ಹೊಸ ಸ್ಪೀಕರ್ಗೆ ಸದನದಲ್ಲಿ ಪಾಠ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
Recommended Video
ಬೆಂಗಳೂರು, ಜುಲೈ 31: ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ನೂತನ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯವನ್ನು ಸದನದ ಮೂರೂ ಪಕ್ಷದ ಮುಖಂಡರು ಇಂದು ಮಾಡಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೂ ಸಹ ಇಂದು ಸದನದಲ್ಲಿ ಹೊಸ ಸ್ಪೀಕರ್ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೊಸ ಸ್ಪೀಕರ್ ಅವರಿಗೆ ಸದನದ ಪ್ರಾಮುಖ್ಯತೆ, ಸ್ಪೀಕರ್ ಸ್ಥಾನದ ಘನತೆ, ಅದರ ಇತಿಹಾಸ ಎಲ್ಲವನ್ನೂ ತಿಳಿಸಿ, ಅವರಿಗೆ ಪ್ರಮುಖ ಸಲಹೆಗಳನ್ನೂ ರಮೇಶ್ ಕುಮಾರ್ ಅವರು ನೀಡಿದರು.
ಕಾಂಗ್ರೆಸ್ ಸದಸ್ಯತ್ವ ಪಡೆದು ನಾಯಕರ ಕಿವಿ ಹಿಂಡಿದ ರಮೇಶ್ ಕುಮಾರ್
ಲೋಕಸಭೆಯ ಇತಿಹಾಸ, ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಪ್ರಮುಖ ವ್ಯಕ್ತಿಗಳ ಬಗ್ಗೆ ಮೊದಲಿಗೆ ಮಾಹಿತಿ ನೀಡಿದ ರಮೇಶ್ ಕುಮಾರ್ ಅವರು, ಈ ಭಾರತ ಹೇಗಿರಬೇಕು ಎಂಬ ಬಗ್ಗೆ ಆಗ ಎದ್ದಿದ್ದ ಚರ್ಚೆಯನ್ನು ಉಲ್ಲೇಖಿಸಿ, ಸಂವಿಧಾನದ ಮೌಲ್ಯವನ್ನೂ, ಅದರ ಅಗತ್ಯತೆಯನ್ನೂ ಹೇಳಿದರು.
ಕೆ.ಬಿ.ಹೆಡಗೆವಾರ್ ಅವರು ಹಿಂದುತ್ವದ ಆಧಾರದಲ್ಲಿ ಭಾರತ ಇರಬೇಕು ಎಂದು ವಾದಿಸಿ ಆರ್ಎಸ್ಎಸ್ ಅನ್ನು ಸ್ಥಾಪನೆ ಮಾಡಿದರು, ಆದರೆ ಭಾರತವು ಸಮಾನತೆಯ ಆಧಾರದಲ್ಲಿ ನಿರ್ಮಾಣವಾಗಬೇಕು ಎಂದು ಅಂಬೇಡ್ಕರ್ ಅವರ ವಾದವಾಗಿತ್ತು, ಸಂವಿಧಾನದ ಆಶಯವೂ ಅದೇ ಆಗಿದೆ ಎಂದು ರಮೇಶ್ ಕುಮಾರ್ ಅವರು ಹೇಳಿದರು.
ಮನುಸ್ಮೃತಿಯಲ್ಲಿ 1034 ಶ್ಲೋಕಗಳ ಮೂಲಕ ಬ್ರಾಹ್ಮಣ್ಯದ ಬಗ್ಗೆ ಹೇಳಲಾಗಿದೆ, 900 ಕ್ಕೂ ಹೆಚ್ಚು ಶ್ಲೋಕಗಳ ಮೂಲಕ ಕ್ಷತ್ರೀಯನ ಬಗ್ಗೆ ಮಾತುಗಳಿವೆ, ವೈಶ್ಯನ ಬಗ್ಗೆ ಕೆಲವು ಶ್ಲೋಕಗಳಿವೆ ಶೂದ್ರನ ಬಗ್ಗೆ ಶ್ಲೋಕಗಳೇ ಇಲ್ಲ. ಶೂದ್ರರೇ ಹೆಚ್ಚಿರುವ ದೇಶದಲ್ಲಿ ಆ ಸಮುದಾಯದ ಬಗ್ಗೆ ಉಲ್ಲೇಖವೇ ಇಲ್ಲದ ಮನುಸ್ಮೃತಿಯ ಆಧಾರದಲ್ಲಿ ದೇಶ ನಡೆಸುವ ಹುನ್ನಾರ ನಡೆದಿತ್ತು ಎಂದು ರಮೇಶ್ ಕುಮಾರ್ ಅವರು ಇತಿಹಾಸವನ್ನು ನೆನಪಿಸಿದರು.
