ಸಚಿವ ಸಂಪುಟ ಸಭೆಗೆ ಮತ್ತೆ ರಮೇಶ್ ಜಾರಕಿಹೊಳಿ ಗೈರು!
ಬೆಂಗಳೂರು, ಡಿಸೆಂಬರ್ 05 : ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹಬ್ಬಿವೆ. ಇವುಗಳ ನಡುವೆಯೇ ಅವರು ಸಚಿವ ಸಂಪುಟ ಸಭೆಗೆ ಮತ್ತೆ ಗೈರು ಹಾಜರಾಗಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ಸಭೆಗೆ ಗೈರಾದರು. ಸತತವಾಗಿ ಅವರು ಸಂಪುಟ ಸಭೆಗೆ ಗೈರಾಗುತ್ತಿದ್ದಾರೆ.
ಇದುವರೆಗೂ 12 ಸಚಿವ ಸಂಪುಟ ಸಭೆ ನಡೆದಿದ್ದು 10ಕ್ಕೆ ಸಚಿವ ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ. ಕೇವಲ 2 ಸಭೆಗೆ ಮಾತ್ರ ಅವರು ಹಾಜರಾಗಿದ್ದು, ಅದರಲ್ಲಿಯೂ ಒಂದು ಸಭೆಯಲ್ಲಿ ಮಧ್ಯದಲ್ಲಿಯೇ ಎದ್ದು ಹೋಗಿದ್ದರು.
ಬಹುದಿನಗಳ ಅನಾರೋಗ್ಯ ಅಥವ ವಿದೇಶ ಪ್ರವಾಸದಲ್ಲಿದ್ದರೆ ಮಾತ್ರ ಸಚಿವ ಸಂಪುಟ ಸಭೆಗೆ ಗೈರು ಹಾಜರಾಗಬಹುದು ಎನ್ನುತ್ತದೆ ನಿಯಮ. ಆದರೆ, ರಮೇಶ್ ಜಾರಕಿಹೊಳಿ ಅವರು ಕರ್ನಾಟಕದಲ್ಲಿ ಇದ್ದರೂ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಇದರಿಂದಾಗಿ ಅವರು ಸಚಿಚ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ...

ಸಚಿವರು ನಿರಂತರ ಗೈರು
ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಪೌರಾಡಳಿತ ಸಚಿವರು. ಆದರೆ, ಅವರು ನಿರಂತರವಾಗಿ ಸಚಿವ ಸಂಪುಟ ಸಭೆಗೆ ಗೈರಾಗುತ್ತಿದ್ದಾರೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆಯಲಾಗಿತ್ತು.

ಸಚಿವರು ಹೇಳಿದ್ದೇನು?
ಸಚಿವ ಸಂಪುಟ ಸಭೆಗೆ ಗೈರಾಗುತ್ತಿರುವ ಬಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದ ರಮೇಶ್ ಜಾರಕಿಹೊಳಿ ಅವರು, 'ನನ್ನದೊಂದು ಮುಖ್ಯ ಕೋರಿಕೆ ಈಡೇರಲು ದೇವರ ಮೊರೆ ಹೋಗಿದ್ದೇನೆ. ಕೋರಿಕೆ ಈಡೇರುವ ತನಕ ಸರ್ಕಾರಿ ವಾಹ ಬಳಸುವುದಿಲ್ಲ. ಸಂಪುಟ ಸಭೆಗೂ ಹೋಗುವುದಿಲ್ಲ' ಎಂದು ಹೇಳಿದ್ದರು.

ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ
ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಢಾದ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರಿಗೆ ಪತ್ರ ಬರೆದಿದ್ದರು. ಸತತವಾಗಿ ಸಚಿವರು ಸಂಪುಟ ಸಭೆಗೆ ಗೈರಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಸರ್ಕಾರಿ ಕಾರು ಬಳಸುತ್ತಿಲ್ಲ
ಸಚಿವ ಸಂಪುಟ ಸಭೆ ಮಾತ್ರವಲ್ಲ ಸರ್ಕಾರಿ ಕಾರು ಬಳಕೆಯನ್ನು ರಮೇಶ್ ಜಾರಕಿಹೊಳಿ ನಿಲ್ಲಿಸಿದ್ದಾರೆ. ಸೆಪ್ಟೆಂಬರ್ 7ರಂದು ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ನಡೆಯಿತು. ರಮೇಶ್ ಜಾಕಿಹೊಳಿ ಸಹೋದರರಿಗೆ ಹಿನ್ನಡೆ ಆಗಿತ್ತು. ಅಂದಿನಿಂದ ಅವರು ಸರ್ಕಾರಿ ಕಾರು ಬಳಸುತ್ತಿಲ್ಲ.












Click it and Unblock the Notifications