ರಮ್ಯಾಗೆ ವಿಶ್ವದ ಮಾಹಿತಿ ಅಪಾರ, ನೊಬಲ್ ಪ್ರಶಸ್ತಿ ಸಿಗಲಿ!!
ಬೆಂಗಳೂರು, ಆಗಸ್ಟ್, 21: ಪಾಕಿಸ್ತಾನವನ್ನು ಹೊಗಳಿದ್ದ ರಮ್ಯಾಗೆ ನವರಸ ನಾಯಕ ಜಗ್ಗೇಶ್ ಸರಿಯಾಗೇ ತಿರುಗೇಟು ನೀಡಿದ್ದಾರೆ. "ಅವರಿಗೆ ನೋಬಲ್ ಪ್ರಶಸ್ತಿ ಸಿಗಲಿ!!ಕೆಲವರಿಗೆ ವಿಶ್ವದ ಮಾಹಿತಿ ಅಪಾರ!" ಎಂದು ಟ್ವೀಟ್ ಮಾಡಿ ಅಣಕವಾಡಿದ್ದಾರೆ.
ಎಬಿವಿಪಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಜಗ್ಗೇಶ್, ಕೆಲವರು ದೇಶದ ಬಗ್ಗೆ ಸದಾ ಚಿಂತನೆ ಮಾಡುತ್ತ ಇರುತ್ತಾರೆ. ಅವರ ಸಾಧನೆಗೆ ನೋಬೆಲ್ ನೀಡಬೇಕು ಎಂದು ರಮ್ಯಾ ಹೆಸರು ಹೇಳದೇ ವ್ಯಂಗ್ಯವಾಡಿದರು.[ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ: ರಮ್ಯಾ]
ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಧರಣಿ ನಡೆಸಲಾಗುತ್ತಿದ್ದು ಎಬಿವಿಪಿ ಕಾರ್ಯಕರ್ತರಿಗೆ ನಿವೃತ್ತ ಯೋಧರು ಬೆಂಬಲ ನೀಡಿದ್ದಾರೆ. ನಿವೃತ್ತ ಯೋಧರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಸೈನ್ಯದ ಅವಹೇಳನ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಹೊಗಳುವವರಿಗೆ ಪ್ರಶಸ್ತಿ ಸಿಗಲಿ
ಎಂಟಾಣೆ ಅಕ್ಷರ ಕಲಿಯದೇ, ಅನುಭವ ಇಲ್ಲದೆ ಇದ್ದವರು ಸಹ ಪಾಕಿಸ್ತಾನವನ್ನು ಹೊಗಳುತ್ತಾರೆ. ಅವರಿಗೆ ಇನ್ನಷ್ಟು ಶಾಂತಿ ಅವಾರ್ಡ್, ನೊಬೆಲ್ ಪ್ರಶಸ್ತಿ ಸಿಗಲಿ ಎನ್ನುತ್ತಲೇ ಜಗ್ಗೇಶ್ ರಮ್ಯಾ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಬಿಲ್ ಕ್ಲಿಂಟನ್ ಪಕ್ಕದಲ್ಲಿ ಫೋಟೋ!
ಇಂಥವರಿಗೆ ಬಿಲ್ ಕ್ಲಿಂಟನ್ ಪಕ್ಕದಲ್ಲಿ ನಿಂತು ಫೋಟೋ ತೆಗೆದುಕೊಳ್ಳುವ ಅವಕಾಶ ಸಿಗಲಿ. ಶತ್ರು ದೇಶವನ್ನು ಹೊಗಳುವುದೆಲ್ಲ ಮತಗಳಾಗಿ ಪರಿವರ್ತನೆ ಆಗುತ್ತದೆ ಎಂಬ ಮೂರ್ಖತನ ಬಿಡಲಿ ಎಂದಿದ್ದಾರೆ.
ಸೊಳ್ಳೆಗಳಿಗೆ ಹೆದರಲ್ಲ
ದೇಶ ವಿರೋಧಿ ಘೋಷಣೆ ಕೂಗುವವವರ ಅಗತ್ಯ ಭಾರತಕ್ಕೆ ಇಲ್ಲ. ಇವರೆಲ್ಲ ಸೊಳ್ಳೆ, ತಿಗಣೆಗಳಿದ್ದಂತೆ , ಸರಿಯಾದ ಔಷಧ ಬೀಳಬೇಕು ಅಷ್ಟೆ ಎಂದು ಹೇಳಿದರು.
ಪರಮೇಶ್ವರ ನ್ಯಾಯಾಧಿಶರೇ?
ದೇಶದ್ರೋಹಿಗಳಿಗೆ ಕ್ಲೀನ್ ಚೀಟ್ ನೀಡಲು ಗೃಹ ಸಚಿವ ಪರಮೇಶ್ವರ್ ನ್ಯಾಯಾಧೀಶರಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಹುಡುಕಬೇಕಾಗಿದೆ ಎಂದು ಜಗ್ಗೇಶ್ ಹೇಳಿದ್ದಾರೆ.