Breaking; ಕುತೂಹಲ ಮೂಡಿಸಿದ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಭೇಟಿ
ಬೆಂಗಳೂರು, ಡಿಸೆಂಬರ್ 19; ಮಾಜಿ ಸಚಿವರು, ಕರ್ನಾಟಕ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರ ಭೇಟಿ ಕುತೂಹಕ್ಕೆ ಕಾರಣವಾಗಿದೆ. ಅದರಲ್ಲೂ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗ ಉಭಯ ನಾಯಕರು ಬೆಂಗಳೂರಿಗೆ ಬಂದಿದ್ದಾರೆ.
ಸೋಮವಾರ ಸಂಜೆ ಕೆ. ಎಸ್. ಈಶ್ವರಪ್ಪ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಿದರು. ಸಾಂಬ್ರಾ ವಿಮಾನ ನಿಲ್ದಾಣದಿಂದ ಒಟ್ಟಾಗಿ ಇಬ್ಬರೂ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಡಿಸೆಂಬರ್ 20ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕೆ. ಎಸ್. ಈಶ್ವರಪ್ಪ ಬೆಂಗಳೂರಿನ ಗೋಲ್ಡ್ ಪಿಂಚ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಇದರಲ್ಲಿ ರಮೇಶ್ ಜಾರಕಿಹೊಳಿ ಸಹ ಭಾಗಿಯಾಗಲಿದ್ದಾರೆಯೇ? ಎಂಬುದು ಕುತೂಹಲ ಮೂಡಿಸಿದೆ.

ರಮೇಶ್ ಜಾರಕಿಹೊಳಿ ಮತ್ತು ಕೆ. ಎಸ್. ಈಶ್ವರಪ್ಪ ಸೋಮವಾರದ ವಿಧಾನಸಭೆ ಕಲಾಪಕ್ಕೆ ಗೈರಾಗಿದ್ದರು. ಉಭಯ ನಾಯಕರು ಮಂಗಳವಾರ ಬೆಂಗಳೂರಿನಲ್ಲಿ ಇರುವುದರಿಂದ ಕಲಾಪಕ್ಕೆ ಗೈರಾಗುವುದು ಖಚಿತವಾಗಿದೆ.
ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಕೆ. ಎಸ್. ಈಶ್ವರಪ್ಪ ಸದನಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಜರಾತಿಯಿಂದ ವಿನಾಯಿತಿ ನೀಡಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದಿದ್ದರು. ಬೆಳಗಾವಿಯಲ್ಲಿ ಇಂದು ಅವರನ್ನು ಭೇಟಿಯಾಗಿದ್ದರು.
ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ ಕಾರಣ ಕೆ. ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಇಬ್ಬರೂ ಸಹ ಅಸಮಾಧಾನಗೊಂಡಿದ್ದಾರೆ. ಈಗ ಉಭಯ ನಾಯಕರು ಬೆಳಗಾವಿಯಲ್ಲಿ ಭೇಟಿ ಮಾಡಿ, ಬೆಂಗಳೂರಿಗೆ ಒಟ್ಟಿಗೆ ಆಗಮಿಸುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಈಶ್ವರಪ್ಪ ಹೇಳಿಕೆ; ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಕೆ. ಎಸ್. ಈಶ್ವರಪ್ಪ, "ರಮೇಶ್ ಜಾರಕಿಹೊಳಿ ವಿಚಾರವೇ ಬೇರೆ, ನನ್ನ ವಿಚಾರವೇ ಬೇರೆ. ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ನಾನು ಅಮಿತ್ ಶಾ, ನರೇಂದ್ರ ಮೋದಿ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ" ಎಂದರು.
"ಬಸವರಾಜ ಬೊಮ್ಮಾಯಿ ಅವರನ್ನು ಕೇಳಿದ್ದಾಗ ಸಂಪುಟಕ್ಕೆ ತೆಗೆದುಕೊಳ್ಳುತ್ತೇ ಎಂದು ಹೇಳಿದ್ದರು. ಆದರೆ ತೆಗೆದುಕೊಂಡಿಲ್ಲ. ನಾನು ಅವರ ಬಗ್ಗೆ ಆರೋಪ ಮಾಡಲು ಹೋಗುವುದಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಯಾರು ತೀರ್ಮಾನ ಕೈಗೊಳ್ಳಬೇಕೋ ಅವರು ಕೈಗೊಳ್ಳಲಿ" ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
"ಕೆ. ಜೆ. ಜಾರ್ಜ್ ಸಚಿವರಾಗಿದ್ದಾಗ ಅವರ ಮೇಲೆ ಆರೋಪ ಬಂದಿತ್ತು. ಅವರು ರಾಜೀನಾಮೆ ನೀಡಿದ್ದರು. ಕ್ಲೀನ್ಚಿಟ್ ಪಡೆದು ಬಳಿಕ ಸಚಿವರಾದರು. ನನ್ನ ಮೇಲೆ ಆರೋಪ ಬಂದಾಗ ರಾಜೀನಾಮೆ ಬೇಡ ಎಂದರು. ನಾನೇ ರಾಜೀನಾಮೆ ನೀಡಿದೆ" ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications