ರಾಮನಗರದಲ್ಲೊಂದು ಮರ್ಯಾದಾ ಹತ್ಯೆ?
ರಾಮನಗರ, ಡಿ. 17 : ರಾಮನಗರ ತಾಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿದೆ ಎಂಬ ಶಂಕೆ ಇದ್ದು, ಪೊಲೀಸರು ಆರು ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಚಂದ್ರಕಲಾ ಎಂಬಾಕೆ ಸಾವನ್ನಪ್ಪಿದ್ದು, ತರಾತುರಿಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ದೊಡ್ಡ ಗಂಗವಾಡಿ ಗ್ರಾಮದ ಕೆಂಪೇಗೌಡ ಅವರ ಪುತ್ರಿ ಚಂದ್ರಕಲಾ (17) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ, ಆಕೆಯ ತಂದೆ ಪತ್ನಿಗೂ ತಿಳಿಸದೆ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟು ಹಾಕಿರುವುದು, ಇದು ಮರ್ಯಾದಾ ಹತ್ಯೆಯೇ? ಎಂಬ ಅನುಮಾನ ಹುಟ್ಟುಹಾಕಿದೆ. [ಗೌಡರ ಹುಡ್ಗ (20) ರೆಡ್ಡಿ ಹುಡ್ಗಿ (18) ಮದ್ವೆ ಗಲಾಟೆ]

ಮೃತ ಯುವತಿಯ ತಾಯಿ 'ನಾನು ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಹಾಗೂ ಆಕೆಯನ್ನು ಸುಟ್ಟಿರುವ ಯಾವ ವಿಷಯಗಳೂ ನನಗೆ ಗೊತ್ತಿಲ್ಲ' ಎಂದು ಹೇಳಿಕೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. [ತಮಿಳುನಾಡು : ಪ್ರೇಮಿಯೊಬ್ಬನ ಮರ್ಯಾದಾ ಹತ್ಯೆ]
ಪ್ರಕರಣದ ವಿವರ : ಚಂದ್ರಕಲಾ ತಮ್ಮ ಗ್ರಾಮದ ದಯಾನಂದ ಎಂಬ ಯುವಕನನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದಳು. ಚಂದ್ರಕಲಾ ಗಂಗಟಕಾರ ಒಕ್ಕಲಿಗ ಪಂಗಡಕ್ಕೆ ಸೇರಿದ್ದು, ದಯಾನಂದ ಹಳ್ಳಿಕಾರ ಒಕ್ಕಲಿಗ ಪಂಗಡದವರಾಗಿದ್ದರು.
ಜಾತಿ ಒಂದೇ ಆಗಿದ್ದರೂ ಇಬ್ಬರೂ ಬೇರೆ-ಬೇರೆ ಪಂಗಡಕ್ಕೆ ಸೇರಿರುವ ಕಾರಣ, ಪ್ರೇಮಿಗಳ ಮದುವೆಗೆ ಎರಡೂ ಕುಟುಂಬಗಳಿಂದ ವಿರೋಧವಿತ್ತು. ಇಪ್ಪತ್ತು ದಿನಗಳ ಹಿಂದೆ ಪ್ರೇಮಿಗಳಿಬ್ಬರೂ ಊರಿನಿಂದ ಪರಾರಿಯಾಗಿದ್ದರು. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಅವರನ್ನು ಹುಡುಕಿ ರಾಜಿ ಪಂಚಾಯಿತಿ ಮಾಡಿ ಕಳಿಸಿದ್ದರು.
ಯುವತಿಗೆ 18 ವರ್ಷ ತುಂಬಿದ ಬಳಿಕ ಇಬ್ಬರಿಗೂ ಮದುವೆ ಮಾಡಿಸುವುದಾಗಿ ತೀರ್ಮಾನಿಸಿ, ತಂದೆಯ ಜೊತೆ ಚಂದ್ರಕಲಾಳನ್ನು ಕಳುಹಿಸಿಕೊಟ್ಟಿದ್ದರು. ಆದರೆ, ಮಂಗಳವಾರ ಆಕೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಹೇಳುತ್ತಿದ್ದು, ತಾಯಿಗೂ ಹೇಳದೆ ಅಂತ್ಯಕ್ರಿಯೆ ನಡೆಸಲಾಗಿದೆ. ಚಂದ್ರಕಲಾ ತಾಯಿ ನೀಡಿದ ದೂರಿನ ಹಿನ್ನಲೆಯಲ್ಲಿ ರಾಮನಗರ ಪೊಲೀಸರು ಯುವತಿಯ ತಂದೆ ಕೆಂಪೇಗೌಡ, ಚಿಕ್ಕಪ್ಪ ರಾಜು ಸೇರಿ ಆರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications