ಹೈಕೋರ್ಟ್ ಮೊರೆ ಹೋದ ರವಿ ಬೆಳಗೆರೆ, ಅನಿಲ್ ರಾಜ್
ಬೆಂಗಳೂರು, ಜೂನ್ 28: ಹಕ್ಕುಚ್ಯುತಿ ಹೆಸರಿನಲ್ಲಿ ಜೈಲು ಶಿಕ್ಷೆಗೆ ಗುರಿಯಾದ 'ಹಾಯ್ ಬೆಂಗಳೂರು' ಸಂಪಾದಕ ರವಿ ಬೆಳಗೆರೆ ಮತ್ತು 'ಯಲಹಂಕ ವಾಯ್ಸ್' ಪತ್ರಿಕೆ ಸಂಪಾದಕ ಅನಿಲ್ ರಾಜ್ ಶಿಕ್ಷೆಗೆ ತಡೆ ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಮಾನಹಾನಿಕರ ಬರಹ ಪ್ರಕಟಿಸಿದ್ದಾರೆ ಎಂಬ ಆರೋಪದ ಮೇಲೆ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ರವರಿಗೆ ಜೂನ್ 21ರಂದು ವಿಧಾನಸಭೆ ಸ್ಪೀಕರ್ ಕೆ.ಬಿ ಕೋಳಿವಾಡ್ ಒಂದು ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದ್ದರು.

"ವಿಧಾನಸಭೆಗೆ ಇಬ್ಬರು ಪತ್ರಕರ್ತರಿಗೆ ಶಿಕ್ಷೆ ನೀಡುವ ಅಧಿಕಾರವಿಲ್ಲ. ಇದು ಸಂವಿಧಾನ ವಿರೋಧಿ," ಎಂದು ಸಂಪಾದಕರ ವಕೀಲ ಶಂಕರಪ್ಪ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
"ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿ ತಮ್ಮ ಅಭಿಪ್ರಾಯ ಮಂಡಿಸಲು ಸಂಪಾದಕರಿಗೆ ಅವಕಾಶ ನೀಡಿಲ್ಲ. ಹೀಗಾಗಿ ಹಕ್ಕು ಬಾಧ್ಯತಾ ಸಮಿತಿ ನೀಡಿರುವ ಶಿಕ್ಷೆಗೆ ತಡೆ ನೀಡಬೇಕು," ಎಂದು ಉಭಯ ಸಂಪಾದಕರ ಪರವಾಗಿ ಶಂಕರಪ್ಪ ರಿಟ್ ಅರ್ಜಿಯಲ್ಲಿ ಕೋರಿದ್ದಾರೆ.
ಪತ್ರಕರ್ತ ರವಿ ಬೆಳಗೆರೆ ಮತ್ತೆ ಅನಾರೋಗ್ಯಕ್ಕೊಳಗಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ಮಧ್ಯರಾತ್ರಿ ಬೆಳಗೆರೆ ಅವರಿಗೆ ಮತ್ತೆ ತೀವ್ರ ರಕ್ತದೊತ್ತಡ, ಎದೆನೋವು
ಕಾಣಿಸಿಕೊಂಡಿತ್ತು.
ಸದ್ಯ ಕಿಮ್ಸ್ನ ಎಂಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಳಗೆರೆ ಆಸ್ಪತ್ರೆಯಿಂದ ಹೊರಗೆ ಹೋಗದಂತೆ ಓರ್ವ ಎಸಿಪಿ, ಮೂವರು ಇನ್ಸ್ ಪೆಕ್ಟರ್ ಗಳು ಕಾವಲಿದ್ದಾರೆ. ಇನ್ನು ಅನಿಲ್ ರಾಜ್ ಶುಕ್ರವಾರದಿಂದ ತಮ್ಮ ಪತ್ರಿಕೆಯ ಕಚೇರಿ ಹಾಗೂ ಮನೆಯಿಂದ ನಾಪತ್ತೆಯಾಗಿದ್ದಾರೆ.












Click it and Unblock the Notifications