ಅಂದು ಶಿಕ್ಷಣ ಸಚಿವ, ಈಗ ಸದನದ 'ಹೆಡ್ ಮಾಸ್ಟರ್'; ಕಾಗೇರಿ ಪರಿಚಯ
ಸ್ಪೀಕರ್ ಕಾಗೇರಿ ಅವರನ್ನು ಉದ್ಧೇಶಿಸಿ ಮಾತನಾಡಿದ ರಮೇಶ್ ಕುಮಾರ್ ಅವರು, 'ನಿಮ್ಮ ವೈಚಾರಿಕ ಹಿನ್ನಲೆ ಚಾತುವರ್ಣವನ್ನು ಸಮರ್ಥಿಸುವಂತಿದೆ, ಮನುಸ್ಮೃತಿಯನ್ನು ಸಮರ್ತಿಸಿರುವ ಸಂಘದ ಹಿನ್ನೆಲೆಯೂ ನಿಮಗೆ ಇದೆ, ಆದರೆ ನೀವು ಕೂತಿರುವ ಪೀಠದ ಮೇಲೆ ತಕ್ಕಡಿ ಇದೆ, ಇಲ್ಲಿ ಸಮಾನತೆಯೊಂದೇ ನಿಮ್ಮ ಗುರಿ ಆಗಿರಬೇಕು, ಸಂವಿಧಾನವೇ ನಿಮಗೆ ಎಲ್ಲವೂ ಆಗಬೇಕಿದೆ ಹಾಗಾಗಿ ಮನುಸ್ಮೃತಿಯ ವೈಚಾರಿಕತೆಯಿಂದ ಹೊರಗೆ ಬಂದು, ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಂವಿಧಾನಕ್ಕೆ ಮಾತ್ರವೇ ನಿಷ್ಠೆ ತೋರಿ ಎಂದು ರಮೇಶ್ ಕುಮಾರ್ ಸಲಹೆ ನೀಡಿದರು.
ಕಾಗೇರಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೂ ಹೇಳಿದ ರಮೇಶ್ ಕುಮಾರ್, 'ನಿಮ್ಮ ಬಗ್ಗೆ ಕೆಟ್ಟದ್ದನ್ನು ಹೇಳುವುದಕ್ಕೆ ಏನೂ ಇಲ್ಲ, ನೀವು ಒಳ್ಳೆಯ ವ್ಯಕ್ತಿ, ಜಂಟಲ್ಮ್ಯಾನ್, ಬಹಳ ಸರಳರು, ಬಿಜೆಪಿಯ ಹಾಗೂ ಕಮ್ಯೂನಿಸ್ಟರಲ್ಲಿ ವೈಚಾರಿಕ ವಿರೋಧ ಇದ್ದರೂ ಸಹ ಸರಳತೆ ಎಂಬುದು ಇಬ್ಬರಲ್ಲೂ ಇದೆ' ಎಂದು ರಮೇಶ್ ಕುಮಾರ್ ಹೇಳಿದರು.
ಸಮಾಜವಾದಿ ಗುರುವಿನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್
ನಮ್ಮ ವಿಧಾನಸಭೆಯಲ್ಲಿ ಚರ್ಚೆಯ ಗುಣಮಟ್ಟ ಏರಬೇಕು, ನಮ್ಮ ಸದನ ಲೋಕಸಭೆಗೂ ಮಾದರಿ ಆಗಬೇಕು, ಜನರಿಗೆ ರಾಜಕಾರಣಿಗಳ ಬಗ್ಗೆ ಈಗ ಇರುವ ಕೆಟ್ಟ ಅಭಿಪ್ರಾಯ ಬದಲಾಗಬೇಕು ಎಂದ ರಮೇಶ್ ಕುಮಾರ್ ಅವರು, ಇನ್ನು ಮುಂದೆ ಕಲಾಪದಲ್ಲಿ ಇನ್ನೆಂದೂ ಇಷ್ಟು ಸಮಯ ತೆಗೆದುಕೊಳ್ಳುವುದಿಲ್ಲವೆಂದು ಹೇಳಿ ಹೊಸ ಸ್ಪೀಕರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತು ಮುಗಿಸಿದರು.