ ಆಗಿದೆ. 105 ಶಾಸಕರು, 17 ಶಾಸಕರು ಮುಖ್ಯ" ಎಂದು ತಿರುಗೇಟು ಕೊಟ್ಟಿದ್ದಾರೆ.
Recommended Video

ಎಲ್ಲರೂ ಬಿಜೆಪಿ ಕಾರ್ಯಕರ್ತರು
ಕೆಲವು ದಿನಗಳ ಹಿಂದೆ ಸಚಿವ ಕೆ. ಎಸ್. ಈಶ್ವರಪ್ಪ, "ಮೂಲ ಬಿಜೆಪಿ, ವಲಸಿಗ ಬಿಜೆಪಿ ಎಂಬ ಪ್ರಶ್ನೆಯೇ ಇಲ್ಲ. ಸೈದ್ಧಾಂತಿಕವಾಗಿ ನಮ್ಮ ಪಕ್ಷವನ್ನು ಒಪ್ಪಿ ಬಂದವರೆಲ್ಲರೂ ಬಿಜೆಪಿ ಕಾರ್ಯಕರ್ತರು. ಮುನಿರತ್ನ ಸೇರಿ 17 ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರು" ಎಂದು ಹೇಳಿದ್ದರು.












Click it and Unblock the Notifications